Minister V. Somanna | ಅಧಿಕಾರವನ್ನು ಬಡವರ ಸೇವೆಗಾಗಿ ಮುಡಿಪಾಗಿಡಿ
ಬೆಂಗಳೂರು : ವಿಜಯನಗರದಲ್ಲಿರುವ ಟಾಪರ್ ಐಎಎಸ್ ಸಂಸ್ಥೆಯಲ್ಲಿ ತರಬೇತಿ ಹೊಂದಿ ಇತ್ತೀಚೆಗೆ ಭಾರತೀಯ ಅರಣ್ಯ ಸೇವೆ, ಕರ್ನಾಟಕ ಆಡಳಿತ ಸೇವೆ, ಕರ್ನಾಟಕ ಪೊಲೀಸ್ ಸೇವೆ ಸೇರಿದಂತೆ ಇತ್ಯಾದಿ ಸೇವೆಗಳಿಗೆ ಆಯ್ಕೆಯಾದ ಗೆಜೆಟೆಡ್ ಅಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಮತ್ತು ಸ್ಪರ್ಧಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರವನ್ನು ಮಾನ್ಯ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ.ಸೋಮಣ್ಣ ರವರು ಇಂದು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು ಇಲ್ಲಿಯವರೆಗೂ ಅಧಿಕಾರಿಗಳಾಗುವ ಆಸೆ ಮತ್ತು ಜವಾಬ್ದಾರಿ ನಿಮ್ಮ ಮೇಲೆ ಇತ್ತು. ಆದ್ರೆ ಈಗ ಅಧಿಕಾರಿಗಳಾಗಿ ಒಮ್ಮೆ ಆಯ್ಕೆಗೊಂಡ ನಂತರ ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ. ಆಗ ಕೇವಲ ನಿಮ್ಮ ಕುಟುಂಬ ಮಾತ್ರ ನಿಮ್ಮನ್ನು ಗಮನಿಸುತ್ತಿತ್ತು. ಆದರೀಗ ಇಡೀ ನಾಡು ನಿಮ್ಮನ್ನು ಗಮನಿಸುತ್ತಿದೆ. ಆದ್ದರಿಂದ ಈ ದೇಶದ, ಈ ನಾಡಿನ ದೀನದಲಿತರು, ಬಡವರು ನಿಮ್ಮಿಂದಾಗುವಂತಹ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಕಾನೂನನ್ನು ಬಡವರ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಮತ್ತು ಅಧಿಕಾರ ಮತ್ತು ಸೇವೆಯನ್ನು ಸದಾ ಬಡವರ ಏಳಿಗೆಗಾಗಿ ಮುಡಿಪಾಗಿಟ್ಟರೆ ಮಾತ್ರ ತಮ್ಮ ಅಧಿಕಾರದ ಸಾಧನೆ ಸಾರ್ಥಕ ಅಂತ ಕಿವಿಮಾತನ್ನು ಹೇಳಿದರು.
ಸಚಿವರು ಮಾತನಾಡುತ್ತಾ ಯಾವುದೇ ಹಂತದಲ್ಲಿ ಎದುರಾಗುವ ಸವಾಲುಗಳಿಗೆ ಧೃತಿಗೆಡಬಾರದು. ಎಂತಹ ಸವಾಲುಗಳನ್ನಾದರೂ ಎದುರಿಸಬೇಕು ಅಂದರೆ ಮಾನಸಿಕ ಸ್ಥಿಮಿತತೆ, ಧೈರ್ಯ, ಕಾನೂನಿನ ಸ್ಪಷ್ಟ ಅರಿವು ಮತ್ತು ಬಡವರ ಪರ ನಿಜವಾದ ಕಾಳಜಿಯೇ ಅಸ್ತ್ರಗಳಾಗಬೇಕು. ಯಾವುದೇ ಕಾರಣಕ್ಕೂ ಅಧಿಕಾರ, ಹಣ, ಅಂತಸ್ತು ನಮ್ಮ ಆದ್ಯತೆ ಆಗಬಾರದು. ಅಧಿಕಾರಿಗಳಾದವರೂ ಸದಾ ಬಡವರ ಪರ ಚಿಂತನೆಯನ್ನು ಮಾಡಬೇಕು ಎಂದು ದಕ್ಷ ಅಧಿಕಾರಿಗಳ ಉದಾಹರಣೆಯನ್ನು ನೀಡಿದರು.
ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಒಂದೆರೆಡು ಪ್ರಯತ್ನಗಳಲ್ಲಿ ಸೋಲನ್ನು ಅನುಭವಿಸಿದರೂ ಯಾವುದೇ ಸಂದರ್ಭದಲ್ಲಿ ಧೃತಿಗೆಡಬಾರದು. ಸೋಲನ್ನೇ ಸಾಧನೆಯ ಮೆಟ್ಟಿಲನ್ನಾಗಿ ಬಳಸಿಕೊಂಡು ಯಶಸ್ಸಿನ ಪಥದತ್ತ ಮುನ್ನಡೆಯಬೇಕು ಎಂದರು.