ಟೀಂ ಇಂಡಿಯಾ ಸೋಲಿಗೆ “ಪುರಾನೆ” ಕಾರಣ..!
ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
ಸರಣಿಯ ಮೊದಲ ಪಂದ್ಯವನ್ನು ಗೆದ್ದು, ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಲು ಬಯಸಿದ್ದ ಟೀಂ ಇಂಡಿಯಾಗೆ ನಿರಾಸೆಯಾಗಿದೆ.
ಟೀಂ ಇಂಡಿಯಾ ನೀಡಿದ್ದ 212 ರನ್ ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೇವಲ 3 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಇದರಿಂದಾಗಿ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಹಿರಿಯರ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಯುವ ತಂಡದೊಂದಿಗೆ ಕಣಕ್ಕೆ ಇಳಿದಿತ್ತು.
ಮತ್ತೊಂದೆಡೆ ಅನುಭವಿ ಆಟಗಾರರೊಂದಿಗೆ ಕಣಕ್ಕಿಳಿದ ಭಾರತ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಅದರಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ದಯನೀಯವಾಗಿ ವಿಫಲವಾಗಿದ್ದು, ಸರಣಿ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದೆ.
ಕೆಎಲ್ ರಾಹುಲ್ ಮತ್ತು ಪಂತ್ ಬಿಟ್ಟರೆ ಯಾರೂ ಶತಕ ಸಿಡಿಸಿಲ್ಲ. ಹಿರಿಯ ಆಟಗಾರರಾದ ಪೂಜಾರ ಮತ್ತು ರಹಾನೆ ಸರಣಿಯಲ್ಲಿ ತಮ್ಮ ವೃತ್ತಿಜೀವನದ ಕೆಲವು ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ.
ಕಳಪೆ ಫಾರ್ಮ್ನಲ್ಲಿರುವ ‘ಪುರಾಣೆ’ಗೆ ಸರಣಿ ಅವಕಾಶಗಳನ್ನು ನೀಡಿದ ಟೀಂ ಮಿಂಡಿಯಾ ಮ್ಯಾನೆಜ್ಮೆಂಟ್ ಗೆ ತಕ್ಕ ಶಾಸ್ತಿಯಾಗಿದೆ.
ಈ ಇಬ್ಬರು ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ ಫೀಲ್ಡಿಂಗ್ನಲ್ಲೂ ತೀವ್ರ ನಿರಾಸೆ ಮೂಡಿಸಿದ್ದರು. ನಿರ್ಣಾಯಕ ಕ್ಷಣಗಳಲ್ಲಿ ಸುಲಭವಾದ ಕ್ಯಾಚ್ಗಳನ್ನು ಕೈಬಿಟ್ಟರು.
ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.
‘ಪುರಾನೆ’ಗೆ ಸಾಲು ಸಾಲು ಅವಕಾಶಗಳನ್ನು ನೀಡುತ್ತಿರುವ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.
ಪೂಜಾರ, ರಹಾನೆ ಕಥೆ ಮುಗಿದೇ ಹೋಯಿತು.. ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ವಿಹಾರಿ, ಶುಭ್ಮನ್ಗೆ ಅವಕಾಶ ನೀಡಬೇಕು. ಕೇಪ್ ಟೌನ್ ಟೆಸ್ಟ್ನಲ್ಲಿ ರಹಾನೆ ಎರಡು ಇನ್ನಿಂಗ್ಸ್ಗಳಲ್ಲಿ ಕೇವಲ 10 ರನ್ ಗಳಿಸಿದ್ದರು.









