ಕಾಂಗ್ರೆಸ್ ನೀಡಿದ ಚಿತ್ರಹಿಂಸೆಯಿಂದಾಗಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡೆ – ಸಾಧ್ವಿ ಪ್ರಜ್ಞಾ ಸಿಂಗ್
ಭೋಪಾಲ್, ಜೂನ್ 22: ಕಾಂಗ್ರೆಸ್ ನೀಡಿದ ಚಿತ್ರಹಿಂಸೆಯಿಂದಾಗಿ ನಾನು ನನ್ನ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದೇನೆ ಎಂದು ಬಿಜೆಪಿ ಸಂಸದೆ, ಸಾಧ್ವಿ ಪ್ರಜ್ಞಾ ಸಿಂಗ್ ಆರೋಪಿಸಿದ್ದಾರೆ.
ಭಾನುವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನನಗೆ ಚಿತ್ರಹಿಂಸೆ ನೀಡಿದ್ದರಿಂದ ನಾನು ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ. ಕಣ್ಣಿನಲ್ಲಿ ಊತ ಕಾಣಿಸಿಕೊಂಡು ಕೀವು ಉಂಟಾಗಿ, ಅದು ಮಿದುಳಿಗೂ ವ್ಯಾಪಿಸಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದೇನೆ. ನಾನು ಅನುಭವಿಸುತ್ತಿರುವ ಕಣ್ಣಿನ ಸಮಸ್ಯೆ ಮತ್ತು ಮೆದುಳು ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂದು ಪ್ರಜ್ಞಾ ಸಿಂಗ್ ಆರೋಪಿಸಿದ್ದಾರೆ.
ಸಾಧ್ವಿ ಪ್ರಜ್ಞಾ ಸಿಂಗ್ 2008ರಲ್ಲಿ ಸಂಭವಿಸಿದ ಮಾಲೇಗಾಂವ್ ಸ್ಫೋಟದ ಆರೋಪಿಯಾಗಿ 9 ವರ್ಷಗಳ ಕಾಲ ಜೈಲಿನಲ್ಲಿದ್ದರು. ಆ ಸಮಯದಲ್ಲಿ ನನಗೆ ಹಿಂಸೆ ನೀಡಲಾಗಿತ್ತು. ಇದರಿಂದಾಗಿ ದೇಹದಲ್ಲೆಲ್ಲ ಗಾಯಗಳಾಗಿ, ಕಣ್ಣು ಊದಿಕೊಂಡು ಕೀವು ಉಂಟಾಗಿತ್ತು. ಇದು ಮಿದುಳಿಗೂ ವ್ಯಾಪಿಸಿದ ಪರಿಣಾಮವಾಗಿ ಬಲಗಣ್ಣಿನ ದೃಷ್ಟಿ ಮಸುಕಾಗಿದ್ದರೆ, ಎಡಗಣ್ಣು ದೃಷ್ಟಿಯನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಅವಧಿಯಲ್ಲಿ ಸಾಧ್ವಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬುದನ್ನು ಕಾಂಗ್ರೆಸ್ ಮುಖಂಡ ಪಿ.ಸಿ. ಶರ್ಮಾ ಅವರು ತಳ್ಳಿ ಹಾಕಿದ್ದಾರೆ.