ಭೋಪಾಲ್: ಪತಿರಾಯನೊಬ್ಬ ತನ್ನ ಪತ್ನಿಯ ದುಂದು ವೆಚ್ಚಕ್ಕೆ ಬೇಸತ್ತು ಕೊಲೆ ಮಾಡಿಸಿರುವ ಘಟನೆಯೊಂದು ನಡೆದಿದೆ.
ತನ್ನ ಗೆಳೆಯರಿಗೆ ಸುಪಾರಿ ನೀಡಿ ಪತ್ನಿಯನ್ನು ಕೊಲೆ ಮಾಡಿಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ನಲ್ಲಿ ನಡೆದಿದೆ.
ದುರ್ಗಾವತಿ ಪತಿಯ ಸುಪಾರಿಯಿಂದ ಕೊಲೆಯಾದ ಮಹಿಳೆ. ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಹೇಮಂತ್ ಶರ್ಮಾ ತನ್ನ ಪತ್ನಿಯು ದುಂದುವೆಚ್ಚ ಮಾಡುತ್ತಿರುವುದಕ್ಕೆ ಬೇಸತ್ತಿದ್ದ. ಹೀಗಾಗಿ ಗೆಳೆಯರಿಗೆ 2.5 ಲಕ್ಷ ರೂ. ಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ.
ಕೊಲೆಯಾಗಿರುವ ದುರ್ಗಾವತಿ ಆ.13 ರಂದು ತಮ್ಮ ಸಹೋದರ ಸಂದೇಶನ ಜೊತೆಗೆ ಬೈಕ್ ಮೇಲೆ ದೇವಸ್ಥಾನಕ್ಕೆ ತೆರಳಿ ಮರಳಿ ಬರುತ್ತಿದ್ದ ವೇಳೆ ಹೇಮಂತ್ ಶರ್ಮಾನಿಗೆ ಪರಿಚಯವಿದ್ದವರು ಕಾರಿನಲ್ಲಿ ಬಂದು ಉದ್ದೇಶಪೂರ್ವಕವಾಗಿ ದುರ್ಗಾವತಿ ಚಲಿಸುತ್ತಿದ್ದ ಬೈಕ್ಗೆ ಗುದ್ದಿದ್ದಾರೆ. ಕೂಡಲೇ ಬೈಕ್ ಸವಾರರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಮಹಿಳೆ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆನಂತರ ಶರ್ಮಾ, ವಾಹನವೊಂದು ವೇಗವಾಗಿ ಬಂದು ಅಪಘಾತ ಮಾಡಿದೆ ಎಂದು ಹೇಳಿದ್ದ.
ಘಟನೆಯಾದ 10 ದಿನದ ನಂತರ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಹೇಮಂತ್ ಶರ್ಮಾನಿಗೆ ಪರಿಚಯವಿದ್ದ ವ್ಯಕ್ತಿಯ ಕಾರು ಬೈಕಿಗೆ ಉದ್ದೇಶಪೂರ್ವಕವಾಗಿ ಗುದ್ದಿರುವುದು ಗೊತ್ತಾಗಿದೆ. ತನಿಖೆ ವೇಳೆ ದುರ್ಗಾವತಿಯು ಹೇಮಂತ್ ಶರ್ಮಾನ ಎರಡನೇ ಹೆಂಡತಿ ಎಂದು ಗೊತ್ತಾಗಿದೆ. ಕೊಲೆಯ ಸಂದರ್ಭದಲ್ಲಿ ಮೂವರು ಆರೋಪಿಗಳು ಭಾಗವಹಿಸಿರುವುದು ಖಚಿತವಾಗಿದೆ. ಸದ್ಯಕ್ಕೆ ಹೇಮಂತ್ ಶರ್ಮಾ ಮತ್ತು ಕಾರು ಚಾಲಕನನ್ನು ಬಂಧಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.