Minister Dr. K. Sudhakar | ಸಮೀಕ್ಷೆ ಬಳಿಕ ಸಂತ್ರಸ್ತರಿಗೆ ಪರಿಹಾರ ವಿತರಣೆ
ಚಿಕ್ಕಬಳ್ಳಾಪುರ : ಕಳೆದ ಕೆಲ ದಿನಗಳಿಂದ ಶೇ.200ಕ್ಕೂ ಅಧಿಕ ಪಟ್ಟು ಮಳೆಯಾಗಿದ್ದು ಜಿಲ್ಲೆಯ ಹಲವು ರೈತರ ನಷ್ಟಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಂಗಳವಾರ ರೈತರ ಅಹವಾಲು ಆಲಿಸಿದ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಷ್ಟದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ಬಂದ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಬೆಳೆನಷ್ಟವಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗಿದೆ. ಕಳೆದ ನಾಲ್ಕು ದಶಕಗಳ ಹಿಂದೆ ಜಿಲ್ಲೆಯ ಸ್ಥಿತಿಯನ್ನು ಪ್ರಸ್ತುತ ಪರಿಸ್ಥಿತಿ ನೆನಪಿಸುವಂತಿದೆ. ರಸ್ತೆ, ನೆಲ ಎಂಬ ಯಾವುದೇ ವ್ಯತ್ಯಾಸವಿಲ್ಲದೆ ನೀರು ಹರಿಯುತ್ತಿರುವುದು ಒಂದು ಕಡೆ ಸಂತಸ ತಂದರೂ ರೈತರಿಗೆ ಆಗಿರುವ ನಷ್ಟ ಬೇಸರ ತರಿಸಿದೆ ಎಂದರು.

ರೈತರಿಗೆ ಮುಂದಿನ ದಿನಗಳಲ್ಲಿ ಅನಕೂಲ ಆಗಲಿದೆ
ತಕ್ಷಣಕ್ಕೆ ರೈತರಿಗೆ ನಷ್ಟ ಆಗಿರುವುದು ಬೇಸರ ತರಿಸುತ್ತಿದೆ. ಆದರೆ ಎಚ್ಎನ್ ವ್ಯಾಲಿ ಯೋಜನೆ ಜೊತೆಗೆ ಇತ್ತೀಚಿಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶೇಖರಣೆಯಾಗಿರುವ ನೀರು ದೀರ್ಘ ಕಾಲಕ್ಕೆ ಸಹಕಾರಿಯಾಗಲಿದೆ ಎಂದರು.
ಕಳೆದ ಒಂದು ವರ್ಷದಿಂದ ರೈತರು ಕೊಳವೆ ಬಾವಿ ಕೊರೆಸುವುದು ನಿಂತಿದೆ. ಇದರಿಂದ ರೈತರಿಗೆ ಆರ್ಥಿಕ ಉಳಿತಾಯ ಆಗುತ್ತಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಪ್ರಗತಿಪರ ರೈತರಿದ್ದಾರೆ, ಇಷ್ಟು ದಿನ ನೀರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದ ರೈತರಿಗೆ ಈಗ ನೀರು ಲಭಿಸಿದೆ. ಇದರಿಂದ ಅವರು ಕೃಷಿಯಲ್ಲಿ ಉತ್ತಮ ಸಾಧನೆ ಮಾಡುವ ಜೊತೆಗೆ ರಾಜ್ಯಕ್ಕೆ ಕೊಡುಗೆ ನೀಡಲಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಅಧಿಕ ಮಳೆಯಾಗುತ್ತಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆಯಲ್ಲಿ ಅಧಿಕ ಮಳೆಯಾಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿಗಳು ಬಂದು ರಾಜಕಾಲುವೆಗಳ ಬಗ್ಗೆ ವಿಸ್ತೃತ ವರದಿ ಪಡೆದಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.








