ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ನಡೆದ ಸಾಮೂಹಿಕ ನಮಾಜ್ ಈಗ ದೇಶವ್ಯಾಪಕವಾಗಿ ಚರ್ಚೆಯ ವಿಷಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋಗಳು ಸಾರ್ವಜನಿಕ ಸ್ಥಳದಲ್ಲಿ ಸಾಮೂಹಿಕ ನಮಾಜ್ ನಡೆದಿರುವುದನ್ನು ತೋರಿಸಿದ್ದರಿಂದ ಹಲವು ವರ್ಗಗಳಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕ್ರಿಯೆಗಳು ನಡೆಯದಂತೆ ಯಾರು ನೋಡಿಕೊಳ್ಳಬೇಕು, ಯಾರು ಅನುಮತಿ ನೀಡಿದ್ದಾರೆ ಎಂಬ ಪ್ರಶ್ನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ರಾಷ್ಟ್ರೀಯ ಮಾಧ್ಯಮಗಳೂ ಈ ವಿಷಯವನ್ನು ಪ್ರಮುಖವಾಗಿ ಪ್ರಸಾರ ಮಾಡಿದ್ದು, ಘಟನೆ ಕುರಿತು ವಿಸ್ತೃತ ಚರ್ಚೆಗಳು ನಡೆಯುತ್ತಿವೆ.
ಘಟನೆ ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣ ಆಡಳಿತ ಈಗ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಟರ್ಮಿನಲ್ ಸುತ್ತಮುತ್ತ ಯಾವುದೇ ರೀತಿಯ ಅನಧಿಕೃತ ಚಟುವಟಿಕೆಗಳಾಗಬಾರದು ಎಂಬ ದೃಷ್ಟಿಯಿಂದ ಹೆಚ್ಚುವರಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಸಾಮಾನ್ಯವಾಗಿ ಪ್ರಯಾಣಿಕರ ಸಂಚಾರ ನಿರಂತರವಾಗಿರುವುದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ವಿಧದ ಗುಂಪು ಸೇರುವುದು ಸುರಕ್ಷತೆಯ ದೃಷ್ಟಿಯಿಂದ ಕೂಡಾ ಪ್ರಶ್ನೆಗೆ ಕಾರಣವಾಗಿದೆ. ಆದ್ದರಿಂದ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ನಿಯಮ ಪಾಲನೆಗೆ ಆದೇಶಿಸಲಾಗಿದೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮುಂದೇನು ತೀರ್ಮಾನ ಮಾಡುತ್ತಾರೆ ಎಂದು ಜನರು ಕಣ್ಣಿಟ್ಟಿದ್ದಾರೆ.








