ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಎಚ್ ವೈ ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಚುನಾವಣೆಗೆ ಮುನ್ನವೇ ಭಾರತೀಯ ಜನತಾ ಪಾರ್ಟಿ ರೂಪಿಸಿರುವ ಬೃಹತ್ ‘ಘರ್ ವಾಪ್ಸಿ’ ತಂತ್ರಗಾರಿಕೆ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ನಡುಕ ಹುಟ್ಟಿಸಿದೆ. ಇದು ಕೇವಲ ಒಂದು ಉಪಚುನಾವಣೆಯಾಗಿ ಉಳಿದಿಲ್ಲ, ಬದಲಾಗಿ ಎರಡು ರಾಷ್ಟ್ರೀಯ ಪಕ್ಷಗಳ ಬಲಾಬಲ ಪ್ರದರ್ಶನದ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ.
ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್, ತಲಾ 15 ಪ್ರಮುಖ ನಾಯಕರನ್ನು ಒಳಗೊಂಡ ಚುನಾವಣಾ ಉಸ್ತುವಾರಿ ಸಮಿತಿಗಳನ್ನು ರಚಿಸಿ ರಣಕಹಳೆ ಮೊಳಗಿಸಿವೆ. ಆದರೆ ಬಿಜೆಪಿಯ ಹೆಜ್ಜೆಗಳು ಅತ್ಯಂತ ಆಕ್ರಮಣಕಾರಿಯಾಗಿವೆ. ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳ್ಳಿಕೇರಿ ನೇತೃತ್ವದ ತಂಡವೊಂದು ಕಾಂಗ್ರೆಸ್ ನಾಯಕರನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಹೆಣೆದಿದೆ. 2013ರಿಂದ ವಿವಿಧ ಕಾರಣಗಳಿಗಾಗಿ ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ಸೇರಿದ್ದ ಹಳೆಯ ನಾಯಕರ ಪಟ್ಟಿಯನ್ನು ಸಿದ್ಧಪಡಿಸಿರುವ ಈ ತಂಡ, ಖುದ್ದಾಗಿ ಅವರನ್ನು ಭೇಟಿಯಾಗಿ ಮತ್ತೆ ಮಾತೃಪಕ್ಷಕ್ಕೆ ಮರಳುವಂತೆ ಭಾವನಾತ್ಮಕವಾಗಿ ಆಹ್ವಾನ ನೀಡುತ್ತಿದೆ.
ಬಿಜೆಪಿಯ ಈ ‘ಘರ್ ವಾಪ್ಸಿ’ ಕಾರ್ಯಾಚರಣೆ ಅಲ್ಪಾವಧಿಯಲ್ಲೇ ಭಾರಿ ಯಶಸ್ಸು ಕಂಡಿದೆ. ಪ್ರಖರ ಹಿಂದುತ್ವವಾದಿ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಅವರನ್ನು ಮರಳಿ ಕರೆತರುವಲ್ಲಿ ಪಕ್ಷ ಯಶಸ್ವಿಯಾಗಿದೆ. ಉಪಚುನಾವಣೆಯಲ್ಲಿ ಪಕ್ಷೇತರ ಅಥವಾ ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವದಂತಿಗಳಿದ್ದ ಕಟಗೇರಿ ಅವರ ಮರುಸೇರ್ಪಡೆ ಬಿಜೆಪಿಗೆ ಆನೆಬಲ ತಂದಿದೆ.
ಇದರ ಬೆನ್ನಲ್ಲೇ, ದಿವಂಗತ ಎಚ್ ವೈ ಮೇಟಿ ಅವರ ದೂರದ ಸಂಬಂಧಿ ಹಾಗೂ ಖ್ಯಾತ ವೈದ್ಯ ಡಾ ದೇವರಾಜ ಪಾಟೀಲ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಮ್ಮುಖದಲ್ಲಿ ಮಾರ್ಚ್ 23 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದೆ. 2008ರಿಂದ ಸಕ್ರಿಯ ರಾಜಕಾರಣದಲ್ಲಿರುವ ಡಾ ಪಾಟೀಲರು, 2013 ಮತ್ತು 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಿ ತಮ್ಮ ಟಿಕೆಟ್ ತ್ಯಾಗ ಮಾಡಿದ್ದರು. ಆದರೆ 2023ರಲ್ಲಿಯೂ ಟಿಕೆಟ್ ವಂಚಿತರಾಗಿ ಕೊನೆ ಕ್ಷಣದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದರು. ಇದೀಗ ಅವರು ಬಿಜೆಪಿ ಪಾಳಯ ಸೇರುತ್ತಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಒಂದೆಡೆ ಬಿಜೆಪಿ ತನ್ನ ಆಪರೇಷನ್ ತೀವ್ರಗೊಳಿಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ತನ್ನ ಅತೃಪ್ತ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಪಡುತ್ತಿದೆ. ಯುವ ಮುಖಂಡ ಸಂತೋಷ ಹೊಕ್ರಾಣಿ ಬಿಜೆಪಿ ಸೇರುತ್ತಾರೆ ಎಂಬ ಬಲವಾದ ವದಂತಿಗಳು ಹಬ್ಬಿದ್ದವು. ಪರಿಸ್ಥಿತಿಯ ಗಂಭೀರತೆ ಅರಿತ ಸಚಿವ ಆರ್ ಬಿ ತಿಮ್ಮಾಪುರ ಅವರು, ಪಕ್ಷದ ಕಚೇರಿಯಲ್ಲಿಯೇ ತುರ್ತು ಸಭೆ ನಡೆಸಿ ಹೊಕ್ರಾಣಿ ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯಲ್ಲಿಯೂ ಎಂಎಲ್ ಸಿ ಪಿ ಎಚ್ ಪೂಜಾರ ಬಣದಲ್ಲಿ ಅಸಮಾಧಾನವಿದ್ದರೂ ಅದು ಸ್ಫೋಟಗೊಂಡಿಲ್ಲ. ಆದರೆ ಕಾಂಗ್ರೆಸ್ ಒಳಗೆ ಹೊಗೆಯಾಡುತ್ತಿರುವ ಭಿನ್ನಮತವನ್ನು ಪೂರ್ಣ ಪ್ರಮಾಣದಲ್ಲಿ ಬಂಡವಾಳವಾಗಿಸಿಕೊಳ್ಳಲು ಬಿಜೆಪಿ ರಣಹದ್ದಿನಂತೆ ಕಾಯುತ್ತಿದೆ.
ಈ ಉಪಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿದೆ. ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಸಂಪೂರ್ಣ ಹೊಣೆಯನ್ನು ಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಗಲಿಗೆ ವಹಿಸಲಾಗಿದೆ. ದಿವಂಗತ ಮೇಟಿ ಅವರ ಮೇಲಿನ ಅನುಕಂಪದ ಅಲೆ ಬಳಸಿಕೊಳ್ಳಲು ಅವರ ಕಿರಿಯ ಪುತ್ರ ಉಮೇಶ್ ಎಚ್ ಮೇಟಿ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಅಂತಿಮವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಮಾರ್ಚ್ 23 ರಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಭಾರಿ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಲಿದೆ. ಅಲ್ಲದೆ ಸಿಎಂ ಅವರು ಮಾರ್ಚ್ 23, 28 ಮತ್ತು 29 ರಂದು ಬರೋಬ್ಬರಿ ಮೂರು ದಿನಗಳ ಕಾಲ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ.
ಒಟ್ಟಿನಲ್ಲಿ ಬಾಗಲಕೋಟೆ ಉಪಚುನಾವಣೆ ಇದೀಗ ರೋಚಕ ಘಟ್ಟ ತಲುಪಿದೆ. ಬಿಜೆಪಿಯ ‘ಘರ್ ವಾಪ್ಸಿ’ ವೇಗವನ್ನು ತಡೆದು, ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ದೊಡ್ಡ ಸವಾಲು ಕಾಂಗ್ರೆಸ್ ಮುಂದಿದೆ. ಆಡಳಿತ ಪಕ್ಷವನ್ನು ಅವರದೇ ನೆಲದಲ್ಲಿ ಮಣಿಸಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸುವ ತವಕದಲ್ಲಿ ಕಮಲ ಪಡೆಯಿದೆ. ಮುಂಬರುವ ದಿನಗಳಲ್ಲಿ ಈ ರಾಜಕೀಯ ಹೈಡ್ರಾಮಾ ಇನ್ನಷ್ಟು ಕುತೂಹಲಕಾರಿ ತಿರುವುಗಳನ್ನು ಪಡೆಯುವುದು ನಿಶ್ಚಿತ.








