ಸಾರ್ವಭೌಮ ಭಾರತದ ನೆಲದಲ್ಲಿ ಲಷ್ಕರ್ ಎ ತೊಯ್ಬಾ, ಹಿಜ್ಬುಲ್ ಮುಜಾಹಿದ್ದೀನ್, ಜೈಷ್ ಎ ಮೊಹ್ಮದ್ ಎಂಬ ಪರಮ ಪಾಪಿ ಉಗ್ರ ಸಂಘಟನೆಗಳು ನಡೆಸಿದ ಭಯೋತ್ಪಾದಕ ಕೃತ್ಯಗಳಿಗೆ ಉತ್ತರ ಆಪರೇಷನ್ ಸಿಂಧೂರ್..
ಪಹಲ್ಗಾಮ್ ಪ್ರವಾಸಿಗರ ಮೇಲೆ ದಾಳಿ ಮಾಡಿದ 16 ದಿನಗಳೊಳಗೆ ಭಾರತದ ಮಿಲಿಟರಿಯ ಪ್ರತ್ಯುತ್ತರವೇ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಲಷ್ಕರ್-ಎ-ತೈಬಾ (ಎಲ್ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ) ನ ಒಂಬತ್ತು ಭಯೋತ್ಪಾದನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿರುವ ಆಪರೇಷನ್ ಸಿಂಧೂರ್.
ನಿನ್ನೆ ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಮುರಿಡ್ಕೆ, ಬರ್ನಾಲಾ ಮತ್ತು ಮುಜಫರಾಬಾದ್ನಲ್ಲಿರುವ ಪ್ರಮುಖ ಲಷ್ಕರ್ ಶಿಬಿರಗಳನ್ನು ಹೊಡೆದುರುಳಿಸಲಾಗಿದೆ.
ಮರ್ಕಜ್ ತೈಬಾ, ಮುರಿಯ್ಕೆ, ಮರ್ಕಜ್ ಅಹ್ಲೆ ಹದೀಸ್, ಬರ್ನಾಲಾ ಮತ್ತು ಶವಾಯಿ ನಲ್ಲ ಕ್ಯಾಂಪ್, ಮುಜಫರಾಬಾದ್ನಲ್ಲಿರುವ ಲಷ್ಕರ್ ನ ಉಗ್ರರ ನೆಲೆ ಹಾಗೂ ತರಬೇತಿ ಶಿಬಿರಗಳ ಮೇಲೆ ಭಾರತೀಯ ಪಡೆಗಳ ನಿಖರ ದಾಳಿ. ಪಾಕ್ ಸೇನಾ ನೆಲೆಯಾಗಲೀ ಅಥವಾ ನಾಗರೀಕ ವಸಾಹತು ಪ್ರದೇಶಗಳಾಗಲೀ ದಾಳಿಯ ಟಾರ್ಗೆಟ್ ಆಗದಂತೆ ಕೇವಲ ಉಗ್ರರ ನೆಲೆಗಳನ್ನೇ ಗುರಿಯಾಗಿಸಿ ನಡೆಸಿದ ನಿರ್ದಿಷ್ಟ ಆಕ್ರಮಣ.
***
ಲಷ್ಕರ್-ಎ-ತೈಬಾ ಎಂಬ ರಕ್ಕಸ ಸಂತಾನವನ್ನು 1985 ರಲ್ಲಿ ಹುಟ್ಟು ಹಾಕಿದವನು ಹಫೀಜ್ ಸಯೀದ್ ಎಂಬ ನರರಾಕ್ಷಸ. ಒಸಾಮಾ ಬಿನ್ ಲಾಡೆನ್ ಎಂಬ ಜಾಗತಿಕ ಭಯೋತ್ಪಾದಕನ ಕೊಡುಗೆಯೂ ಎಲ್ಇಟಿ ಸ್ಥಾಪನೆಗೆ ಗಮನಾರ್ಹ. ಈ ಭಯೋತ್ಪಾದಕ ಸಂಘಟನೆಯ ಸ್ಥಾಪನೆಗೆ ಹಣಕಾಸು ಒದಗಿಸಿದವನೇ ಒಸಾಮ.
ಭಾರತದಲ್ಲಿ ಎಲ್ಇಟಿ ನಡೆಸಿದ ಪ್ರಮುಖ ಭಯೋತ್ಪಾದಕ ದಾಳಿಗಳು:
1980 ರ ದಶಕದಿಂದ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಮತ್ತು ನಾಗರಿಕರ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ ಪಾಪಿ ಲಷ್ಕರ್. ಸೋವಿಯತ್-ಆಫ್ಘನ್ ಯುದ್ಧದ ಹಿನ್ನೆಲೆಯಲ್ಲಿ ರೂಪುಗೊಂಡ ಎಲ್ಇಟಿ, ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಮತ್ತು ನಾಗರಿಕರ ವಿರುದ್ಧ ನಡೆಸಿದ್ದ ಘಾತಕ ದಾಳಿಗಳ ಪಟ್ಟಿ ದೊಡ್ಡದಿದೆ.
ಡಿಸೆಂಬರ್ 2000 ರ ಕೆಂಪು ಕೋಟೆ ದಾಳಿ: ದೆಹಲಿಯ ಕೆಂಪು ಕೋಟೆಯಲ್ಲಿ ಎಲ್ಇಟಿ ಭಯೋತ್ಪಾದಕರು ಎರಡು ಭಾರತೀಯ ಸೇನಾ ಜವಾನರು ಮತ್ತು ಒಬ್ಬ ನಾಗರಿಕನನ್ನು ಗುಂಡಿಕ್ಕಿ ಹತ್ಯೆ.
2005 ರ ದೆಹಲಿ ಸ್ಫೋಟ: ದೆಹಲಿಯ ಸರೋಜಿನಿ ನಗರ ಮಾರುಕಟ್ಟೆ, ಗೋವಿಂದಪುರಿ ಮತ್ತು ಪಹರ್ಗಂಜ್ನಲ್ಲಿ ನಡೆದ ಮೂರು ಸ್ಫೋಟಗಳಲ್ಲಿ 62 ಜನರ ಸಾವು ಮತ್ತು 210 ಜನರಿಗೆ ಗಾಯ.
26/11 ಮುಂಬೈ ದಾಳಿಗಳು: 2008 ರ ಮುಂಬೈ ದಾಳಿಯಲ್ಲಿ 166 ಜನರ ಸಾವು ಮತ್ತು 300 ಜನರಿಗೆ ಗಾಯ.
7/11 ಮುಂಬೈ ಲೋಕಲ್ ರೈಲು ಸ್ಫೋಟಗಳು: ಮುಂಬೈ ಲೋಕಲ್ ರೈಲುಗಳಲ್ಲಿ 10 ನಿಮಿಷಗಳ ಅವಧಿಯಲ್ಲಿ ಏಳು ಸ್ಫೋಟಗಳು ಸಂಭವಿಸಿ 189 ಜನರ ದಾರುಣ ಹತ್ಯೆ.
ಪುಣೆ ಜರ್ಮನ್ ಬೇಕರಿ ಸ್ಫೋಟ: ಫೆಬ್ರವರಿ 13, 2010 ರಂದು ಪುಣೆ ಜರ್ಮನ್ ಬೇಕರಿ ಸ್ಫೋಟಕ್ಕೆ ಇದೇ ಎಲ್ಇಟಿಯಿಂದ ಕಣ್ಗಾವಲು ಮತ್ತು ದಾಳಿಯ ಯೋಜನೆ.
***
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಯಶಸ್ವಿಯಾಗಿ ತಟಸ್ಥಗೊಳಿಸಿದ ಒಂಬತ್ತು ಭಯೋತ್ಪಾದಕ ಶಿಬಿರಗಳ ಪಟ್ಟಿ ಇಲ್ಲಿದೆ:
1. ಮರ್ಕಝ್ ಸುಭಾನ್ ಅಲ್ಲಾ, ಬಹವಾಲ್ಪುರ್ – ಜೈಷ್ ಎ ಮೊಹ್ಮದ್ ನೆಲೆ
2. ಮರ್ಕಝ್ ತೈಬಾ, ಮುರಿಡ್ಕೆ – ಲಷ್ಕರ್ ಉಗ್ರ ನೆಲೆ
3. ಸರ್ಜಾಲ್, ತೆಹ್ರಾ ಕಲಾನ್ – ಜೈಷ್
4. ಮೆಹಮೂನಾ ಜೋಯಾ, ಸಿಯಾಲ್ಕೋಟ್ – ಹಿಜ್ಬುಲ್ ಮುಜಾಹಿದ್ದೀನ್.
5. ಮರ್ಕಝ್ ಅಹ್ಲೆ ಹದೀಸ್, ಬರ್ನಾಲಾ – ಲಷ್ಕರ್ ಎ ತೊಯ್ಬಾ.
6. ಮರ್ಕಜ್ ಅಬ್ಬಾಸ್, ಕೋಟ್ಲಿ – ಜೈಷ್
7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ – ಹಿಜ್ಬುಲ್
8. ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ – ಲಷ್ಕರ್
9. ಸೈಯದ್ನಾ ಬಿಲಾಲ್ ಕ್ಯಾಂಪ್, ಮುಜಫರಾಬಾದ್ – ಜೈಷ್ ಎ ಮೊಹ್ಮದ್.
***
ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಎಂಬ ಮೂರೂ ಉಗ್ರ ಸಂಘಟನೆಗಳ ಬೇರು ಕಿತ್ತು ಸುಣ್ಣದ ನೀರು ಹುಯ್ದು ಬರಲು ಇದೆ ಸುವರ್ಣವಕಾಶ. ಸಾವಿರಾರು ಅಮಾಯಕ ಭಾರತೀಯರ ಮಾರಣ ಹೋಮಕ್ಕೆ ಇದು ಪ್ರತಿಕಾರ..
ಜೈ ಇಂಡಿಯನ್ ಆರ್ಮಿ..
ವಿಶ್ವಾಸ್ ಭಾರಧ್ವಜ್








