ಸರಕಾರಿ ಶಾಲೆಯೆಂದೆರೆ ಅದೊಂದು ಅವ್ಯವಸ್ಥೆ, ಅಲ್ಲಿ ಯಾವುದೇ ರೀತಿಯಾದ ಉತ್ತಮ ಸೌಲಭ್ಯವಿಲ್ಲ , ಒಳ್ಳೆಯ ಶಿಕ್ಷಣವಿಲ್ಲ ಎಂದು ಯೋಚಿಸುವ ಜನರ ನಡುವೆ ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರು ಹಾಗೂ ಊರಿನ ಜನತೆಯ ಸಹಕಾರ ಇದ್ದೊಡನೆ ಅದು ಇತರೆ ಶಾಲೆಗಳಿಗೆ ಮಾದರಿಯಾಗುತ್ತದೆ ಎಂಬುದಕ್ಕೆ ಉತ್ತಮ ನಿದರ್ಶನ ಸರಕಾರಿ ಪ್ರಾಥಮಿಕ ಶಾಲೆ ಜಾರ್ಕಳ ಮುಂಡ್ಲಿ.. ಶಿಕ್ಷಣ, ಪಠ್ಯೇತರ ಚಟುವಟಿಕೆ,ಸ್ವಚ್ಚತೆ, ಮತ್ತಿತರ ನವೀನತೆಯ ವಿಷಯಗಳಲ್ಲಿ ಮಾದರಿಯಾಗಿ ಬೆಳೆಯುತ್ತಿರುವ ನಮ್ಮ ಈ ಶಾಲೆಗೆ ಭೇಟಿ ನೀಡುವವರನ್ನು ಮತ್ತೆ ಮತ್ತೆ ಬರುವಂತೆ ಆಕರ್ಷಿಸುವ ಅದೆಷ್ಟೋ ವಿಷಯಗಳಲ್ಲಿ ಒಂದು “ಬಾಟಲ್ ಗಾರ್ಡನಿಂಗ್“.
ಕಸದಿಂದ ರಸ ಎಂಬ ಮಾತು ಕೇವಲ ಘೋಷಣೆ, ಭಾಷಣಗಳಿಗೆ ಸೀಮಿತವಾಗಿರುವವರ ನಡುವೆ ಅದು ಸಾಧ್ಯ ಎಂದು ತೋರಿಸಿಕೊಡುತ್ತಿದೆ ಈ ಬಾಟಲ್ ಗಾರ್ಡನಿಂಗ್. ಪ್ಲಾಸ್ಟಿಕ್ ಬಳಕೆ ಜೀವರಾಶಿಗೆ ಮಾರಕವಾಗಿದೆ ಆದರೆ ನಾವು ಒಂದಲ್ಲ ಒಂದು ರೀತಿಯಲ್ಲಿ ಪ್ಲಾಸ್ಟಿಕ್ ನನ್ನು ಬಳಸಿಯೆ ಬಳಸುತ್ತೇವೆ ಅಂತಹವುಗಳಲ್ಲಿ ಬಾಟಲ್ ಗಳ ಬಳಕೆಯೂ ಒಂದು. ಆದರೆ ಅದನ್ನು ಬಳಸಿದ ನಂತರ ಎಲ್ಲೆಂದರಲ್ಲಿ ಬಿಸಾಡಿ ಪ್ರಕೃತಿಗೆ ಹಾನಿ ಮಾಡುವ ಬದಲು ಅದರಿಂದ ಒಂದು ತೆರನಾದ ಜೀವಿಯ ಬೆಳವಣಿಗೆಗೆ ಆಧಾರವಾಗಿ ಬಳಸಬಹುದು ಎಂದು “ಬಾಟಲ್ ಗಾರ್ಡನಿಂಗ್” ಮಾಡುವ ಮೂಲಕ ನಮ್ಮ ಈ ಶಾಲೆ ಜನರಿಗೆ ತಿಳಿಸಿಕೊಡುತ್ತಿದೆ. ಶಾಲೆಯ ಶಿಕ್ಷಕರಾದ ಪ್ರತಿಭಾ ಮೇಡಂ ಇವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಶಾಲೆಯಲ್ಲಿ ಆರಂಭಿಸಿಲಾಗಿದೆ. ಇದನ್ನು ನೋಡುವುದಕ್ಕಾಗಿಯೆ ಅದೆಷ್ಟೋ ಜನ ಶಾಲೆಗೆ ಭೇಟಿ ನೀಡುತ್ತಿದ್ದಾರೆ. ಈ ಯೋಜನೆಯಿಂದಾಗಿ ವಿದ್ಯಾರ್ಥಿಗಳಿಗೂ ಪ್ರಾಯೋಗಿಕವಾಗಿ ಒಂದು ಒಳ್ಳೆಯ ಶಿಕ್ಷಣ ದೊರೆಯುತ್ತಿದೆ. ಸ್ವತಃ ವಿದ್ಯಾರ್ಥಿಗಳೇ ಇದರ ಮಹತ್ವವನ್ನು ಅರಿತು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಚಾಕಲೇಟ್ ಹಂಚುವುದರಿಂದ ಅದರ ಸಿಪ್ಪೆಗಳಿಂದ ಮತ್ತಷ್ಟು ಪ್ಲಾಸ್ಟಿಕ್ ನ ರಾಶಿಯಾಗುತ್ತದೆ ಎಂದು ಅದರ ಬದಲು ತಮ್ಮ ಹುಟ್ಟು ಹಬ್ಬದ ನೆನಪಿಗಾಗಿ ಶಾಲೆಗೆ ಗಿಡ ನೀಡುವ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಇದು ವಿದ್ಯಾರ್ಥಿಗಳಲ್ಲೂ ಪರಿಸರ ರಕ್ಷಣೆಯ ಬಗೆಗೆ ಕಾಳಜಿಯನ್ನು ಬೆಳೆಸುವಲ್ಲಿ ಪ್ರೇರಣೆಯಾಗುತ್ತಿದೆ. ಬಾಟಲ್ ಗಾರ್ಡನಿಂಗ್ ಮಾತ್ರವಲ್ಲದೆ ಶಾಲೆಯ ಗೋಡೆಯಲ್ಲಿ ರಚಿತವಾಗಿರುವ ವರ್ಲಿ ಚಿತ್ರಣಗಳು, ಸಂಸ್ಕೃತಿಯನ್ನು ಬಿಂಬಿಸುವ ಕುಟೀರ ಶಿಕ್ಷಣ ಪದ್ದತಿ ಮುಂತಾದ ಶಾಲೆಯ ಪ್ರಗತಿಪರ ಚಿಂತನೆಗಳು ವಿದ್ಯಾರ್ಥಿಗಳನ್ನು ಮತ್ತಷ್ಟು ನವೀನತೆಯೆಡೆಗೆ ಸಾಗಲು ಪ್ರೇರೇಪಿಸುತ್ತಿದೆ.
ಶಿಕ್ಷಕರು ಹಾಗೂ ಊರಿನ ಜನತೆಯ ಸಹಕಾರ, ಪ್ರೋತ್ಸಾಹ, ಕಾರ್ಯವೈಖರಿಯಿಂದ ನಮ್ಮ ಶಾಲೆ ಪ್ರಗತಿಯತ್ತ ಸಾಗುತ್ತಿದ್ದು ಒಂದು ಮಾದರಿ ಶಾಲೆಯಾಗಿದೆ ಎನ್ನಲು ಬಹಳ ಹೆಮ್ಮೆಯಾಗುತ್ತದೆ.
ನಮ್ಮ ಶಾಲೆ ನಮ್ಮ ಹೆಮ್ಮೆ
ಬರಹ ✍🏻✍🏻
ನಳಿನಿ ಎಸ್ ಸುವರ್ಣ
ಜಾರ್ಕಳ ಮುಂಡ್ಲಿ