ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಜೈಲುಪಾಲಾಗಿದ್ದಾರೆ. ಆದರೆ, ಅವರ ಖೈದಿ ನಂಬರಿನಲ್ಲಿ ಮಗುವಿನ ಫೋಟೋ ಶೂಟ್ (Photo Shoot) ಮಾಡಿಸಿದ್ದ ಫೋಟೋಗಳು ವೈರಲ್ ಆಗಿದ್ದು, ಈಗ ಆ ಪಾಲಕರಿಗೆ ಸಂಕಷ್ಟ ಶುರುವಾಗಿದೆ.
ಆ ಮಗುವಿನ ಪಾಲಕರಿಗೆ ಬಿಸಿ ಮುಟ್ಟಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (State Commission for Protection of Child Rights) ಮುಂದಾಗಿದೆ. ದರ್ಶನ್ ಜೈಲು ಸೇರುತ್ತಿದ್ದಂತೆ ಹಲವು ಅಂಧಾಭಿಮಾನಿಗಳು ವಿಕೃತಿ ಮೆರೆಯುತ್ತಿದ್ದಾರೆ ಎಂಬ ರೀತಿಯಲ್ಲಿ ಸಮಾಜದಲ್ಲಿ ಭಾಸವಾಗುತ್ತಿದೆ. ಹೀಗೆ ಅಂಧಭಿಮಾನ ಪ್ರದರ್ಶನಕ್ಕೆ ಮುಂದಾಗಿ ಕಾನೂನಿನ ಕುಣಿಕೆಗೆ ಈಗ ಪೋಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವಿಚಾರ ಕುರತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ.
ಅಲ್ಲದೇ, ಆಯೋಗ ಪೊಲೀಸ್ ಇಲಾಖೆಯ ಮೂಲಕ ಪೋಷಕರ ಪತ್ತೆ ಕಾರ್ಯಕ್ಕೆ ಮುಂದಾಗಿದೆ. ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಫೋಟೋ ಶೂಟ್ ಮಾಡಿಸಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಪೊಲೀಸ್ ಇಲಾಖೆ ಐಟಿ ಸೆಲ್ ಪತ್ರ ಬರೆಯಲಾಗುತ್ತದೆ. ಫೋಟೋ ಶೂಟ್ ಮಾಡಿಸಿದವರ ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಈ ಪ್ರಕರಣ ಬಾಲ ನ್ಯಾಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಯಾವ ಕ್ರಮ ಕೈಗೊಳ್ಳುತ್ತಾರೆ ಕಾಯ್ದು ನೋಡಬೇಕಿದೆ.