ವಿಶ್ವಕಪ್ಗಾಗಿ (ODI World Cup 2023) ಭಾರತ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆಯಾಗಿದೆ. ಗಾಯಗೊಂಡಿರುವ ಅಕ್ಷರ್ ಪಟೇಲ್ (Axar Patel) ಬದಲಿಗೆ ಅನುಭವಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ (Ravichandran Ashwin) ತಂಡ ಸೇರಿಕೊಳ್ಳಲಿದ್ದಾರೆ.
ಏಷ್ಯಾಕಪ್ ವೇಳೆ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಹೀಗಾಗಿ ಅವರು ಏಷ್ಯಾಕಪ್ (Asia Cup 2023) ಫೈನಲ್ ಪಂದ್ಯವನ್ನು ಆಡಿರಲಿಲ್ಲ. ಆದರೆ ಅಕ್ಷರ್ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳುವ ವಿಶ್ವಾಸ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರದ್ದಾಗಿತ್ತು.
ಆದರೆ, ಸದ್ಯ ಆಯ್ಕೆ ಸಮಿತಿಯು ಅಶ್ವಿನ್ ಅವರನ್ನು ಅಕ್ಷರ್ ಬದಲಿಗೆ ತಂಡಕ್ಕೆ ಸೇರಿಸಲು ನಿರ್ಧರಿಸಿದೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಅಶ್ವಿನ್ 2015ರ ನಂತರ ಮೊದಲ ಬಾರಿಗೆ ಏಕದಿನ ವಿಶ್ವಕಪ್ನ ಭಾಗವಾಗಲಿದ್ದಾರೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಅಶ್ವಿನ್ ತಮ್ಮ ಸ್ಪಿನ್ ಮ್ಯಾಜಿಕ್ನಿಂದಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳನ್ನು ಬಹಳಷ್ಟು ತೊಂದರೆಗೊಳಿಸಿದ್ದರು.
ಬಿಸಿಸಿಐ ಸೆಪ್ಟೆಂಬರ್ 5 ರಂದು ವಿಶ್ವಕಪ್ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಹೊರತುಪಡಿಸಿ, ಅಕ್ಷರ್ ಈ ತಂಡದಲ್ಲಿ ಮೂರನೇ ಸ್ಪಿನ್ನರ್ ಆಗಿದ್ದರು. ಏಷ್ಯಾಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ, ಅಕ್ಷರ್ ತೊಡೆಯ (ಕ್ವಾಡ್ರೈಸ್ಪ್ಸ್) ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಫೈನಲ್ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಅವರ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಬಂದಿದ್ದರು.








