ಸಿಎಸ್ ಆರ್ ಫಂಡ್ ಲೆಕ್ಕ ಕೇಳಿದ್ದಕ್ಕೆ ನನ್ನ ವಿರುದ್ಧ ಆರೋಪ : ರೋಹಿಣಿ ಸಿಂಧೂರಿ
ಮೈಸೂರು : ದೂರು ಹೇಳುವುದಕ್ಕೆ ಒಂದು ಕ್ರಮ, ವ್ಯವಸ್ಥೆ ಇರುತ್ತದೆ. ನನ್ನ ಕಾರ್ಯವೈಖರಿ ಬಗ್ಗೆ ಅಸಮಾಧಾನ, ಬೇಸರವಿದ್ದರೆ ಕಾನೂನು ಪ್ರಕಾರ ದೂರು ನೀಡಲಿ. ಅದನ್ನು ಬಿಟ್ಟು ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದು ಶಿಲ್ಪ ನಾಗ್ ಆರೋಪಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದಾರೆ.
ಕೋವಿಡ್ ಸಂಕಷ್ಟದ ನಡುವೆ ಮೈಸೂರಿನಲ್ಲಿ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಮುಂದುವರೆದಿದೆ. ರೋಹಿಣಿ ಸಿಂಧೂರಿ ಅವರು ದುರಂಹಕಾರದಿಂದ ವರ್ತಿಸುತ್ತಿದ್ದು, ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪ ಮಾಡಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ರೋಹಿಣಿ ಸಿಂಧೂರಿ, ನನ್ನ ಕಾರ್ಯವೈಖರಿ ಬಗ್ಗೆ ಅಸಮಾಧಾನ, ಬೇಸರವಿದ್ದರೆ ಕಾನೂನು ಪ್ರಕಾರ ದೂರು ನೀಡಲಿ ಅದನ್ನು ಬಿಟ್ಟು ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಸಿಎಸ್ಆರ್ ಫಂಡ್ ಲೆಕ್ಕ ಕೇಳಿದ್ದಕ್ಕೆ ಶಿಲ್ಪಾ ನಾಗ್ ಆರೋಪ ಮಾಡುತ್ತಿದ್ದಾರೆ. ವಾರ್ಡ್ ವೈಸ್ ಅಂಕಿ-ಅಂಶಗಳನ್ನು ಕೇಳಿದ್ದೆ. ಆಯಾ ವಾರ್ಡ್ ನಲ್ಲಿರುವ ಕೋವಿಡ್ ಪಾಸಿಟಿವ್ ಸಂಖ್ಯೆ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಕೇಳಿದ್ದೆ. ಒಂದು ದಿನ 400 ಕೊರೊನಾ ಪ್ರಕರಣ, ಮತ್ತೊಂದು ದಿನ 40 ಪ್ರಕರಣ ಎಂದು ವರದಿ ನೀಡಿದ್ದಾರೆ. ಈ ರೀತಿ ಹೇಳಿದರೆ ಸರಿಯಿಲ್ಲ ಸೂಕ್ತವಾಗಿ ವರದಿ ಕೊಡುವಂತೆ ಸೂಚಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ ಶಿಲ್ಪಾ ನಾಗ್ ಪಾಲಿಕೆಗೆ ಬಂದು ಒಂದು ವರ್ಷವಾಗುತ್ತಿದೆ. ಈವರೆಗೆ ಇಲ್ಲದ ದೂರು ಒಂದು ವಾರದಿಂದ ಆರಂಭವಾಗಿರುವುದು ಯಾಕೆ? ನಾನು ಪ್ರತಿಯೊಂದು ಮಾಹಿತಿಯನ್ನೂ ಮುಖ್ಯಕಾರ್ಯದರ್ಶಿಗೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.