ಸೌದಿ ಅರೇಬಿಯಾ ಮೇಲೆ ಕ್ಷಿಪಣಿ ದಾಳಿ – ಇಬ್ಬರು ಭಾರತೀಯರ ಸಾವು Saaksha Tv
ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ಮೇಲೆ ನಿರಂತರ ಕ್ಷಿಪಣಿ ದಾಳಿಗಳು ನಡೆಯುತ್ತಿದ್ದು, ಇದನ್ನು ಭಾರತ ತೀರ್ವವಾಗಿ ಖಂಡಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ಮೇಲೆ ಕ್ಷೀಪಣಿ ಮತ್ತು ಡ್ರೋನ್ ದಾಳಿಗಳಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ ಅಮಾಯಕ ನಾಗರಿಕರಿಗೆ ಗಾಯಗಳಾಗುತ್ತಿದ್ದು ಮತ್ತು ಸಾವಿಗೀಡಾಗುತ್ತಿರುವುದಕ್ಕೆ ಭಾರತ ತೀರ್ವ ವಿರೋಧ ವ್ಯಕ್ತಪಡಿಸಿದೆ.
ಬುಧವಾರ ನಡೆದ ಯುಎನ್ಎಸ್ಸಿ ಸಭೆಯಲ್ಲಿ ಯುಎನ್ನಲ್ಲಿನ ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ ಮಧ್ಯಪ್ರಾಚ್ಯ (ಯೆಮೆನ್) ಪರಿಸ್ಥಿತಿಯ ಕುರಿತು ತಿಳಿಸಿದರು. ರಾಷ್ಟ್ರವ್ಯಾಪಿ ಕದನ ವಿರಾಮದ ನಂತರವು, ಸಂಘರ್ಷ ಉಲ್ಬಣಗೊಳ್ಳುತ್ತಿದೆ. ಇದನ್ನು ತಗ್ಗಿಸಲು ಭಾರತದ ನಿರಂತರ ಕರೆ ನೀಡುತ್ತಿರುವ ಬಗ್ಗೆ ಭಾರತೀಯ ರಾಯಭಾರಿ ಪುನರುಚ್ಚರಿಸಿದರು.
ಕಳೆದ ತಿಂಗಳು ಯೆಮೆನ್ ಮೂಲದ ಹೌತಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದರು ಮತ್ತು ಇಬ್ಬರು ಗಾಯಗೊಂಡಿದ್ದರು. ಜನವರಿ 3 ರಂದು ಯುಎಇ ಧ್ವಜದ ಹಡಗನ್ನು ಯೆಮೆನ್ ಕರಾವಳಿಯಲ್ಲಿ ಹೌತಿಗಳು ಅಪಹರಿಸಿದ್ದರು. ಹಡಗಿನಲ್ಲಿದ್ದ 11 ಸಿಬ್ಬಂದಿಗಳಲ್ಲಿ ಏಳು ಮಂದಿ ಭಾರತೀಯರಾಗಿದ್ದರು. ಅವರು ಇನ್ನೂ ಹೌತಿ ಬಂಡುಕೋರರ ವಶದಲ್ಲಿದ್ದಾರೆ ಎಂದು ಸಭೆಯಲ್ಲಿ ಹೇಳಿದರು.
ಯೆಮೆನ್ನ ಸಂಘರ್ಷವು ಇಡೀ ಗಲ್ಫ್ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯ ಮೇಲೆ ಏರಿಳಿತದ ಪರಿಣಾಮಗಳನ್ನು ಸೃಷ್ಟಿಸುತ್ತಿದೆ ಎಂದು ಎತ್ತಿ ತೋರಿಸಿದ ಭಾರತದ ರಾಯಭಾರಿ, ಸುಮಾರು 9 ಮಿಲಿಯನ್ ಭಾರತೀಯರು ಗಲ್ಫ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಅವರ ಯೋಗಕ್ಷೇಮ ಮತ್ತು ಸುರಕ್ಷತೆಯು ಭಾರತಕ್ಕೆ ಶಾಶ್ವತ ಮಹತ್ವದ್ದಾಗಿದೆ ಎಂದು ಹೇಳಿದರು.
ಯೆಮನ್ನ ಗಡಿಯ ಹೊರಗೆ ಉದ್ದೇಶಪೂರ್ವಕವಾಗಿ ಸಂಘರ್ಷವನ್ನು ಹೆಚ್ಚಿಸಿರುವುದು ಮತ್ತು ಅನ್ಸಾರಲ್ಲಾ ಅವರ ಉತ್ತುಂಗಕ್ಕೇರಿದ ಪ್ರಚೋದನಕಾರಿ ವಾಕ್ಚಾತುರ್ಯವು ಶೋಚನೀಯವಾಗಿದೆ ಎಂದು ತಿರುಮೂರ್ತಿ ಹೇಳಿದರು.









