ಗುರು ರಾಘವೇಂದ್ರ ಬ್ಯಾಂಕಿನ ಮಾಜಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವಾಸುದೇವ ಮಯ್ಯ ಅವರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬ್ಯಾಂಕಿನ ಅವ್ಯವಹಾರದ ಹಗರಣ ಇದೀಗ ಸಿಐಡಿ ಬಾಗಿಲಲ್ಲಿ ಬಂದು ನಿಂತಿದೆ. ಉನ್ನತ ಮೂಲಗಳ ಪ್ರಕಾರ, ಮಯ್ಯ ಶವ ಅವರ ಕಾರಿನಲ್ಲಿ ಪತ್ತೆಯಾಗಿತ್ತು. ಅವರ ಮಗಳು ರಶ್ಮಿ ಎಚ್.ಹೇಮ್ಲೆ ಅವರು ನೀಡಿರುವ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್ಐಆರ್ ನಲ್ಲಿ ಉಲ್ಲೇಖವಾಗಿರುವ ಸಂತೋಷ್ ಕುಮಾರ್ ಎ ಮತ್ತು ಇತರೆ ನಿರ್ದೇಶಕರ ವಿಚಾರಣೆಯನ್ನು ಆರಂಭಿಸಲಾಗಿದೆ.
ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಹಾಲಿ ಸಿಇಒ ಸಂತೋಷ್ ಕುಮಾರ್ ಎ, ಇತರರಾದ ರಘುನಾಥ್, ರೆಡ್ಡಿ ಬ್ರದರ್ಸ್, ಎಸ್ಎಚ್ ಮೈನ್ಸ್, ರಜತ್, ಕುಮಾರೇಶ್, ತಲ್ಲಂ, ರವಿ ಐತಾಳ್, ರಾಕೇಶ್, ಶ್ರೀಪಾದ ಹೆಗಡೆ ಮತ್ತು ಪ್ರಶಾಂತ್ ಅವರು ತಮ್ಮ ತಂದೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಮಗಳು 2 ಜುಲೈ 2020 ರಂದು ದೂರು ನೀಡಿದ್ದರು.
ಮಯ್ಯ ಅವರು ಆರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ, ತಾನು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬರಲು ಎಂಟು ಮಂದಿ ಕಾರಣರು ಎಂದು ಬರೆದಿದ್ದರು. ಆಶ್ಚರ್ಯವೆಂದರೆ, ದೂರುದಾರರಿಂದ ಒತ್ತಡ ಇದ್ದಾಗ್ಯೂ ಪೊಲೀಸರು ಇದುವರೆಗೂ ಡೆತ್ ನೋಟ್ ಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನೂ ಬಹಿರಂಗಪಡಿಸಿಲ್ಲ.
ಪ್ರಕರಣದ ಗಂಭೀರತೆಯನ್ನು ಅರಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಪ್ರಕರಣದ ತನಿಖೆಯನ್ನು ನಡೆಸುವಂತೆ ಸಿಐಡಿಗೆ ಆದೇಶ ನೀಡಿದ್ದಾರೆ. ಅದರಂತೆ ಸಿಇಒ ಸೇರಿದಂತೆ ಹನ್ನೊಂದು ಮಂದಿ ಆರೋಪಿಗಳ ವಿಚಾರಣೆಯನ್ನು ಸಿಐಡಿ ತೀವ್ರಗೊಳಿಸಿದೆ. ಈ ಹನ್ನೊಂದು ಜನರ ಪೈಕಿ ಸಂತೋಷ್ ಅವರು 7 ಫೆಬ್ರವರಿ 2020 ರಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮಯ್ಯ ವಿರುದ್ಧ ದೂರು ನೀಡಿದ್ದರು. ಸಾಲಕ್ಕೆ ಶಿಫಾರಸು ಮಾಡುವುದು, ಹಣ ಬಿಡುಗಡೆ, ಠೇವಣಿದಾರರ ಹಣವನ್ನು ಬಳಕೆ ಮಾಡುವುದು ಮತ್ತು ಎನ್ ಪಿಎ ಅಕೌಂಟ್ ಗಳನ್ನು ಅಡ್ಜಸ್ಟ್ ಮಾಡುವುದು ಸೇರಿದಂತೆ ಮಯ್ಯ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂತೋಷ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಈ ಮೂಲಕ ಮಯ್ಯ ಅವರು ಠೇವಣಿದಾರರ ವಿಶ್ವಾಸಕ್ಕೆ ಕುಂದುಂಟಾಗುವ ರೀತಿಯಲ್ಲಿ ವಂಚನೆಗಳನ್ನು ಮಾಡಿದ್ದಾರೆ ಮತ್ತು ಕ್ರಿಮಿನಲ್ ಅಪರಾಧ ಎಸಗಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದರು.
ಇದೀಗ ಪ್ರಕರಣದ ತನಿಖೆ ವೇಗವನ್ನು ಪಡೆದುಕೊಂಡಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ, ಇಷ್ಟೊಂದು ಪ್ರಮಾಣದ ಹಗರಣವನ್ನು ಒಬ್ಬನೇ ವ್ಯಕ್ತಿ ಮಾಡಲು ಸಾಧ್ಯವೇ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡತೊಡಗಿದೆ.
ಆಡಳಿತ ಮಂಡಳಿಯ ಅನುಮೋದನೆಯನ್ನು ಪಡೆದ ನಂತರವಷ್ಟೇ ನಮ್ಮ ತಂದೆ ಸಾಲದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಕೆಲವರು ತಮ್ಮ ತಂದೆಯ ಪಾಸ್ವರ್ಡ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಬ್ಯಾಂಕಿಗೆ ತನಿಖೆಗಾಗಿ ಬಂದಿದ್ದ ಆರ್ ಬಿಐ ಅಧಿಕಾರಿಗಳು ಬಲವಂತವಾಗಿ ತಂದೆಯಿಂದ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ರಶ್ಮಿ ಆರೋಪಿಸಿದ್ದಾರೆ.
2012-18 ರ ಅವಧಿಯಲ್ಲಿ ಬ್ಯಾಂಕಿನಲ್ಲಿ 1400 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದಲ್ಲದೇ, 69 ಸಾಲಗಳಲ್ಲಿ 2876 ಖಾತೆಗಳಿಗೆ 1323 ಕೋಟಿ ರೂಪಾಯಿಗಳ ಸಾಲವನ್ನು ಮಂಜೂರು ಮಾಡಲಾಗಿದೆ ಎಂಬ ಆರೋಪವೂ ಇದೆ. ಈ ಭಾರೀ ಪ್ರಮಾಣದ ಅವ್ಯವಹಾರದ ಬಗ್ಗೆ ಗಮನಹರಿಸಿದ ಜಾರಿ ನಿರ್ದೇಶನಾಲಯವು ಇದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಂತೋಷ್ ಗೆ ಸಮನ್ಸ್ ನೀಡಿದೆ.








