ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಈಗ ಹೊಸ ನಿಯಮಗಳ ಸಂಕೋಲೆ ತೊಡಿಸಲಾಗಿದೆ. ಪ್ರತಿಯೊಬ್ಬ ಮನೆಯೊಡತಿಗೆ ಮಾಸಿಕ 2,000 ರೂಪಾಯಿ ನೀಡುವ ಈ ಯೋಜನೆಗೆ ಸರ್ಕಾರ ಈಗ ಬಯೋಮೆಟ್ರಿಕ್ ದೃಢೀಕರಣದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮೃತಪಟ್ಟ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ ಎಂಬ ತಾಂತ್ರಿಕ ಕಾರಣ ನೀಡಿ ಸರ್ಕಾರ ಈ ಹೆಜ್ಜೆ ಇಟ್ಟಿದ್ದರೂ, ಇದು ಈಗ ದೊಡ್ಡ ಮಟ್ಟದ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಈ ವಿಚಾರವಾಗಿ ಪ್ರತಿಪಕ್ಷ ಜೆಡಿಎಸ್ ಸೋಶಿಯಲ್ ಮೀಡಿಯಾ ಎಕ್ಸ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದೆ.
ಚುನಾವಣೆಯ ಸಂದರ್ಭದಲ್ಲಿ ಯಾವುದೇ ಷರತ್ತುಗಳಿಲ್ಲದೆ ಹಣ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬಂದ ಮೇಲೆ ತನ್ನ ಅಸಲಿ ಬಣ್ಣ ತೋರಿಸುತ್ತಿದೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ. ಬಡ ಮಹಿಳೆಯರಿಗೆ ಹಣ ತಲುಪದಂತೆ ಮಾಡಲು ಬಯೋಮೆಟ್ರಿಕ್ ಮತ್ತು ಸರ್ವರ್ ತಾಂತ್ರಿಕ ತೊಂದರೆಗಳ ನೆಪವೊಡ್ಡಲಾಗುತ್ತಿದೆ. ಈಗಾಗಲೇ 17 ಜಿಲ್ಲೆಗಳಲ್ಲಿ ಬರೋಬ್ಬರಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಯೋಜನೆಯಿಂದ ಹೊರಹಾಕುವ ಮೂಲಕ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಉತ್ತರವನ್ನು ಜೆಡಿಎಸ್ ತೀವ್ರವಾಗಿ ಟೀಕಿಸಿದೆ. ಯೋಜನೆಯ ಫಲಾನುಭವಿಗಳ ಕಡಿತದ ಬಗ್ಗೆ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರೆ, ತಮಗೆ ಈ ಬಗ್ಗೆ ಗೊತ್ತಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ರಾಜ್ಯದ ಆಡಳಿತ ನಡೆಸುವ ಸಿಎಂ ಅವರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಇಂತಹ ಗಂಭೀರ ಬದಲಾವಣೆಗಳ ಅರಿವಿಲ್ಲವೇ? ಅಥವಾ ಗೊತ್ತಿದ್ದೂ ನಾಟಕವಾಡುತ್ತಿದ್ದಾರೆಯೇ ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ಸುಮಾರು 5,000 ಕೋಟಿ ರೂಪಾಯಿ ಗೃಹಲಕ್ಷ್ಮಿ ಹಣವನ್ನು ಭ್ರಷ್ಟ ಸರ್ಕಾರ ನುಂಗಿ ಹಾಕಿದೆ ಎಂದು ಆರೋಪಿಸಿರುವ ಜೆಡಿಎಸ್, ಇದು ಕೇವಲ ಮತ ಬ್ಯಾಂಕ್ ಗಾಗಿ ಮಹಿಳೆಯರಿಗೆ ಮಾಡಿದ ವಂಚನೆಯಾಗಿದೆ ಎಂದು ಕಿಡಿಕಾರಿದೆ. ಅಧಿಕಾರ ಸಿಕ್ಕ ಮೇಲೆ ಮಹಿಳೆಯರನ್ನು ಅನರ್ಹರು ಎಂದು ಬೀದಿಗೆ ತಳ್ಳುವುದು ಯಾವ ರೀತಿಯ ಮಹಿಳಾ ಸಬಲೀಕರಣ ಎಂದು ಪ್ರಶ್ನಿಸಿದೆ. ಕೊಟ್ಟ ಮಾತಿಗೆ ತಪ್ಪಿದ ಕಾಂಗ್ರೆಸ್ ಸರ್ಕಾರ ಕೂಡಲೇ ನಾಡಿನ ತಾಯಂದಿರ ಕ್ಷಮೆಯಾಚಿಸಬೇಕು, ಜನತೆ ಈ ದ್ರೋಹವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.







