ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುವ ವೈದ್ಯರಿಗೆ ಎಚ್ಚರಿಕೆ ನೀಡಿದ ಸಚಿವ ಸುಧಾಕರ್
ಬೆಂಗಳೂರು, ಜೂನ್, 24: ಕೊರೊನಾ ಸೋಂಕಿತರಿಗೆ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಅವರನ್ನು ಕಡ್ಡಾಯವಾಗಿ ಕೋವಿಡ್ ಸೆಂಟರ್ಗಳಿಗೆ ಸ್ಥಳಾಂತರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದೂ ಟ್ವೀಟ್ ಮಾಡಿ ವಾರ್ನಿಂಗ್ ನೀಡಿದ್ದಾರೆ.
ತಮ್ಮ ತಂದೆ, ಪತ್ನಿ ಮತ್ತು ಪುತ್ರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಸಚಿವರು ಮಂಗಳವಾರ ತಮ್ಮ ಮನೆಯಿಂದಲೇ ಹಿರಿಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಕೊರೊನಾ ಸೋಂಕಿನ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಿದರು. ಜೊತೆಗೆ ಸಚಿವ ಡಾ.ಕೆ ಸುಧಾಕರ್ ತಮ್ಮ ಕುಟುಂಬದವರು ಗುಣಮುಖರಾಗಲೆಂದು ಹಾರೈಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದು, ಟ್ವಿಟರ್ ನಲ್ಲಿ ನನ್ನ ತಂದೆ, ಪತ್ನಿ ಮತ್ತು ಪುತ್ರಿಗೆ ಗುಣಮುಖರಾಗುವಂತೆ ಹಾರೈಸಿದ ಎಲ್ಲರಿಗೂ ನಾನು ಚಿರ ಋಣಿ. ನಿಮ್ಮ ಹಾರೈಕೆಯೇ ನಮ್ಮ ಶ್ರೀ ರಕ್ಷೆ ಎಂದಿದ್ದಾರೆ.
ಅಷ್ಟೇ ಅಲ್ಲ ತಮಗೆ ಕರೆ ಮಾಡಿ ಧೈರ್ಯ ತುಂಬಿದ ಕೇಂದ್ರ ಸಚಿವ ಅಮಿತ್ ಶಾ ಅವರಿಗೂ ಧನ್ಯವಾದ ಹೇಳಿರುವ ಸುಧಾಕರ್, ಕೇಂದ್ರ ಸಚಿವ ಅಮಿತ್ ಶಾ ಅವರು ಫೋನ್ ಮಾಡಿ ಕರೊನಾ ಸೋಂಕಿಗೆ ಒಳಗಾಗಿರುವ ನನ್ನ ತಂದೆ, ಪತ್ನಿ ಮತ್ತು ಮಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ತಮ್ಮ ಎಡೆಬಿಡದ ಕೆಲಸಕಾರ್ಯಗಳ ಮಧ್ಯೆ ನನ್ನ ಮತ್ತು ನನ್ನ ಕುಟುಂಬದ ಒಳಿತಿಗೆ ಕಾಳಜಿ ತೋರಿ ಶುಭ ಹಾರೈಸಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.