ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla) ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಸಂಸತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಂಗಳವಾರ ಮಾತನಾಡಿದರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಲು ಮುಂದಾದರು. ಅಲ್ಲದೇ ಈ ವೇಳೆ ಸದನದ ಬಾವಿಗಿಳಿದು ಕೂಡ ಪ್ರತಿಭಟನೆ ನಡೆಸಲು ರಾಹುಲ್ ಗಾಂಧಿ ತಮ್ಮ ನಾಯಕರಿಗೆ ಹೇಳಿದರು. ಹೀಗಾಗಿ ಈ ಸಂದರ್ಭದಲ್ಲಿ ವಿಪಕ್ಷಗಳು ಪ್ರಧಾನಿ ಅವರ ಭಾಷಣಕ್ಕೆ ಅಡ್ಡಿ ಮಾಡಿದರು.
ಹೀಗಾಗಿ ಸ್ಪೀಕರ್ ಓಂ ಬಿರ್ಲಾ ಆಕ್ರೋಶಗೊಂಡರು. ಅಲ್ಲದೇ, ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶ ಮತ್ತು ಸಮಯವನ್ನು ನೀಡಲಾಗಿದೆ. ಆದರೆ, ಈ ರೀತಿಯ ದುರ್ವರ್ತನೆ ಸರಿಯಲ್ಲ. ಸಂಸತ್ತಿನ ಘನತೆಯನ್ನು ಕಾಪಾಡಿಕೊಳ್ಳುವಂತೆ ರಾಗಾಗೆ ಸ್ಪೀಕರ್ ತಿಳಿಸಿದರು.
ಆತ್ಮೀಯ ವಿರೋಧ ಪಕ್ಷದ ನಾಯಕರೇ, ಇದು ನಿಮಗೆ ಸರಿ ಹೊಂದುವ ಕಾರ್ಯವಲ್ಲ. ನಿಮಗಾಗಿ ಸಾಕಷ್ಟು ಅವಕಾಶಗಳು ಮತ್ತು ಸಮಯ ನೀಡಲಾಗಿದೆ. ಸಭಾನಾಯಕರು ಮಾತನಾಡುವಾಗ ಸದನದಲ್ಲಿ ನಿರ್ದೇಶನ ನೀಡುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ. ಸಂಸತ್ತಿನ ಸಂಪ್ರದಾಯಗಳ ಪ್ರಕಾರ ಇದು ಸೂಕ್ತವಲ್ಲ. ಸಂಸತ್ತಿನ ಘನತೆ ಕಾಪಾಡಿ. ಸದಸ್ಯರನ್ನು ಸದನದ ಬಾವಿಗೆ ಬರುವಂತೆ ನಿರ್ದೇಶಿಸುತ್ತಿದ್ದೀರಾ? ಇದಕ್ಕಾಗಿ ನೀವು ವಿರೋಧ ಪಕ್ಷದ ನಾಯಕರಾಗಿದ್ದೀರೇ? ಇದು ವಿರೋಧ ಪಕ್ಷದ ನಾಯಕನ ನಡವಳಿಕೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.