ಬೆಂಗಳೂರು, ಮೇ 17 : ಮೈಶುಗರ್ ಕಂಪನಿಯ ಉಳಿವಿಗೆ ಪ್ಯಾಕೇಜ್ ಒಂದರ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿರುವ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಮೈಷುಗರ್ ಕಂಪನಿಯ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದು, ‘ ಮೈಷುಗರ್ ಉಳಿವಿಗೆ ಪ್ಯಾಕೇಜ್ ಅಗತ್ಯ. ರೈತರ ವಿರೋಧ, ರೈತಸಂಘದ ಆಕ್ಷೇಪ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರ ಎಚ್ಚರಿಕೆಗಳಿಗೆ ಮಣಿದಿರುವ ರಾಜ್ಯ ಸರ್ಕಾರ ಮಂಡ್ಯದ ಮೈಷುಗರ್ ಕಂಪನಿಯನ್ನು ಖಾಸಗಿಯವರಿಗೆ ಪರಬಾರೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ.
ಮೈಷುಗರ್ ಕಂಪನಿಯ ಸ್ಥಾಪನೆ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ,ಲಿಸ್ಟಿ ಕೋಲ್ಮನ್ ಹಾಗೂ ವಿಶ್ವೇಶ್ವರಯ್ಯನವರ ದೂರದೃಷ್ಟಿ ಇತ್ತು ಎಂಬುದನ್ನು ನಾನು ಕೇಳಿಬಲ್ಲೆ. ಅವರ ಕಾಲಮಾನದ ಈ ಕಾರ್ಖಾನೆ ಮಂಡ್ಯದ ಹೆಗ್ಗುರುತು. ಇದರ ಖಾಸಗಿ ಪರಾಬಾರೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದದ್ದು ತಪ್ಪು ನಿರ್ಧಾರವಾದರೂ ಈಗ ಅದರಿಂದ ಹಿಂದೆ ಸರಿದಿರುವುದು ಸ್ವಾಗತಾರ್ಹ. ಮಂಡ್ಯಕ್ಕೆ ಅನ್ವರ್ಥವಾಗಿರುವ ಮೈಷುಗರ್ ಕಂಪನಿಯ ಉಳಿವಿಗೆ ಯಾವುದೇ ಸರ್ಕಾರಗಳು ಶ್ರಮಿಸಬೇಕು. ಅದನ್ನು ಯಾವುದೇ ಹಂತದ್ದಲ್ಲಾದರೂ ಉಳಿಸಿಕೊಳ್ಳುವ
ಪ್ರಯತ್ನಗಳಾಗಬೇಕು. ಮೈಷುಗರ್ ಎಂಬುದು ಬರಿಯ ಕಾರ್ಖಾನೆಯಲ್ಲ ಅದು ಅಲ್ಲಿನ ರೈತರ ಬದುಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಜಿಲ್ಲೆಯಲ್ಲಿ ರೈತರು ಬೆಳೆದಿರುವ ಕಬ್ಬನ್ನು ಕಾರ್ಖಾನೆಗಳ ಅರೆಯುವ ಸಾಮರ್ಥ್ಯದ ಆಧಾರದ ಮೇಲೆ ಸರ್ಕಾರ ವಿತರಣೆ ಮಾಡಬೇಕು ಮತ್ತು, ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಸರ್ಕಾರ ಕಾರ್ಖಾನೆಯ ಕಾಯಕಲ್ಪಕ್ಕೆ ಪ್ಯಾಕೇಜ್ ಘೋಷಿಸಲಿ. ಇಂಥದ್ದೇ ಕಾರ್ಯ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಮಾಡಿತ್ತು. ಅದನ್ನಾದರೂ ಮುಂದುವರಿಸಲಿ. ಅಲ್ಲಿನ ರೈತರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಆಶಿಸುತ್ತೇನೆ. ಮಂಡ್ಯದ ಅಭಿವೃದ್ಧಿ ಎಂಬುದು ನಾಲಿಗೆ ತುದಿಯ ಆಡಂಬರ ಅಬ್ಬರವಾಗದೇ ಹೃದಯಾಂತರಾಳದಿಂದ ಚಿಮ್ಮವ ಜನಕ್ರಿಯೆಯಾಗಲಿ’ ಎಂದು ಬರೆದಿದ್ದಾರೆ.








