ಹಾಸನ : ತಮಗೆ ನ್ಯಾಯ ಬೇಕೆಂದು ಒತ್ತಾಯಿಸಿ ಪೊಲೀಸ್ ಪೇದೆಯೊಬ್ಬರು ನಡುರಸ್ತೆಯಲ್ಲೇ ಪ್ರತಿಭಟನೆ ನಡೆಸಿದ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಸಂಜೆ ಈ ಪ್ರಸಂಗ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ದಯಾನಂದ್ ಪ್ರತಿಭಟನೆಗೆ ಕುಳಿತವರಾಗಿದ್ದಾರೆ.
ದಯಾನಂದ್ ನಿನ್ನೆ ಸಂಜೆ ರಾಷ್ಟ್ರೀಯ ಹೆದ್ದಾರಿ 75ರ ಅಪೋಲೋ ಮೆಡಿಕಲ್ ನ ಮುಂಭಾಗ ನೋ ಪಾರ್ಕಿಂಗ್ ಕಾರ್ ನಿಲ್ಲಿಸಿ ಔಷಧಿ ತರಲು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ತಹಶೀಲ್ದಾರ್ ಮಂಜುನಾಥ್ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಗಮನಿಸಿ, ತಮ್ಮ ಕಾರು ಚಾಲಕನಿಗೆ ದಯಾನಂದರ ವಾಹನದ ಗಾಳಿ ಬಿಡಲು ಹೇಳಿದ್ದಾರೆ. ತಹಶೀಲ್ದಾರ್ ಅವರ ಸೂಚನೆಯಂತೆ ಕಾರ್ ಚಾಲಕ ದಯಾನಂದರ ಕಾರಿನ ನಾಲ್ಕು ಚಕ್ರದ ಗಾಳಿ ಬಿಟ್ಟಿದ್ದಾರೆ. ಈ ವೇಳೆ ಮೆಡಿಕಲ್ ಶಾಪ್ ನಿಂದ ಪೇದೆ ದಯಾನಂದ್ ಹೊರ ಬಂದಿದ್ದು ತಹಶೀಲ್ದಾರ್ ಮಂಜುನಾಥ್ ಜೊತೆ ವಾಗ್ವಾದ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದಾರೆ.
ಇದರಿಂದ ಮತ್ತಷ್ಟು ಕೋಪಗೊಂಡ ಪೇದೆ ದಯಾನಂದ್ ಮಹಾತ್ಮ ಗಾಂಧೀಜಿಯವರ ಫೋಟೋ ಹಿಡಿದುಕೊಂಡು ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಕೇವಲ 2 ನಿಮಿಷದಲ್ಲಿ ಮೆಡಿಕಲ್ ಶಾಪ್ ನಿಂದ ಹೊರ ಬರುವಷ್ಟರಲ್ಲಿ ಕಾರಿನ ನಾಲ್ಕು ಚಕ್ರದ ಗಾಳಿಯನ್ನು ತೆಗೆದಿದ್ದು ಸರಿಯಲ್ಲ. ತಹಶೀಲ್ದಾರ್ ಬೇಕಿದಲ್ಲಿ ದಂಡ ಹಾಕಲಿ ಅಥವಾ ನೋಟಿಸ್ ನೀಡಲಿ, ನನಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಧರಣಿ ಕುಳಿತು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಹೆದ್ದಾರಿಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ದಯಾನಂದ್ ರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಪಟ್ಟು ಬಿಡದ ಪೇದೆ ದಯಾನಂದ್ ನ್ಯಾಯ ಬೇಕೆಂದು ಪ್ರತಿಭಟನೆ ಮುಂದುವರಿಸಿದ್ದಾರೆ.
ಅಂತಿಮವಾಗಿ ನಗರ ಠಾಣೆ ಪಿಎಸ್ ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್ ಐ ಚಂದ್ರಶೇಖರ್ ಬಂದು ಇತರ ಪೋಲಿಸರ ಸಹಾಯದಿಂದ ಪೇದೆಯನ್ನು ಎತ್ತಿಕೊಂಡು ನಗರ ಠಾಣೆಗೆ ಕರೆದೊಯ್ದಿದ್ದಾರೆ.








