ಜಗತ್ತಿನಾದ್ಯಂತ ಕೊರೋನಾ ಭೀತಿಗೆ ದೇಶಗಳು ತತ್ತರಿಸಿದ್ದು, ಇದೀಗ ಕರ್ನಾಟಕದಲ್ಲಿ ಕೊರೋನಾ ಹರಡುವ ಆತಂಕದಿಂದ ಒಂದು ವಾರಗಳ ಕಾಲ ಮಾಲ್, ಸಿನಿಮಾ ಮಂದಿರಗಳು, ಪಬ್, ಕ್ಲಬ್, ಕ್ರೀಡಾ ಕೂಟ, ಖಾಸಗಿ ಸಮಾರಂಭಗಳನ್ನು ನಡೆಸದಂತೆ ಕರ್ನಾಟಕ ರಾಜ್ಯ ಸರ್ಕಾರ ಆದೇಶ ನೀಡಿದೆ.
ಆದರೆ ಯಾವುದೇ ಕಾರಣಕ್ಕೂ ಬಂದ್ ಮಾಡಲು ಆದೇಶ ನೀಡುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ಆ ನಿರ್ಧಾರ ತೆಗೆದುಕೊಳ್ಳಲು ಕಾರಣ ಆ ಒಂದು ಪ್ರಕರಣವಂತೆ.
ಕೊರೋನಾ ವೈರಸ್ ಸೊಂಕುನಿಂದ ಕಲಬುರಗಿಯಲ್ಲಿ ಸಾವು ಸಂಭವಿಸಿತು ಎಂದು ವರದಿ ಬರುತ್ತಿದ್ದಂತೆ, ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲಿ ಉನ್ನತ ಮಟ್ಟದ ತುರ್ತು ಸಭೆ ಕರೆದರು. ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಶಿಕ್ಷಣ ಸಚಿವ ಸುರೇಶ್ ಕುಮಾರ್, ಡಾ. ದೇವಿಶೆಟ್ಟಿ ಸೇರಿದಂತೆ ಸರ್ಕಾರದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದ ಆ ಸಭೆಯಲ್ಲಿ ಕೊರೋನಾ ಸೋಂಕು ರಾಜ್ಯದಲ್ಲಿ ಹರಡುತ್ತಿರುವ ಬಗ್ಗೆ ಮಾಹಿತಿ ಕೇಳಿದರು.

ಸಭೆಯಲ್ಲಿ ಕಲಬುರುಗಿ ಪ್ರಕರಣದ ಬಗ್ಗೆ ಚರ್ಚೆ ನಡೆದಿದ್ದು, ಸೌದಿ ಅರೇಬಿಯಾದ ಮೆಕ್ಕಾ ಮದೀನಾ ಯಾತ್ರೆ ಮುಗಿಸಿ 76 ವರ್ಷದ ವೃದ್ಧ ಕಲಬುರಗಿಗೆ ಆಗಮಿಸಿದ್ದರು. ಮೆಕ್ಕಾ ಮದೀನಾಕ್ಕೆ ಹೋಗಿ ಬಂದ ಕಾರಣ ಸಂಪ್ರದಾಯದಂತೆ ಹಲವು ಜನ ಇವರ ಕಾಲು ಮುಟ್ಟಿ ನಮಸ್ಕರಿಸಿದ್ದರು.
ಮಾರ್ಚ್ 6ರಂದು ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಕೊರೊನಾ ಸೋಂಕಿನಿಂದ ಇವರು ಮೃತಪಟ್ಟ ಹಿನ್ನೆಲೆಯಲ್ಲಿ ಇವರ ಸಂಪರ್ಕದಲ್ಲಿದ್ದ ಒಟ್ಟು 46 ಜನರ ಮೇಲೆ ನಿಗಾ ವಹಿಸಲಾಗಿದ್ದು, ಇದರಲ್ಲಿ 36 ಜನರು ಗಂಭೀರ ಪರಿಣಾಮ (ಹೈ ರಿಸ್ಕ್) ಮತ್ತು 15 ಜನರನ್ನು ಕಡಿಮೆ ಪರಿಣಾಮ (ಲೋ ರಿಸ್ಕ್) ಎಂದು ವಿಂಗಡಿಸಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದಂತೆ ಸರ್ಕಾರಕ್ಕೆ ಪರಿಸ್ಥಿತಿಯ ತೀವ್ರತೆಯ ಅರಿವಾಗಿದೆ.
ಕರ್ನಾಟಕ ರಾಜ್ಯದ ಗಡಿ ಕೇರಳದಲ್ಲೂ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅಲ್ಲಿಯ ಜನ ಕರ್ನಾಟಕಕ್ಕೆ ಬರುವುದರಿಂದ ಸಮಸ್ಯೆ ಜಾಸ್ತಿಯಾಗಬಹುದು ಎಂದು ಸಭೆಯಲ್ಲಿದ್ದ ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನಲ್ಲೂ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಒಂದು ವಾರಗಳ ಕಾಲ ಸಾರ್ವಜನಿಕವಾಗಿ ಜನ ಹೆಚ್ಚು ಸೇರದಂತೆ ಸಾರ್ವಜನಿಕ ಸ್ಥಳವನ್ನು ಬಂದ್ ಮಾಡಿ ಕಾರ್ಯಕ್ರಮಗಳನ್ನು ನಿರ್ಬಂಧಿಸುವುದು ಉತ್ತಮ ಎಂಬ ಅಭಿಪ್ರಾಯ ಸಭೆಯಲ್ಲಿ ಹಿರಿಯ ವೈದ್ಯರು, ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೊರೋನಾ ಪೀಡಿತ ವ್ಯಕ್ತಿಗಳಿಂದ ಮತ್ತಷ್ಟು ಜನರಿಗೆ ಸೋಂಕು ಹರಡಿದರೆ ನಿಯಂತ್ರಣ ಮಾಡಲು ಕಷ್ಟ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ವಿಶ್ವದ ವಿವಿಧೆಡೆ ಕೊರೋನಾ ಹರಡಲು ಕಾರಣವಾದ ಅಂಶಗಳು, ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಕೊನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ವಾರ ಕಾಲ ರಾಜ್ಯ ಬಂದ್ ಮಾಡುವ ನಿರ್ಧಾರಕ್ಕೆ ಸಮ್ಮತಿಸಿದರು ಎಂದು ವರದಿಗಳು ತಿಳಿಸಿದೆ.








