ಬೆಂಗಳೂರು: ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ವೈಯಕ್ತಿಕ ನಿಂದನೆಗಳ ರಾಜಕೀಯ ಕೆಸರೆರಚಾಟಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರವೇಶಿಸಿದ್ದು, ಈ ಜಗಳ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರತಾಪ್ ಸಿಂಹ ಅವರನ್ನು ಗುರಿಯಾಗಿಸಿ ಖರ್ಗೆ ಮಾಡಿದ ಟ್ವೀಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ನೆಟ್ಟಿಗರು ಖರ್ಗೆ ಪ್ರತಿನಿಧಿಸುವ ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆ ಕಲಬುರಗಿಯ ಅಭಿವೃದ್ಧಿ ಕುರಿತು ನೇರ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಜಗಳದ ಹಿನ್ನೆಲೆ: ಅತಿರೇಕಕ್ಕಿಳಿದ ವಾಕ್ಸಮರ
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಪ್ರತಾಪ್ ಸಿಂಹ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ ಬಳಿಕ, ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ, “ಕತ್ತಲಲ್ಲಿ ಕಾಣದ, ಬೆಳಕಿನಲ್ಲಿ ಹೊಳೆಯದ ಮುಳ್ಳುಹಂದಿ ಮುಖದವನು,” ಎಂದು ಕಟುವಾಗಿ ಟೀಕಿಸಿದ್ದರು. ಅಷ್ಟಕ್ಕೆ ಸುಮ್ಮನಾಗದೆ, “ನಮ್ಮ ತಂದೆ ಯೌವ್ವನದ ಕಾಲದಲ್ಲಿ ಚಿಕ್ಕಬಳ್ಳಾಪುರದ ಕಡೆಗೆ ಬಂದಿದ್ದರೆ ನೀನು ಸಹ ಸುಂದರವಾಗಿ ಹುಟ್ಟುತ್ತಿದ್ದೆ,” ಎಂಬ ಅತ್ಯಂತ ವೈಯಕ್ತಿಕ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಕರ್ನಾಟಕ ರಾಜಕೀಯದಲ್ಲಿ ಚರ್ಚೆಯ ಮಟ್ಟ ಇನ್ನಷ್ಟು ಕುಸಿದಿರುವುದಕ್ಕೆ ಸಾಕ್ಷಿಯಾಯಿತು.
ಪ್ರತಾಪ್ ಸಿಂಹ ವಿರುದ್ಧ ಪ್ರಿಯಾಂಕ್ ಖರ್ಗೆ ಟ್ವೀಟ್ ವಾಗ್ದಾಳಿ
ಈ ಮಾತಿನ ಸಮರದ ನಡುವೆ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಟ್ವಿಟರ್ನಲ್ಲಿ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡರು.
“ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ, ಸುದ್ದಿಯಲ್ಲಿರಲು ಪ್ರತಿದಿನ ಮಾಧ್ಯಮಗಳ ಕೈಕಾಲು ಹಿಡಿದು ಪ್ರತಿಕ್ರಿಯೆ ಕೇಳಿ ಎಂದು ಅಂಗಲಾಚುತ್ತಿದ್ದಾರೆ ಎಂಬುದು ನಮ್ಮ ಮಾಧ್ಯಮ ಮಿತ್ರರ ‘ಆಫ್ ದಿ ರೆಕಾರ್ಡ್’ ವರದಿ,” ಎಂದು ಖರ್ಗೆ ವ್ಯಂಗ್ಯವಾಡಿದರು.
ಮುಂದುವರೆದು, “ಎಲ್ಲಾ ವಿಷಯಕ್ಕೂ ಬಾಯಿ ಹಾಕುವ ಪ್ರತಾಪ್ ಸಿಂಹ ಬಿಜೆಪಿಯ ಯಾವ ಹುದ್ದೆಯಲ್ಲಿದ್ದಾರೆ? ನನ್ನ ಅರ್ಹತೆ ಪ್ರಶ್ನಿಸುವ ಮೊದಲು, ಅವರಿಗೆ ಟಿಕೆಟ್ ನಿರಾಕರಿಸಿದ್ದೇ ಅವರ ಅನರ್ಹತೆಗೆ ಸಾಕ್ಷಿಯಲ್ಲವೇ? ನನ್ನ ಕಾರ್ಯವೈಖರಿಯ ಬಗ್ಗೆ ಕೇಂದ್ರ ಸರ್ಕಾರದ ದಾಖಲೆಗಳೇ ಮಾತನಾಡುತ್ತವೆ. ಪಂಚಾಯತ್ ರಾಜ್ ವಿಕೇಂದ್ರಿಕರಣ, ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಹ, ಐಟಿ ರಫ್ತಿನಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ ಎಂದು ಹೇಳಿದ್ದು ಇದೇ ಕೇಂದ್ರ ಸರ್ಕಾರ. ಪ್ರತಾಪ್ ಸಿಂಹ ಸ್ವಲ್ಪ ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಲಿ,” ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಮುಂದಿಟ್ಟರು.
ಅಲ್ಲದೆ, “ಅಂದಹಾಗೆ, ನಿಮ್ಮ ನರೇಂದ್ರ ಮೋದಿಯವರ ವಿದ್ಯಾರ್ಹತೆ ಏನು? ಸರ್ಟಿಫಿಕೇಟ್ ಎಲ್ಲಿದೆ? ‘ಕತ್ತಲೆ ಜಗತ್ತಿನ ರಹಸ್ಯಗಳು’ ಪುಸ್ತಕಕ್ಕೆ ತಡೆಯಾಜ್ಞೆ ತಂದಿರುವುದೇಕೆ? ಆ ಕರಾಳ ರಹಸ್ಯಗಳ ಬಗ್ಗೆ ನಿಮಗೇಕೆ ಭಯ?” ಎಂದು ಪ್ರತಾಪ್ ಸಿಂಹ ಅವರಿಗೆ ಖರ್ಗೆ ಮರುಪ್ರಶ್ನೆಗಳನ್ನು ಹಾಕಿದರು.
ಸಚಿವರಿಗೆ ಮುಳುವಾದ ಟ್ವೀಟ್: ನೆಟ್ಟಿಗರಿಂದ ತರ್ಲೆ, ತರಾಟೆ
ಪ್ರಿಯಾಂಕ್ ಖರ್ಗೆಯವರ ಟ್ವೀಟ್ ನಿರೀಕ್ಷಿತ ಪರಿಣಾಮ ಬೀರಲಿಲ್ಲ. ಬದಲಿಗೆ, ನೆಟ್ಟಿಗರು ಸಚಿವರನ್ನೇ ಗುರಿಯಾಗಿಸಿ ಟೀಕಾಪ್ರಹಾರ ನಡೆಸಿದರು. ಪ್ರತಾಪ್ ಸಿಂಹ ಮತ್ತು ಪ್ರದೀಪ್ ಈಶ್ವರ್ ಜಗಳವನ್ನು ಬದಿಗಿಟ್ಟ ಸಾರ್ವಜನಿಕರು, ಖರ್ಗೆಯವರ ಜವಾಬ್ದಾರಿಯನ್ನು ಪ್ರಶ್ನಿಸಿದರು.
“ಪ್ರತಾಪ್ ಸಿಂಹ ಒಬ್ಬ ಕೆಲಸಗಾರ, ನಿಮ್ಮದು ಬರೀ ಮಾತು,” ಎಂದು ಕೆಲವರು ಕುಟುಕಿದರೆ, ಹಲವರು ಕಲಬುರಗಿ ಜಿಲ್ಲೆಯ ಅಭಿವೃದ್ಧಿ ವಿಷಯವನ್ನು ಪ್ರಸ್ತಾಪಿಸಿದರು. “ದಕ್ಷಿಣ ಭಾರತದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕಲಬುರಗಿಗೆ ಕಳೆದ 60 ವರ್ಷಗಳಿಂದ ನಿಮ್ಮ ಕುಟುಂಬದ ಕೊಡುಗೆಯೇನು? ನಿಮ್ಮ ತಂದೆ (ಮಲ್ಲಿಕಾರ್ಜುನ ಖರ್ಗೆ) ಮತ್ತು ನೀವು ದಶಕಗಳಿಂದ ಜನಪ್ರತಿನಿಧಿಗಳಾಗಿದ್ದರೂ ಜಿಲ್ಲೆ ಯಾಕೆ ಹಿಂದುಳಿದಿದೆ?” ಎಂದು ಪ್ರಶ್ನಿಸಿದರು.
2024-25ರ ಅಂಕಿಅಂಶಗಳ ಪ್ರಕಾರ, ಕಲಬುರಗಿ ಜಿಲ್ಲೆಯ ವಾರ್ಷಿಕ ತಲಾ ಆದಾಯ ಕೇವಲ 1,60,000 ರೂ. ಅಂದರೆ, ತಿಂಗಳಿಗೆ ಸುಮಾರು 13,000 ರೂ. ಮಾತ್ರ. ಈ ದುಬಾರಿ ಕಾಲದಲ್ಲಿ ಇಷ್ಟು ಕಡಿಮೆ ಆದಾಯದಲ್ಲಿ ಬದುಕುವುದು ಹೇಗೆ? ಜಿಲ್ಲೆಯ ಬಡತನದ ಬಗ್ಗೆ ಮೊದಲು ಮಾತನಾಡಿ,” ಎಂದು ನೆಟ್ಟಿಗರು ಆಗ್ರಹಿಸಿದರು. “ನೀವು ಐಟಿ-ಬಿಟಿ ಸಚಿವರಾಗಿದ್ದೀರಿ, ನಿಮ್ಮ ಸ್ವಂತ ಜಿಲ್ಲೆ ಕಲಬುರಗಿಯಲ್ಲಿ ಐಟಿ ಕಂಪನಿಗಳನ್ನು ಸ್ಥಾಪಿಸಿ, ಅಲ್ಲಿನ ಯುವಕರಿಗೆ ಉದ್ಯೋಗ ನೀಡಲು ಯಾಕೆ ಸಾಧ್ಯವಾಗಿಲ್ಲ?” ಎಂದು ಹಲವರು ನೇರವಾಗಿ ಸವಾಲು ಹಾಕಿದ್ದಾರೆ.
ಇದೇ ವೇಳೆ, ಪ್ರದೀಪ್ ಈಶ್ವರ್ ಅವರು ಬಿಜೆಪಿಯ ನಾಲ್ವರು ಘಟಾನುಘಟಿ ನಾಯಕರನ್ನು ಅವರ ಕ್ಷೇತ್ರದಲ್ಲೇ ಸೋಲಿಸುವುದಾಗಿ ಹೊಸ ಸವಾಲು ಹಾಕಿದ್ದಾರೆ. ಜೊತೆಗೆ, ಸರ್ಕಾರಿ ಶಾಲೆಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಪ್ರಿಯಾಂಕ್ ಖರ್ಗೆ ಬರೆದ ಪತ್ರಕ್ಕೆ ತಮ್ಮ ಸಂಪೂರ್ಣ ಸಹಮತವಿದೆ ಎಂದು ಘೋಷಿಸಿ, ಖರ್ಗೆ ಅವರೊಂದಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ.
ಸಚಿವ ಸ್ಥಾನಕ್ಕೆ ಪೈಪೋಟಿ: ಚಿಕ್ಕಬಳ್ಳಾಪುರ ಜಿಲ್ಲೆಯ ಬಲಿಜ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿದ್ದು, ಈ ರೇಸ್ನಲ್ಲಿ ಪ್ರದೀಪ್ ಈಶ್ವರ್ ಮತ್ತು ಹಿರಿಯ ನಾಯಕ ಎಂ.ಆರ್. ಸೀತಾರಾಮ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
ಒಟ್ಟಿನಲ್ಲಿ, ಇಬ್ಬರು ನಾಯಕರ ನಡುವಿನ ವೈಯಕ್ತಿಕ ಜಗಳದಲ್ಲಿ ಮೂರನೆಯವರ ಪ್ರವೇಶವು, ಚರ್ಚೆಯ ದಿಕ್ಕನ್ನೇ ಬದಲಾಯಿಸಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜಕಾರಣಿಗಳನ್ನು ಅವರದ್ದೇ ಅಸ್ತ್ರದಿಂದ ಕಟ್ಟಿಹಾಕುವ ಪ್ರಯತ್ನ ನಡೆದಿದ್ದು, ಪ್ರಿಯಾಂಕ್ ಖರ್ಗೆಯವರ ಟ್ವೀಟ್ ಅವರಿಗೇ ತಿರುಗುಬಾಣವಾಗಿದೆ.








