ವ್ಯಕ್ತಿಯ ಮೊದಲ ಪತ್ನಿಗೆ ಮಾತ್ರ ಆತನ ಆಸ್ತಿ ಮೇಲೆ ಹಕ್ಕು – ಬಾಂಬೆ ಹೈಕೋರ್ಟ್
ಮುಂಬೈ, ಅಗಸ್ಟ್28: ಒಬ್ಬ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು ಮತ್ತು ಇಬ್ಬರೂ ಆತನ ಆಸ್ತಿಗೆ ಹಕ್ಕು ಹೊಂದಿದ್ದರೆ, ಕಾನೂನಿನ ಪ್ರಕಾರ ಮೊದಲ ಪತ್ನಿ ಮಾತ್ರ ಆತನ ಹಣ ಮತ್ತು ಆಸ್ತಿಗೆ ಹಕ್ಕನ್ನು ಹೊಂದಿರುತ್ತಾಳೆ. ಆದರೆ ಎರಡನೇ ಪತ್ನಿಯ ಮಕ್ಕಳು ಆಸ್ತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಬಾಂಬೆ ಹೈಕೋರ್ಟ್ ಆದೇಶವನ್ನು ನೀಡಿದೆ.
![]()
ನ್ಯಾಯಮೂರ್ತಿಗಳಾದ ಎಸ್ ಜೆ ಕಥವಲ್ಲಾ ಮತ್ತು ಮಾಧವ್ ಜಮ್ದಾರ್ ಅವರನ್ನು ಒಳಗೊಂಡ ನ್ಯಾಯಪೀಠವು ಒಬ್ಬ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು ಆತ ಮೃತಪಟ್ಟರೆ, ಆ ವ್ಯಕ್ತಿಯ ಆಸ್ತಿಯಲ್ಲಿ ಪತ್ನಿಯರ ಪಾಲೆಷ್ಟು, ಮಕ್ಕಳ ಪಾಲೆಷ್ಟು ಎಂಬ ಅರ್ಜಿಯ ವಿಚಾರಣೆ ನಡೆಸಿ ಈ ಬಗ್ಗೆ ಮಹತ್ವದ ತೀರ್ಪು ನೀಡಿತು.
ಮೇ 30 ರಂದು ಕೋವಿಡ್-19 ನಿಂದ ನಿಧನರಾದ ಮಹಾರಾಷ್ಟ್ರ ರೈಲ್ವೆ ಪೊಲೀಸ್ ಪಡೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಸುರೇಶ್ ಹತಂಕರ್ ಅವರ ಎರಡನೇ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕಥವಾಲ್ಲಾ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು.

ಕರ್ತವ್ಯದಲ್ಲಿದ್ದಾಗ ಕೋವಿಡ್-19 ನಿಂದ ನಿಧನರಾದ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರದ ನಿರ್ಣಯದಂತೆ 65 ಲಕ್ಷ ರೂ.ಗಳ ಪರಿಹಾರದ ಭರವಸೆ ನೀಡುತ್ತಿದ್ದಂತೆ, ಇಬ್ಬರು ಮಹಿಳೆಯರು, ಹತಂಕರ್ ಅವರ ಪತ್ನಿಯರೆಂದು ಹೇಳಿಕೊಳ್ಳುತ್ತಾ, ಪರಿಹಾರದ ಮೊತ್ತಕ್ಕೆ ಹಕ್ಕನ್ನು ಸಾಧಿಸಿದ್ದರು.

ನಂತರ, ಹತಂಕರ್ ಅವರ ಎರಡನೇ ಪತ್ನಿಯ ಮಗಳಾದ ಶ್ರದ್ಧಾ, ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ಅವಳು ಮತ್ತು ಅವಳ ತಾಯಿ ಮನೆಯಿಲ್ಲದೇ ಕಷ್ಟದಲ್ಲಿದ್ದು ಪರಿಹಾರದ ಮೊತ್ತದ ಅನುಪಾತದ ಪಾಲನ್ನು ನೀಡಬೇಕೆಂದು ಕೋರಿದರು.
ಆಗ ನ್ಯಾಯಾಲಯವು, ಎರಡನೇ ಪತ್ನಿಗೆ ಏನೂ ಸಿಗುವುದಿಲ್ಲ ಎಂದು ಕಾನೂನು ಹೇಳುತ್ತದೆ. ಆದರೆ ಎರಡನೇ ಪತ್ನಿಯ ಮಕ್ಕಳು, ಮತ್ತು ಮೊದಲ ಪತ್ನಿ ಮತ್ತು ಮೊದಲ ಪತ್ನಿಯ ಮಕ್ಕಳು ಹಣ ಮತ್ತು ಆಸ್ತಿಗೆ ಅರ್ಹರಾಗಿರುತ್ತಾರೆ ಎಂದು ತೀರ್ಪು ನೀಡಿತು.








