ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ ಇದೀಗ ರಾಜಕೀಯ ರಣರಂಗವಾಗಿ ಮಾರ್ಪಟ್ಟಿದೆ. ಬೆಂಗಳೂರಿನ ಜನರ ಜೀವನಾಡಿಯಾಗಿರುವ ಮೆಟ್ರೋ ದರವನ್ನು ಮತ್ತೆ ಏರಿಸಲು ಮುಂದಾಗಿರುವ ಬೆಳವಣಿಗೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ಷರಶಃ ಕೆಂಡಾಮಂಡಲವಾಗಿದ್ದಾರೆ.
ದೇಶದ ಅತ್ಯಂತ ದುಬಾರಿ ಮೆಟ್ರೋ ಎಂಬ ಅಪಖ್ಯಾತಿ
ರಾಜ್ಯ ಸರ್ಕಾರವು ಸತ್ಯವನ್ನು ಮರೆಮಾಚಿ ಪದೇ ಪದೇ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ ತೇಜಸ್ವಿ ಸೂರ್ಯ, ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಮೆಟ್ರೋ ದರದಲ್ಲಿ ಬರೋಬ್ಬರಿ ಶೇ. 71ರಷ್ಟು ಏರಿಕೆ ಮಾಡಲಾಗಿತ್ತು. ಆ ಆರ್ಥಿಕ ಹೊಡೆತದಿಂದ ಸಾಮಾನ್ಯ ಜನರು ಚೇತರಿಸಿಕೊಳ್ಳುವ ಮುನ್ನವೇ, ಮತ್ತೊಮ್ಮೆ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರ ಪಾಲಿನ ಸಾರಿಗೆಯಾಗಿದ್ದ ನಮ್ಮ ಮೆಟ್ರೋವನ್ನು, ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಕುಖ್ಯಾತಿಗೆ ರಾಜ್ಯ ಸರ್ಕಾರ ಗುರಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರದ ಮೇಲೆ ಗೂಬೆ ಕೂರಿಸುವ ನಾಟಕ ಬಂದ್ ಮಾಡಿ
ದರ ಏರಿಕೆಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ, ಇದು ಕೇಂದ್ರ ಸರ್ಕಾರದ ನಿರ್ಧಾರ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ತಿರುಗೇಟು ನೀಡಿದ ಸಂಸದರು, ದರ ನಿಗದಿ ಸಮಿತಿ (Fare Fixation Committee) ರಚನೆಯ ಅಸಲಿಯತ್ತನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕೇಂದ್ರ ಸರ್ಕಾರ ತಾನಾಗಿಯೇ ಬಂದು ಈ ಕಮಿಟಿ ರಚನೆ ಮಾಡಿಲ್ಲ. ರಾಜ್ಯ ಸರ್ಕಾರವೇ ಸ್ವತಃ ನಾಲ್ಕು ಬಾರಿ ಕೇಂದ್ರಕ್ಕೆ ಪತ್ರ ಬರೆದು, ನಮಗೆ ಆರ್ಥಿಕ ಹೊರೆಯಾಗುತ್ತಿದೆ, ಕೂಡಲೇ ದರ ಪರಿಷ್ಕರಣೆ ಸಮಿತಿ ರಚಿಸಿ ಎಂದು ಒತ್ತಡ ಹೇರಿದ ಬಳಿಕವಷ್ಟೇ ಈ ಸಮಿತಿ ರಚನೆಯಾಗಿದೆ. ಅಷ್ಟೇ ಅಲ್ಲದೆ, ಪ್ರತಿ ವರ್ಷವೂ ದರ ಏರಿಕೆ ಮಾಡಬೇಕೆಂದು ಸ್ವತಃ ರಾಜ್ಯ ಸರ್ಕಾರದ ಅಧಿಕಾರಿಗಳೇ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿ ಈಗ ಕೇಂದ್ರದ ಕಡೆ ಬೆರಳು ತೋರಿಸುವುದು ಹೇಡಿತನ ಎಂದು ಜರಿದರು.
ಗ್ಯಾರಂಟಿ ಹೆಸರಲ್ಲಿ ಬೊಕ್ಕಸ ಖಾಲಿ: ಈಗ ಜನರ ಮೇಲೆ ಬರೆ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸ ಸಂಪೂರ್ಣ ದಿವಾಳಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ ಸೂರ್ಯ, ಹಣಕಾಸಿನ ಮುಗ್ಗಟ್ಟು ಸರಿದೂಗಿಸಲು ಸರ್ಕಾರ ಮೆಟ್ರೋ ಪ್ರಯಾಣಿಕರನ್ನು ಬಲಿಪಶು ಮಾಡುತ್ತಿದೆ ಎಂದರು. ಈ ಹಿಂದೆ ಬಿಎಂಆರ್ಸಿಎಲ್ನ ಸಾಲದ ಬಡ್ಡಿ ಹೊರೆಯನ್ನು ತಗ್ಗಿಸಲು ರಾಜ್ಯ ಸರ್ಕಾರ ಶಾಡೋ ಕ್ಯಾಶ್ ಸಪೋರ್ಟ್ ನೀಡುತ್ತಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಈ ಆರ್ಥಿಕ ನೆರವನ್ನು ನಿಲ್ಲಿಸಲಾಗಿದೆ. ಮೆಟ್ರೋ ಸಂಸ್ಥೆಯ ಆರ್ಥಿಕ ಹೊರೆಯನ್ನು ನೇರವಾಗಿ ಜನಸಾಮಾನ್ಯರ ತಲೆಗೆ ಕಟ್ಟಲಾಗುತ್ತಿದೆ. ಇದು ಬಡವರಿಗೆ ಮಾಡುತ್ತಿರುವ ಪರಮ ಅನ್ಯಾಯ ಎಂದು ಅವರು ದೂರಿದರು.
ಏನ್ ತಿಂತೀರಿ ನೀವು? ನಾವೇನು ಅನಕ್ಷರಸ್ಥರಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಮುಂದೆ ದರ ಏರಿಕೆಯ ಹೊಣೆಯನ್ನು ಕೇಂದ್ರದ ಮೇಲೆ ಹಾಕಿದ್ದಕ್ಕೆ ತೀವ್ರ ಸಿಟ್ಟಾದ ತೇಜಸ್ವಿ ಸೂರ್ಯ, ಸಾರ್ವಜನಿಕವಾಗಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನಾವೇನು ಅನಕ್ಷರಸ್ಥರಾ? ನಮಗೆ ಓದಲು ಬರುವುದಿಲ್ಲವೇ? ಕೋರ್ಟ್ ಆದೇಶ ಮತ್ತು ಸರ್ಕಾರಿ ದಾಖಲೆಗಳಲ್ಲಿ ಏನಿದೆ ಎಂಬುದು ತಿಳಿಯುವುದಿಲ್ಲವೇ? ಮಾಧ್ಯಮಗಳ ಮುಂದೆ ಬಂದು ಹಸಿ ಸುಳ್ಳು ಹೇಳುತ್ತೀರಲ್ಲಾ, ನಿಮಗೆ ನಾಚಿಕೆ ಆಗಲ್ವಾ? ಏನ್ ತಿಂತೀರಿ ನೀವು? ಎಂದು ಅತ್ಯಂತ ಕಟುವಾದ ಶಬ್ದಗಳಲ್ಲಿ ಪ್ರಶ್ನಿಸಿದರು.
ಸೋಮವಾರದಿಂದ ಮೆಟ್ರೋ ನಿಲ್ದಾಣಗಳಲ್ಲಿ ಹೋರಾಟದ ಎಚ್ಚರಿಕೆ
ಚೆನ್ನೈನಲ್ಲಿ ಮೆಟ್ರೋ ಇದೆ, ಅಲ್ಲಿಯೂ ಕೇಂದ್ರ ಸರ್ಕಾರವೇ ಇದೆ. ಆದರೆ ಅಲ್ಲಿ ದರ ಏರಿಕೆಯಾಗಿಲ್ಲ, ಕರ್ನಾಟಕದಲ್ಲಿ ಮಾತ್ರ ಏಕೆ ಈ ದರ ಏರಿಕೆ? ಎಂದು ಪ್ರಶ್ನಿಸಿದ ಸಂಸದರು, ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು. ಸೋಮವಾರದಿಂದ ಜಾರಿಗೆ ತರಲು ಉದ್ದೇಶಿಸಿರುವ ದರ ಹೆಚ್ಚಳವನ್ನು ತಕ್ಷಣವೇ ತಡೆಹಿಡಿಯಬೇಕು. ದರ ಮರು ಪರಿಷ್ಕರಣೆಗೆ ಆಗ್ರಹಿಸಿ ಹೊಸ ಸಮಿತಿ ರಚನೆಗೆ ಪತ್ರ ಬರೆಯಬೇಕು. ಒಂದು ವೇಳೆ ದರ ಏರಿಕೆ ಕೈಬಿಡದಿದ್ದರೆ, ನಾಳೆಯಿಂದಲೇ ನಾವು ಮೆಟ್ರೋ ನಿಲ್ದಾಣಗಳಲ್ಲಿ ಕಪ್ಪು ಪಟ್ಟಿ ಧರಿಸಿ ಉಗ್ರ ಹೋರಾಟ ನಡೆಸುತ್ತೇವೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಗೆ ಹೋಗಿ ಪ್ರತಿಭಟಿಸುವ ನೀವು, ಮೆಟ್ರೋ ದರ ಇಳಿಕೆ ಬಗ್ಗೆ ಮಾತನಾಡಲು ಕೇಂದ್ರದ ಬಳಿ ನಿಯೋಗವನ್ನೇಕೆ ಕರೆದೊಯ್ಯುತ್ತಿಲ್ಲ ಎಂದು ಸವಾಲು ಹಾಕಿದರು.
ಇತ್ತ ಸಂಸದರ ಗಂಭೀರ ಆರೋಪಗಳ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನೇಮಕ ಮಾಡಿದ ಸಮಿತಿಯೇ ದರ ನಿಗದಿ ಮಾಡುತ್ತದೆ, ಅದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಚೆಂಡನ್ನು ಕೇಂದ್ರದ ಅಂಗಳಕ್ಕೆ ಎಸೆದು ಜಾರಿಕೊಂಡರು.








