ಜೀವನವೆಂದರೇನು ಎಂದೇ ಅರಿಯದ ಮನುಷ್ಯನಿಗೆ ಮರಣವೇ ಶತ್ರು
ಜಾತಸ್ಯ ಮರಣಂ ಧ್ರುವಂ; ಮೃತ್ಯುವೆಂದರೇ ಮತ್ತೇನೂ ಅಲ್ಲ ಎರಡು ಜೀವಗಳ ನಡುವಿನ ಹೆಬ್ಬಾಗಿಲು ಅಷ್ಟೇ:
“ನಮ್ಮ ಮಡಿವಂತ ಸಮಾಜದಲ್ಲಿ ಕನಿಷ್ಠ ಮಾತಾಡಲು ನಿಷಿದ್ಧವಾದ ಎರಡು ಶಾಶ್ವತ ಸತ್ಯಗಳು ಒಂದು ಲೈಂಗಿಕತೆ ಮತ್ತೊಂದು ಸಾವು”
ಸಾವು ಅತ್ಯಂತ ತಪ್ಪಾಗಿ ಗ್ರಹಿಸಲ್ಪಟ್ಟ ವಿದ್ಯಮಾನ, ಜನರು ಸಾವನ್ನು ಜೀವನದ ಅಂತ್ಯವೆಂದು ಭಾವಿಸುತ್ತಾರೆ. ಆದರೆ ಸಾವು ಅಂತ್ಯವಲ್ಲ, ಹೊಸ ಜೀವನವೊಂದರ ಆರಂಭ. ಶಿಥಿಲಗೊಂಡ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುತ್ತೇವಲ್ಲ ಹಾಗೆಯೇ ಸಾವು ಅನ್ನುವುದು ಹಳೆ ಮನೆಯಿಂದ ಹೊಸ ಮನೆಗೆ ಪ್ರವೇಶಿಸುವ ಪ್ರಕ್ರಿಯೆ ಮಾತ್ರ ಎಂದವರು ಓಶೋ. ಸಾವಿನ ಕುರಿತಾಗಿ ಓಶೋ ತುಂಬಾ ಸರಳವಾಗಿ ಪ್ರಕೃತಿಯ ಆತ್ಯಂತಿಕ ಸತ್ಯವನ್ನು ಹೇಳಿದ್ದಾರೆ. ಮರಣ ಒಂದು ಜೀವದ ಕೊನೆಯ ಅನುಭವವಾದರೇ ಇನ್ನೊಂದು ಜೀವದ ಪ್ರಾರಂಭದ ಅನುಭವ. ಮೃತ್ಯು ಎರಡು ಜೀವಗಳ ನಡುವಿನ ಹೆಬ್ಬಾಗಿಲು; ಒಂದು ಜೀವ ಹಿಂದುಳಿದಿದ್ದರೇ ಇನ್ನೊಂದು ಜೀವ ಮುಂದೆ ಕಾಯುತ್ತಿದೆ ಎನ್ನುತ್ತಿದ್ದರು ಓಶೋ.
ಸತ್ತ ವ್ಯಕ್ತಿ ತನ್ನ ಹಳೆಯದನ್ನು ಕಳೆದು ಹೊಸ ರೂಪ ತಾಳುತ್ತಾನೆ ಅಷ್ಟೆ. ರೂಪ ಬೇರೆ, ಗುಣ ಬೇರೆ, ಬದುಕು ಬೇರೆ ಅಷ್ಟೆ. ಜೀವನದ ಅರ್ಥವನ್ನು ಸೂಕ್ಷ್ಮವಾಗಿ ಗ್ರಹಿಸಿದ ವ್ಯಕ್ತಿ ಸಾವಿನ ಬಗ್ಗೆ ಅಜ್ಞಾನ ಇಟ್ಟುಕೊಳ್ಳುವುದಿಲ್ಲ. ಮರಣ ಅನ್ನುವುದು ಅನಿಶ್ಚಿತ ಸಂಗತಿ. ಅದನ್ನು ನಾವು ನಿರ್ಧರಿಸುವುದೊ ಇಲ್ಲ; ಪ್ರಕೃತಿ ಎಂಬ ಅಗೋಚರ ಶಕ್ತಿ ಅದನ್ನು ತೀರ್ಮಾನಿಸುತ್ತದೆ. ಸಾಕು ಬದುಕಿದ್ದು ಇನ್ನು ಸತ್ತುಬಿಡೋಣ ಅಂದುಕೊಂಡು ನೋಡಿ ಸಾವೇನು ಬರುವುದಿಲ್ಲ; ಅದಕ್ಕೆ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೆ. ಹಾಗೆ ನೀವು ಆತ್ಮಹತ್ಯೆ ಮಾಡಿಕೊಂಡೇ ಸಾಯಬೇಕು ಅನ್ನುವುದನ್ನೂ ಪ್ರಕೃತಿಯೇ ನಿರ್ಧರಿಸುತ್ತದೆ. ಸಾವು ಜೀವನದ ಅಂತಿಮ ಅದ್ಭುತ ಅನುಭವ ಮಾತ್ರ. ಅದಕ್ಕೆ ನಮ್ಮ ಹಿಂದೂ ಧರ್ಮದಲ್ಲಿ ಸಾವನ್ನು ೧೬ ಮಾನುಷ ಸಂಸ್ಕಾರಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಹುಟ್ಟಿನ ಜೊತೆಯಲ್ಲಿಯೇ ಸಾವೂ ನಿರ್ಧಾರವಾಗಿರುತ್ತದೆ; ಜಾತಸ್ಯ ಮರಣಂ ಧ್ರುವಂ. ಹಾಗೇ ಸಾವನ್ನು ನಿರ್ಧರಿಸುವುದು ಪ್ರಕೃತಿ. ಅದೂ ಬದುಕಿನ ಒಂದು ಭಾಗ; ಪ್ರಮುಖ ಭಾಗ ಅನ್ನುವುದು ಓಶೋ ಅವರ ನಿಲುವಾಗಿತ್ತು.
ಜನರು ಸಾವನ್ನು ಅಶುಭ ಎಂದು ಭಾವಿಸುತ್ತಾರೆ, ಸಾವಿನ ಮಾತಾಡುವುದನ್ನು ನಿಷಿದ್ಧ ಎನ್ನುತ್ತಾರೆ. ಸಾವೆಂದರೆ ಅಂಜುತ್ತಾರೆ, ಸಾವಿನ ಕಲ್ಪನೆಯಲ್ಲಿಯೇ ಭೀತರಾಗಿ ನಿದ್ದೆಗೆಡುತ್ತಾರೆ. ಬಹಳಷ್ಟು ಜನರು ಅರವತ್ತು ದಾಟುತ್ತಿದ್ದ ಹಾಗೇ ಮರಣ ಭಯದಲ್ಲಿ ದಿನ ದೂಡುತ್ತಾರೆ. ನಮ್ಮ ಮಡಿವಂತ ಸಮಾಜದಲ್ಲಿ ಕನಿಷ್ಠ ಮಾತಾಡಲು ನಿಷಿದ್ಧವಾದ ಎರಡು ಶಾಶ್ವತ ಸತ್ಯಗಳು ಒಂದು ಲೈಂಗಿಕತೆ ಮತ್ತೊಂದು ಸಾವು. ಇದೆಲ್ಲವೂ ಅಜ್ಞಾನದ ಪರಮಾವಧಿ; ಸಾವನ್ನು ಸಂಭ್ರಮದಿಂದ ಎದುರುಗೊಳ್ಳುವುದು ಕೇವಲ ಜ್ಞಾನಿಗಳಿಂದ ಮಾತ್ರ ಸಾಧ್ಯ. ಮನುಷ್ಯ ತನ್ನೆರಡು ಭಾವನೆಯನ್ನು ಹೊರಗಿನಿಂದ ಅನುಭವಿಸಲು ಪ್ರಯತ್ನಿಸುತ್ತಾನೆ; ಅದು ಪ್ರೀತಿ ಮತ್ತು ಸಾವು. ಆದರೆ ಇವೆರಡೂ ಅಂತರಂಗದ ಅನುಭವಗಳು. ಪ್ರೀತಿಯ ಅಭಿವ್ಯಕ್ತತೆ ಹೇಗೆ ಅಗೋಚರವೋ ಹಾಗೆಯೇ ಸಾವಿನದ್ದೂ ಕೂಡಾ. ಉಸಿರಾಟ ನಿಲ್ಲುವುದು, ಹೃದಯ ಬಡಿತ ಸ್ತಬ್ಧವಾಗುವುದು, ದೇಹ ನಿಶ್ಚಲವಾಗುವುದು ಸಾವಿನ ಗುರುತುಗಳು, ಆದರೆ ಇದು ದೈಹಿಕವಾದ ಅಭಿವ್ಯಕ್ತತೆ ಅಷ್ಟೆ. ಆತ್ಮ ಅನ್ನುವ ಚಿನ್ಮಯದ ಅನುಭೂತಿ ಅಗೋಚರ, ಅದು ಅನುಭವಕ್ಕೆ ಮಾತ್ರ ನಿಲುಕುವಂತದ್ದು. ಜೀವನದ ಯಾವ ಅನುಭವಗಳೂ ಅದರಷ್ಟು ದಿವ್ಯವಲ್ಲ. ಮರಣವೆಂಬ ಪ್ರಕ್ರಿಯೆ ಭಗವಂತನ ನಿಯಮ, ಪ್ರಕೃತಿಯ ಧರ್ಮ, ಶಾಶ್ವತ ಸತ್ಯ. ಅದನ್ನು ಸಾಧ್ಯವಾದಷ್ಟು ಪೂಜ್ಯ ದೃಷ್ಟಿಯಿಂದ ಕಾಣಬೇಕು, ಆದರಿಸಬೇಕು ಎಂದು ತಮ್ಮ ಸತ್ಸಂಗಗಳಲ್ಲಿ ಓಶೋ ಪ್ರವಚನ ನೀಡುತ್ತಿದ್ದರು.
ದೇಹ ಮಾಧ್ಯಮ ಆತ್ಮ ಅವಿನಾಶಿ ಅನ್ನುವ ಮಾತನ್ನು ಓಶೋ ಅನೇಕ ಬಾರಿ ಬೇರೆ ಬೇರೆ ವ್ಯಾಖ್ಯಾನಗಳ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಸಾವು ಆತ್ಮವನ್ನು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ವರ್ಗಾಯಿಸುವ ಬಹುಮುಖ್ಯ ಪ್ರಕ್ರಿಯೆ. ಅದು ಆತ್ಮದ ಅರಿವಿನ ಸ್ಥಿತಿ. ಬ್ರಹ್ಮಾಂಡದ ಅತಿ ಭವ್ಯ ಶಕ್ತಿಯನ್ನು ಹೀರಿಕೊಂಡ ಆತ್ಮ ತನ್ನ ನಿರಂತರ ಪಯಣದಲ್ಲಿ ಹೀಗೆ ಬದಲಾಯಿಸುವ ದೇಹಗಳ ಸಂಖ್ಯೆ ಮಿತಿಯಿಲ್ಲದ್ದು. ನಾವು ಅಂಗಿ ಬದಲಾಯಿಸಿದಂತೆ ಆತ್ಮ ದೇಹ ಬದಲಾಯಿಸುತ್ತದೆ. ಮರಣವೆಂದರೆ ಒಂದು ಸಣ್ಣ ಚೇಂಜ್ ಓವರ್ ಅಷ್ಟೆ. ಬದುಕಿನಲ್ಲಿ ಪಾಪಕೂಪಗಳಲ್ಲಿ ನರಳಾಡುವ ಮನಸ್ಸು ಮಾತ್ರ ಸಾವಿನ ಬಗ್ಗೆ ಅತೀವ ಹೆದರಿಕೆ ಇಟ್ಟುಕೊಳ್ಳುತ್ತದೆ. ಸತ್ತ ನಂತರ ಮತ್ತೆಲ್ಲೋ ಸ್ವರ್ಗ ಇನ್ಯಾವುದೋ ನರಕ, ಅದ್ಯಾವುದೋ ಜನ್ನತ್ ಇವೆಲ್ಲವೂ ಕಪೋಲ ಕಲ್ಪಿತ ಕಥೆಗಳಷ್ಟೆ. ಪ್ರಕೃತಿ ಜನ್ಯ ಜ್ಞಾನದಿಂದ ಹುಟ್ಟಿದ ವಿಜ್ಞಾನವೂ ಇಂತಹ ಮಿಥ್ಗಳನ್ನು ಅಲ್ಲಗಳೆಯುತ್ತದೆ. ನಾವು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡಾಗ ಇಂತಹ ಮೌಢ್ಯಗಳನ್ನು ಮೀರಿ ಸಾವಿನ ಕುರಿತಾದ ಅಜ್ಞಾನ ದೂರ ಮಾಡಿಕೊಳ್ಳಲು ಸಾಧ್ಯ ಅನ್ನುತ್ತಿದ್ದರು ಓಶೋ.
ಸಾವಿನ ಬಗ್ಗೆ ನಮಗೆ ಭಯವಿದೆ ಎಂದಾದರೇ ನಮಗಿನ್ನೂ ಬದುಕಿನ ರುಚಿ ಗೊತ್ತಾಗಿಲ್ಲ ಎಂದೇ ಅರ್ಥ. ಜೀವನ ಅರ್ಥವಾದವನಿಗೆ ಸಾವು ಎಂದೂ ಹೆದರಿಸುವುದಿಲ್ಲ. ಪರಮ ಜ್ಞಾನಿ ಮನುಷ್ಯ ಸಾವನ್ನು ಸ್ವಾಗತಿಸುತ್ತಾನೆ. ಸಾವು ಬಂದಾಗಲೆಲ್ಲ ಮುಕ್ತವಾಗಿ ಅಪ್ಪಿಕೊಳ್ಳುತ್ತಾನೆ. ಆ ಅಗೋಚರ ಸ್ಥಿತಿಯನ್ನು ಅತಿಥಿಯಾಗಿ ಸ್ವೀಕರಿಸುತ್ತಾನೆ. ಜೀವನವೆಂದರೇನು ಎಂದೇ ಅರಿಯದ ಮನುಷ್ಯನಿಗೆ ಮರಣವೇ ಶತ್ರು. ಸಾವಿನ ಭಯ ಸಾಂಕ್ರಾಮಿಕ ವ್ಯಾದಿಯಿದ್ದಂತೆ. ಸಮೂಹ ಸನ್ನಿಯಿದ್ದಂತೆ. ಸಾವಿಗೆ ಭಯ ಪಡುವ ಒಬ್ಬ ಮನುಷ್ಯ ತನ್ನ ರೋಗವನ್ನು ತನ್ನ ಸುತ್ತಮುತ್ತಲಿನವರಿಗೆ ಹಬ್ಬಿಸುತ್ತಾನೆ.
ಸಾವೇ ಇಲ್ಲದ ಬದುಕು ಹೇಗಿರುತ್ತದೆ ಎಂದು ಕೆಲವರು ಕಲ್ಪಿಸಿಕುಳ್ಳುತ್ತಾರೆ. ಬದುಕಿನ ಬಗ್ಗೆಯೂ ಭಯ ಇಟ್ಟುಕೊಂಡ ಸಾವೆಂದರೆ ಹೆದರಿ ನಡುಗುವ ಅಜ್ಞಾನಿಗಳು ಮಾತ್ರ ಹೀಗೆ ಕಲ್ಪಿಸಿಕೊಳ್ಳಲು ಸಾಧ್ಯ. ಸಾವೇ ಮಾಯವಾದರೆ ಜೀವನದಲ್ಲಿ ನಿಗೂಢತೆ ತೃಪ್ತಿ ಇರುವುದೇ ಇಲ್ಲ. ಒಬ್ಬ ಧಾರ್ಮಿಕ ಮನೋಭಾವನೆಯ ವ್ಯಕ್ತಿ, ಅತೀಂದ್ರಿಯವಾದ ಸಾವಿನ ರಹಸ್ಯವನ್ನು ಅನ್ವೇಷಿಸಲು ಪ್ರಯತ್ನಿಸುತ್ತಾನೆ. ಸಾವಿನ ರಹಸ್ಯವನ್ನು ಅನ್ವೇಷಿಸುವಾಗ, ಅನಿವಾರ್ಯವಾಗಿ ಜೀವನ ಎಂದರೇನು, ಪ್ರೀತಿ ಎಂದರೇನು ಎಂದು ತಿಳಿಯುತ್ತಾನೆ. ಅದು ಅವನ ಗುರಿಗಳಲ್ಲ. ಸಾವನ್ನು ಭೇದಿಸುವುದು ಅವನ ಗುರಿಯಾಗಿರುತ್ತದೆ. ಏಕೆಂದರೆ ಸಾವಿಗಿಂತ ಹೆಚ್ಚು ನಿಗೂಢವಾದದ್ದೇನೂ ಇಲ್ಲ ಎಂದು ಅವನಿಗೆ ಆಗ ತೋರುತ್ತದೆ. ಈ ಜೀವನ ಎಷ್ಟೆ ರಹಸ್ಯವಾಗಿದ್ದರೂ ಅದನ್ನು ಬೇಧಿಸಬಹುದು. ಈ ಪ್ರಕೃತಿಯಲ್ಲಿರುವ ಅದೆಷ್ಟೋ ರಹಸ್ಯಗಳಿಗೂ ಉತ್ತರ ಸಿಕ್ಕಿದೆ. ಆದರೆ ಯಾವತ್ತಿಗೂ ಉತ್ತರ ಸಿಗದ ಏಕೈಕ ರಹಸ್ಯ ಸಾವು ಮಾತ್ರ.
ಸಾಮಾನ್ಯ ಜನರಷ್ಟೇ ಅಲ್ಲ ಸನ್ಯಾಸಿಗಳಿಗೂ ಸಾವು ಸಾಮಾನ್ಯ. ಆದರೆ ನಿಜವಾದ ಸಂತರು ಸಾವನ್ನು ಸಂಭ್ರಮಿಸಿ ಆಚರಿಸಬೇಕು. ಏಕೆಂದರೆ ಸನ್ಯಾಸಿಗಳಿಗೂ ಸಾವು ಜೀವನದ ಅಂತ್ಯವಲ್ಲ; ಬದಲಿಗೆ ಜೀವನದ ಅತ್ಯಂತ ಉತ್ತುಂಗ ಹಂತ; ಜೀವನದ ಪರಮಾವಧಿ. ಸರಿಯಾಗಿ ಬದುಕಿದ್ದರೆ, ಕ್ಷಣ ಕ್ಷಣವನ್ನೂ ಆಸ್ವಾದಿಸಿ ಸಂಪೂರ್ಣವಾಗಿ ಬದುಕಿದ್ದರೆ, ಜೀವನದ ಸಂಪೂರ್ಣ ರಸವನ್ನು ಹಿಂಡಿ ಜೀವಿಸಿದರೇ, ಮರಣವೆಂಬುದು ಅಂತಿಮ ಪರಾಕಾಷ್ಠೆಯಾಗುತ್ತದೆ. ಸಾವಿನ ಪರಾಕಾಷ್ಠೆಗೆ ಹೋಲಿಸಿದರೇ ಲೈಂಗಿಕ ಪರಾಕಾಷ್ಠೇ ಏನೂ ಅಲ್ಲ. ಅದು ಎಲ್ಲ ಸುಖವನ್ನೂ ಮೀರಿದ್ದು ಎಂದು ಓಶೋ ಹಲವು ಬಾರಿ ಹೇಳಿದ್ದಾರೆ.
-ನಿರೂಪಣೆ: ವಿಶ್ವಾಸ್ ಭಾರದ್ವಾಜ್











