ಬೆಂಗಳೂರು : ನಿನ್ನೆ ರಾತ್ರಿ ರಾಜ್ಯದ ಕೆಲವೆಡೆ ವರುಣ ಅಬ್ಬರಿಸಿದ್ದಾನೆ. ಯಾದಗಿರಿ, ಬೀದರ್, ವಿಜಯಪುರ ಹಾಗೂ ರಾಯಚೂರಿನಲ್ಲಿ ನಿನ್ನೆ ತಡರಾತ್ರಿ ಮಳೆರಾಯ ಅಬ್ಬರಿಸಿದ್ದು, ಮಳೆ ಆರ್ಭಟಕ್ಕೆ ಜನರು ತಲ್ಲಣಗೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರದ ನಗನೂರ, ಖಾನಾಪುರ ಭಾಗಗಳಲ್ಲಿ ನಿನ್ನೆ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದೆ. ಮಳೆ ಅಬ್ಬರಕ್ಕೆ ರಸ್ತೆ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. 30 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ತಡರಾತ್ರಿಯಿಂದ ನಿದ್ದೆ ಮಾಡದೆ ಜನರು ಹೈರಾಣಾಗಿದ್ದಾರೆ.
ಸರ್ಕಾರದ ವಿರುದ್ಧ ಅವಿಶ್ವಾಸ : ಸದನದಲ್ಲಿ ಇಂದು ಚರ್ಚೆ
ಬೀದರ್ ನಲ್ಲೂ ನಿನ್ನೆ ತಡರಾತ್ರಿಯಿಂದಲೂ ಸತತವಾಗಿ ಮಳೆ ಸುರಿಯುತ್ತಿದೆ. ಈಗಾಗಲೇ ಮಹಾಮಳೆಗೆ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಲ್ಲಿ ಆತಂಕ ಶುರುವಾಗಿದೆ.
ಇತ್ತ ವಿಜಯಪುರ ಜಿಲ್ಲೆಯಾದ್ಯಂತ ಕೂಡ ಮತ್ತೆ ಮಳೆ ಆರ್ಭಟ ಶುರುವಾಗಿದೆ. ನಿನ್ನೆ ಸಂಜೆ 7 ಗಂಟೆಗೆ ಶುರುವಾದ ಮಳೆ ಬಿಟ್ಟುಬಿಡದೆ ಈಗಲೂ ಮುಂದುವರಿದಿದೆ. ಎರಡು ದಿನ ಬಿಡುವು ನೀಡಿದ್ದ ವರುಣ, ಮತ್ತೆ ಪ್ರತ್ಯಕ್ಷನಾಗಿರುವುದರಿಂದ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ.
ರಾಯಚೂರಿನಲ್ಲಿ ಕೂಡ ಮತ್ತೇ ವರುಣನ ಆರ್ಭಟ ಶುರುವಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದರಿಂದ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ.








