ಡ್ರೋಣ್ ಪ್ರತಾಪ್ ಟ್ರೋಲ್ ಆಗಲು ಮೋದಿ ಕಾರಣವಂತೆ..!!
ದಾವಣಗೆರೆ : ಡ್ರೋಣ್ ಪ್ರತಾಪ್, ಸದ್ಯದ ಟಾಕ್ ಆಫ್ ದಿ ಟೌನ್. ಆನ್ ಲೈನಲ್ಲೂ ಡ್ರೋಣ್ ಪ್ರತಾಪ್, ಆಫ್ ಲೈನಲ್ಲೂ ಡ್ರೋಣ್ ಪ್ರತಾಪ್, ಸದ್ಯ ಎಲ್ಲೆಲ್ಲೂ ಇವನದ್ದೇ ಸುದ್ದಿ. ಆದ್ರೆ ಮಂಡ್ಯದ ಮೂಲದ ಪ್ರತಾಪ್ ಈ ರೀತಿಯಾಗಿ ಯದ್ವಾತದ್ವಾ ಟ್ರೋಲ್ ಆಗಲು ಪ್ರಧಾನಿ ನರೇಂದ್ರ ಮೋದಿ ಕಾರಣವಂತೆ.
ಹೀಗಂತ ದಾವಣಗೆರೆಯ ಹೋಟೆಲ್ ಮಾಲೀಕರೊಬ್ಬರು ಸುದ್ದಿಗಾರರಿಗೆ ಹೇಳಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ನನಗೆ ಫೋನ್ ಮಾಡಿ ನೌಕರಿಯ ಆಫರ್ ಕೊಟ್ಟಿದ್ದಾರೆ. ಅದನ್ನು ತಿರಸ್ಕರಿಸಿದರೆ ಟೀಕೆಗಳಿಗೆ ಒಳಗಾಗುತ್ತೇನೆ ಎಂದು ಡ್ರೋಣ್ ಪ್ರತಾಪ್ ಹೇಳಿದ್ದರು’ ಎಂದು ಶ್ರೀಗಂಧ ರೆಸಿಡೆನ್ಸಿ ಹೋಟೆಲ್ನ ಮಾಲೀಕ ವಿನಾಯಕ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡರು.
ಅಲ್ಲದೆ ಜುಲೈ 1ರಿಂದ 8ರವರವರೆಗೆ ತಮ್ಮ ಹೋಟೆಲ್ ನಲ್ಲಿಯೇ ಪ್ರತಾಪ್ ವಾಸ್ತವ್ಯ ಹೂಡಿದ್ದರು ಎಂದು ತಿಳಿಸಿರುವ ಹೋಟೆಲ್ ಮಾಲೀಕರು ತಮ್ಮೊಂದಿಗೆ ಪ್ರತಾಪ್ ಹಂಚಿಕೊಂಡಿದ್ದ ಕೆಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ.
ವಿನಾಯಕ್ ಅವರು ಹೇಳುವ ಪ್ರಕಾರ, ಡ್ರೋಣ್ ಪ್ರತಾಪ್ ಅವರಿಗೆ ‘ಪ್ರಧಾನಿ ದೂರವಾಣಿ ಕರೆ ಮಾಡಿ ಡಿಆರ್ಡಿಒದಲ್ಲಿ ಉದ್ಯೋಗದ ಆಫರ್ ನೀಡಿದ್ದರಂತೆ. ಈ ವಿಷಯವನ್ನು ಪ್ರತಾಪ್, ವಿನಾಯಕ್ ಅವರೊಂದಿಗೆ ಹಂಚಿ ಡಿದ್ದರಂತೆ. ‘ಮೋದಿ ಅವರ ಆಫರ್ ಅನ್ನು ತಿರಸ್ಕರಿಸಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತೇನೆ. ಮಾಧ್ಯಮಗಳು ಕರೆ ಮಾಡಿ ಕೇಳಿದರೂ ನನಗೆ ಆಫರ್ ಬಂದಿಲ್ಲ ಎಂದೇ ಹೇಳುತ್ತೇನೆ’ ಎಂದು ಪ್ರತಾಪ್ ಹೇಳಿದ್ದರಂತೆ.
ಇದೇ ವೇಳೆ ‘ಪ್ರತಾಪ್ ರಾತ್ರಿ ಎಲ್ಲಾ ವಿಡಿಯೊ ಕಾಲ್ನಲ್ಲೇ ಇರುತ್ತಿದ್ದರು. ಮೂರು ದಿನಗಳ ಹಿಂದೆ ನನಗೆ ದೂರವಾಣಿ ಕರೆ ಮಾಡಿ ಫ್ರಾನ್ಸ್ ನಿಂದ ಒಂದು ಅವಕಾಶ ಬಂದಿದೆ. ಅದನ್ನು ಒಪ್ಪಿಕೊಂಡರೆ ನಾನು ನಗೆಪಾಟಲಿಗೆ ಒಳಗಾಗಿದ್ದೆಲ್ಲವೂ ಮುಚ್ಚಿಹೋಗುತ್ತದೆ ಎಂದು ಹೇಳಿದ್ದರು’ ಎಂದು ವಿನಾಯಕ್ ತಿಳಿಸಿದ್ದಾರೆ.
ಇನ್ನು ಜುಲೈ 8ರಂದು ಪ್ರತಾಪ್ ಕೊಠಡಿ ಖಾಲಿ ಮಾಡಿದ ಬಳಿಕ ಅವರ ಬಗ್ಗೆ ಟೀಕೆಗಳು ಬಂದವು. ಕೆಲಸದ ನಿಮಿತ್ತ ವಾಸ್ತವ್ಯ ಹೂಡುತ್ತಿದ್ದೇನೆಯೇ ಹೊರತು, ಕ್ವಾರಂಟೈನ್ ಗಾಗಿ ಅಲ್ಲ ಎಂದಿದ್ದರು. ನಮ್ಮ ಹೋಟೆಲ್ ಗೆ ಅವರು ಈ ಮೊದಲೂ ಒಂದು ಬಾರಿ ಬಂದಿದ್ದರು’ ಎಂದು ವಿನಾಯಕ ಹೇಳಿದ್ದಾರೆ.
ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿರುವ ಡ್ರೋಣ್ ಪ್ರತಾಪ್ ಬಗ್ಗೆ ದಾವಣಗೆರೆ ಈ ಹೋಟೆಲ್ ಮಾಲೀಕರ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.








