ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದರ ಹಿಂದೆ ಮೋದಿ, ಶಾ ಸಂಚು : ಖರ್ಗೆ
ಬೆಂಗಳೂರು : ಜನವರಿ 26 ರಂದು ಕೆಂಪುಕೋಟೆಯ ಮೇಲೆ ಬಾವುಟ ಹಾರಿಸಿದ ಘಟನೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಸಂಚಿದೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ.
ನೂತನ ಕಾರ್ಯಾದ್ಯಕ್ಷರಾದ ರಾಮಲಿಂಗಾರೆಡ್ಡಿ ಮತ್ತು ಧ್ರುವನಾರಾಯಣ್ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಜನವರಿ 26 ರಂದು ನಡೆದ ರೈತರ ಪ್ರತಿಭಟನೆ ಬಗ್ಗೆ ಉಲ್ಲೇಖಿಸಿದ್ರು.
ಸಾಮಾನ್ಯವಾಗಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್ ಇರುತ್ತದೆ. ಅದರಲ್ಲೂ ಗಣರಾಜ್ಯೋತ್ಸವ ದಿನದಂದು ಇನ್ನೂ ಹೆಚ್ಚಿನ ಭದ್ರತೆ ಇರುತ್ತೆ. ಹೀರುವಾಗಿ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ರೈತರು ಕೆಂಪುಕೋಟೆಯವರೆಗೂ ಹೋಗಲು ಬಿಟ್ಟಿದ್ದೇಕೆ..?
ನಿಮ್ಮ ಪೊಲೀಸರು ಹಾಗೂ ಗೃಹ ಸಚಿವರು ನಿದ್ದೆ ಮಾಡ್ತಾ ಇದ್ರಾ? ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಇದೇ ವೇಳೆ ಬಾವುಟ ಹಾರಿಸುವ ವೇಳೆ ಲೈವ್ ಮಾಡಿದ್ದ ವ್ಯಕ್ತಿ ಬಗ್ಗೆ ಮಾತನಾಡಿ, ಬಾವುಟ ಹಾರಿಸಿದ ಗುಂಪಿನ ನಾಯಕತ್ವ ವಹಿಸಿದ್ದ ವ್ಯಕ್ತಿ ಮೋದಿಯೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೋದಿ ಮನೆ ಅಂದ್ರೆ ಇಲಿ ಇರಲಿ, ಇರುವೆ ಕೂಡ ಪ್ರವೇಶಿಸಲು ಆಗದಂತಹ ಭದ್ರತೆ ಇರುತ್ತೆ. ಅಂತಹದ್ದರಲ್ಲಿ ಬಾವುಟ ಹಾರಿಸಿದ ಆರೋಪಿ ಪ್ರಧಾನಿ ಮನೆಗೆ ಹೋಗಿ ಮೋದಿ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ.
ಆದ್ರೂ ಆ ವ್ಯಕ್ತಿ ನನಗೆ ಪರಿಚಯವೇ ಇಲ್ಲ ಎಂದು ಮೋದಿ ಹೇಳುತ್ತಾರೆ. ಹಾದಿಬೀದಿಯಲ್ಲಿ ಹೋಗುವಾಗ ಸೆಲ್ಫಿ ತೆಗೆಸಿಕೊಂಡವರು ಪರಿಚಯ ಇಲ್ಲದೆ ಇರಬಹುದು, ಆದರೆ ಮನೆಯೊಳಗೆ ಬಂದು ಡ್ರಾಯಿಂಗ್ ರೂಂನಲ್ಲೇ ನಿಂತು ಫೋಟೋ ತೆಗೆಸಿಕೊಂಡವರು ಪರಿಚಯವಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.