ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ. ಒಂದು ಕವನದ ರೂಪದಲ್ಲಿ ಮೋದಿಯವರ ನಡೆಯನ್ನು ವಿಶ್ಲೇಷಿಸಿದ ಸಚಿವರು, ಪ್ರಧಾನಿಯವರಿಗೆ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ಗೌರವವಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.
ಮೋದಿ ಅವರಿಗೆ ವಿರೋಧ ಪಕ್ಷಗಳೇ ಇಲ್ಲದ ಏಕಚಕ್ರಾಧಿಪತ್ಯದ ಭಾರತ ಬೇಕಾಗಿದೆ. ಅವರಿಗೆ ಹೆಂಡತಿ ಇಲ್ಲದ ಜೀವನ ಹಾಗೂ ಮಕ್ಕಳಿಲ್ಲದ ಅಂಗಳ ಬೇಕು. ಸಂಸತ್ತಿನಲ್ಲಿ ತನ್ನನ್ನು ಯಾರೂ ಪ್ರಶ್ನಿಸಬಾರದು ಎಂಬ ಹಪಾಹಪಿ ಅವರಲ್ಲಿದೆ. ಹೀಗಾಗಿಯೇ ಅವರಿಗೆ ಪ್ರಶ್ನೆಗಳಿಲ್ಲದ ಸಂಸತ್ ಹಾಗೂ ತಪ್ಪುಗಳನ್ನು ಎತ್ತಿ ತೋರಿಸದ ಮಾಧ್ಯಮಗಳು ಬೇಕಾಗಿವೆ ಎಂದು ತಂಗಡಗಿ ವ್ಯಂಗ್ಯವಾಡಿದರು. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿಯವರಿಗೆ ಸರಿ ತಪ್ಪುಗಳನ್ನು ವಿವೇಚಿಸದ ಬುದ್ಧಿ ಇಲ್ಲದ ಭಕ್ತರು ಬೇಕಾಗಿದ್ದಾರೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
ಕಳೆದ ಹತ್ತು ವರ್ಷಗಳ ಸುದೀರ್ಘ ಆಡಳಿತದಲ್ಲಿ ಪ್ರಧಾನಿ ಮೋದಿ ಅವರು ಇದುವರೆಗೆ ಒಂದೇ ಒಂದು ಅಧಿಕೃತ ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಮುಕ್ತವಾಗಿ ಮಾಧ್ಯಮಗಳನ್ನು ಎದುರಿಸುವ ಧೈರ್ಯ ಅವರಿಗಿಲ್ಲ. ಕೇವಲ ಏಕಪಕ್ಷೀಯವಾಗಿ ಮಾತನಾಡುವುದು ಅವರಿಗೆ ರೂಢಿಯಾಗಿದೆ ಎಂದು ಸಚಿವರು ದೂರಿದರು. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದ ಸಾಂಸ್ಕೃತಿಕ ನೀತಿಯ ಬಗ್ಗೆಯೂ ಮಾಹಿತಿ ನೀಡಿದ ಸಚಿವರು, ಕರ್ನಾಟಕದಲ್ಲಿ ಹೊಸ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರಲು ಮಹತ್ವದ ಸಭೆ ನಡೆಸಲಾಗಿದೆ. ಸರ್ಕಾರದ ವಿವಿಧ ಉತ್ಸವಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಮತ್ತು ಅರ್ಹ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ದಿಷ್ಟ ಮಾನದಂಡಗಳನ್ನು ರೂಪಿಸಲಾಗಿದೆ. ಕಲಾವಿದರ ಹಿತರಕ್ಷಣೆ ಮತ್ತು ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.







