ಬಿಜೆಪಿ ಸರ್ಕಾರಕ್ಕೆ ರಾಮಲಿಂಗಾರೆಡ್ಡಿ ಸವಾಲ್
ಬೆಂಗಳೂರು : ಬಿಜೆಪಿಯವರು ಸ್ವತಃ ಅಭಿವೃದ್ಧಿ ಕೆಲಸ ಮಾಡುವುದಿಲ್ಲ, ಬೇರೆಯವರು ಮಾಡಿದರೆ ಅದಕ್ಕೆ ಟೀಕೆ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಪೋಲಾಗುತ್ತಿದೆ.
ನಗರದಲ್ಲಿ ಪ್ರಮುಖ ರಸ್ತೆಗಳೇ ಹಾಳಾಗಿ ಹೋಗಿವೆ. ಬಿಜೆಪಿ ಸರ್ಕಾರ ಬಂದು 2 ವರ್ಷ 4 ತಿಂಗಳು ಆಗಿದೆ. ಆದರೆ ಇವರಿಂದ ರಸ್ತೆ ಗುಂಡಿ ಮುಚ್ಚುವುದಕ್ಕೆ ಆಗುತ್ತಿಲ್ಲ ಎಂದು ದೂರಿದರು.
ಮುಂದುವರೆದು ಬಿಜೆಪಿ ವಿರುದ್ಧ ಕಿಡಿಕಾರಿದ ರಾಮಲಿಂಗಾರೆಡ್ಡಿ, ಈ ಹಿಂದೆ ರಸ್ತೆ ನಮ್ಮ ವಿರುದ್ಧ ಅಕ್ರಮ ನಡೆಸಿರುವ ಆರೋಪ ಮಾಡುತ್ತಿದ್ದರು.
ಈಗ ಬೆಂಗಳೂರು ನಗರದಲ್ಲಿಯೇ 7 ಮಂದಿ ಸಚಿವರಿದ್ದಾರೆ. ಮುಖ್ಯಮಂತ್ರಿ ಬಳಿಯೇ ಬೆಂಗಳೂರು ನಗರ ಉಸ್ತುವಾರಿ ಖಾತೆ ಇದೆ.
ನಾನು ಉಸ್ತುವಾರಿಯಾಗಿದ್ದಾಗ ವಾರಕ್ಕೆ 3 ಬಾರಿ ಸಿಟಿ ರೌಂಡ್ಸ್ ಮಾಡುತ್ತಿದ್ದೆ. ಆದರೆ ಇವರೇನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ರಸ್ತೆಗಳು ಕಿತ್ತು ಹೋಗಿವೆ, ದೂಳು ಹೆಚ್ಚಾಗಿದೆ. ನಾವು ಅಧಿಕಾರದಲ್ಲಿದ್ದಾಗ ರಸ್ತೆ ಅಭಿವೃದ್ಧಿಗಾಗಿ 2ರಿಂದ 3 ಸಾವಿರ ಕೋಟಿ ಅನುದಾನ ಕೊಟ್ಟಿದ್ದೆವು.
ಟೆಂಡರ್ ಶ್ಯೂರ್ ನೀತಿ ಜಾರಿ ಮಾಡಿದ್ದೆವು. ಬಿಜೆಪಿ ಸರ್ಕಾರ ಅದ್ಯಾವುದನ್ನೂ ಮಾಡುತ್ತಿಲ್ಲ. ಬಿಜೆಪಿಯವರು ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ.
ಸಿದ್ದರಾಮಯ್ಯ ಆಡಳಿತ ಅವಧಿ ಮತ್ತು ಮೈತ್ರಿ ಸರ್ಕಾರದಲ್ಲಿ ಮಾತ್ರ ನಗರಾಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ಸಿಕ್ಕಿದೆ.
ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಲಿಲ್ಲ. ನನಗೆ ಜವಾಬ್ದಾರಿ ಕೊಟ್ಟು ನೋಡಿ, ನಾನು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು.