ಶ್ರೀನಗರ: ಇಡೀ ಭಾರತದ ಆಕ್ರೋಶಕ್ಕೆ ಕಾರಣವಾಗಿದ್ದ 2019ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿಯ ಪ್ರಮುಖ ಆರೋಪಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕಾಕಪೋರಾದ ಹಾಜಿಬಲ್ ಗ್ರಾಮದ ಬಿಲಾಲ್ ಅಹ್ಮದ್ ಕುಚೇ ಸಾವನ್ನಪ್ಪಿದವ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರ ಮೇಲೆ ಆರೋಪ ಕೇಳಿ ಬಂದಿದೆ. ಆರೋಪಿ ಸೆ.17 ರಂದು ಕಿಶ್ತ್ವಾರ್ ಜಿಲ್ಲಾ ಕಾರಾಗೃಹದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತ ಸೋಮವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಫೆ.14, 2019 ರಂದು ಪುಲ್ವಾಮಾದ ಲೆಥ್ಪೋರಾದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ನ ಭಯೋತ್ಪಾದಕ ತನ್ನ ಸ್ಫೋಟಕ ತುಂಬಿದ ಕಾರನ್ನು ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಪರಿಣಾಮ 40 ಸಿಆರ್ಪಿಎಫ್ ಸಿಬ್ಬಂದಿ ಸಾವನ್ನಪ್ಪಿ, 8 ಜನ ಗಾಯಗೊಂಡಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ 18 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಬಂಧಿಸಲಾದ 7 ಆರೋಪಿಗಳಲ್ಲಿ ಈತನೂ ಸೇರಿದ್ದ. ಆರೋಪಿಗಳಾದ ಶಾಕಿರ್ ಬಶೀರ್, ಇನ್ಶಾ ಜಾನ್ ಮತ್ತು ಪೀರ್ ತಾರಿಕ್ ಅಹ್ಮದ್ ಶಾ ಹಾಗೂ ಮೃತ ಆರೋಪಿ ದಾಳಿ ನಡೆಸಿದ್ದ ಉಗ್ರನಿಗೆ ಮತ್ತು ಜೆಎಂ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು ಎನ್ನಲಾಗಿತ್ತು.
ದಾಳಿಯಲ್ಲಿನ ಮೂವರು ಪಾಕಿಸ್ತಾನಿಯರು ಸೇರಿದಂತೆ 6 ಭಯೋತ್ಪಾದಕರು ಪ್ರತ್ಯೇಕ ಎನ್ ಕೌಂಟರ್ ಗೆ ಬಲಿಯಾಗಿದ್ದರೆ, ಜೆಎಂ ಸಂಸ್ಥಾಪಕ ಮಸೂದ್ ಅಜರ್ ಸೇರಿದಂತೆ ಇನ್ನೂ 6 ಮಂದಿ ತಲೆಮರೆಸಿಕೊಂಡಿದ್ದಾರೆ.








