ಕರ್ನಾಟಕದ ರಾಜಕೀಯ ಭೂಪಟದಲ್ಲಿ ಅಹಿಂದ ಎನ್ನುವುದು ಕೇವಲ ಒಂದು ಸಂಘಟನೆಯಲ್ಲ, ಅದು ಅಧಿಕಾರದ ಗದ್ದುಗೆಯನ್ನು ನಿರ್ಧರಿಸುವ ಬಲಿಷ್ಠ ಮತಬ್ಯಾಂಕ್. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಷ್ಟೇ ಪ್ರಭಾವಿಯಾಗಿರುವ ಈ ಅಹಿಂದ ವರ್ಗವನ್ನು ಒಗ್ಗೂಡಿಸಿ, ಸಮಾಜವಾದದ ಲೇಪನ ಹಚ್ಚಿ ಎರಡು ಬಾರಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದವರು ಸಿದ್ದರಾಮಯ್ಯ. ಆದರೆ ಈಗ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಉತ್ತರವಾಗಿ ಬೆಳಗಾವಿಯ ಸಾಹುಕಾರ್ ಸತೀಶ್ ಜಾರಕಿಹೊಳಿ ಮುಂಚೂಣಿಗೆ ಬರುತ್ತಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಬಳಿಕ ಸೃಷ್ಟಿಯಾದ ರಾಜಕೀಯ ಹಂಗಾಮು ಸತೀಶ್ ಜಾರಕಿಹೊಳಿ ಅವರಿಗೆ ವರವಾಗಿ ಪರಿಣಮಿಸಿದೆಯೇ ಎಂಬ ಚರ್ಚೆ ಈಗ ಗಲ್ಲಿಯಿಂದ ದಿಲ್ಲಿಯವರೆಗೆ ಕೇಳಿಬರುತ್ತಿದೆ.
ದಾವಣಗೆರೆ ಉಪಚುನಾವಣೆಯ ನಂತರ ಮುಸ್ಲಿಂ ನಾಯಕರು ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವುದು ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದಾ ಕಾಂಗ್ರೆಸ್ ಕೈಹಿಡಿಯುತ್ತಿದ್ದ ಅಲ್ಪಸಂಖ್ಯಾತರು ಈಗ ಆಕ್ರೋಶದ ಹಾದಿ ಹಿಡಿದಿದ್ದಾರೆ. ಇದಕ್ಕೆ ತುಪ್ಪ ಸುರಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಾಸೀರ್ ಅಹ್ಮದ್ ಪದಚ್ಯುತಿ ಮತ್ತು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರ ಅಮಾನತು ಪಕ್ಷದ ಒಳಗೆ ದೊಡ್ಡ ಸಂಚಲನ ಮೂಡಿಸಿದೆ. ಈ ಕ್ರಮಗಳು ಮುಂಬರುವ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಮತಬ್ಯಾಂಕ್ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಆತಂಕ ಸಿದ್ದರಾಮಯ್ಯ ಬಣವನ್ನು ಕಾಡುತ್ತಿದೆ.
ಇದೇ ಸಂದರ್ಭವನ್ನು ಬಳಸಿಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅಹಿಂದ ನಾಯಕತ್ವದ ಚುಕ್ಕಾಣಿ ಹಿಡಿಯಲು ಡ್ಯಾಮೇಜ್ ಕಂಟ್ರೋಲ್ ರಾಜತಂತ್ರಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ವಲಯದ ನಾಯಕರಾದ ಎಚ್ ಸಿ ಮಹದೇವಪ್ಪ ಮತ್ತು ಕೆ ಎನ್ ರಾಜಣ್ಣ ಅವರೊಂದಿಗೆ ಸೇರಿಕೊಂಡು ಹೈಕಮಾಂಡ್ ಮೇಲೆ ಒತ್ತಡ ಹೇರಲು ಸಜ್ಜಾಗಿದ್ದಾರೆ. ದೆಹಲಿಗೆ ತೆರಳಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ, ಅಲ್ಪಸಂಖ್ಯಾತ ನಾಯಕರ ಮೇಲಿನ ಕ್ರಮದಿಂದ ಪಕ್ಷಕ್ಕೆ ಆಗುವ ನಷ್ಟದ ಬಗ್ಗೆ ಮನವರಿಕೆ ಮಾಡಲು ಸತೀಶ್ ಯೋಜನೆ ರೂಪಿಸಿದ್ದಾರೆ. ಈ ಮೂಲಕ ಅಲ್ಪಸಂಖ್ಯಾತರ ರಕ್ಷಕನಾಗಿ ಬಿಂಬಿಸಿಕೊಳ್ಳುವ ತಂತ್ರ ಜಾರಕಿಹೊಳಿ ಅವರದ್ದಾಗಿದೆ.
ಇತ್ತ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧವೂ ಶಿಸ್ತು ಕ್ರಮದ ತೂಗುಗತ್ತಿ ನೇತಾಡುತ್ತಿದ್ದು, ಸಿದ್ದರಾಮಯ್ಯ ಅವರು ಜಮೀರ್ ಬೆನ್ನಿಗೆ ನಿಂತಿದ್ದಾರೆ. ಜಾರಕಿಹೊಳಿ ಮತ್ತು ಮಹದೇವಪ್ಪ ಅವರು ಜಮೀರ್ ಜೊತೆ ಉಪಾಹಾರ ಸಭೆ ನಡೆಸಿರುವುದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಹೊಸ ಮೈತ್ರಿಗೆ ಸಾಕ್ಷಿಯಾಗಿದೆ. ಇದು ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಣಕ್ಕೆ ಸವಾಲು ಹಾಕುವಂತಿದೆ ಎನ್ನಲಾಗುತ್ತಿದೆ. ಏಕೆಂದರೆ, ಅಲ್ಪಸಂಖ್ಯಾತ ನಾಯಕರ ವಿರುದ್ಧದ ವರದಿಯನ್ನು ರಾಜ್ಯ ಉಸ್ತುವಾರಿ ಮೂಲಕ ಹೈಕಮಾಂಡ್ಗೆ ತಲುಪಿಸುವಲ್ಲಿ ಡಿ ಕೆ ಶಿವಕುಮಾರ್ ಪಾತ್ರವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬೆಳವಣಿಗೆಗಳ ನಡುವೆ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆ ಪಕ್ಷದ ಒಳಗೆ ಬಾಂಬ್ ಸಿಡಿಸಿದಂತಿದೆ. ತಮ್ಮ ಬೆಂಬಲಿಗರನ್ನು ರಕ್ಷಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂದು ರಾಜಣ್ಣ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಈ ಹಿಂದೆ ಸಂಪುಟದಿಂದ ಕೈಬಿಟ್ಟಿದ್ದ ಸಂದರ್ಭದ ಕಹಿ ನೆನಪನ್ನು ಮೆಲುಕು ಹಾಕಿರುವ ರಾಜಣ್ಣ, ಅತ್ತ ಎಚ್ ಡಿ ರೇವಣ್ಣ ಅವರೊಂದಿಗೆ ಸಂಪರ್ಕದಲ್ಲಿರುವುದು ಕಾಂಗ್ರೆಸ್ ಪಾಳಯದಲ್ಲಿ ದಳಪತಿಗಳ ಗಾಳಕ್ಕೆ ಬಲಿಯಾಗುತ್ತಾರೆಯೇ ಎಂಬ ಅನುಮಾನ ಮೂಡಿಸಿದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಕೂಡ ಇದೇ ವಿಷಯವನ್ನು ಇಟ್ಟುಕೊಂಡು ಸಿದ್ದರಾಮಯ್ಯ ಬಹಳ ಹಿಂದೆಯೇ ಅಸಹಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಆದರೆ ಸಿದ್ದರಾಮಯ್ಯ ಅವರ ಮೌನವನ್ನು ಸಮರ್ಥಿಸಿಕೊಂಡಿರುವ ಸಚಿವ ಮಹದೇವಪ್ಪ, ಮುಖ್ಯಮಂತ್ರಿಗಳನ್ನು ಟಗರಿಗೆ ಹೋಲಿಸಿದ್ದಾರೆ. ಟಗರು ಯಾವಾಗ ಗುದ್ದಬೇಕು, ಯಾವಾಗ ಸುಮ್ಮನಿರಬೇಕು ಎಂಬುದು ಅದಕ್ಕೆ ಚೆನ್ನಾಗಿ ಗೊತ್ತು. ಸಿದ್ದರಾಮಯ್ಯ ದುರ್ಬಲರಲ್ಲ, ಅವರು ಸಮನ್ವಯತೆ ಕಾಪಾಡಲು ತಾಳ್ಮೆ ವಹಿಸಿದ್ದಾರೆ ಎಂದು ಮಹದೇವಪ್ಪ ಗುಡುಗಿದ್ದಾರೆ. ಒಟ್ಟಾರೆಯಾಗಿ ದಾವಣಗೆರೆ ದಂಗಲ್ ಕರ್ನಾಟಕ ಕಾಂಗ್ರೆಸ್ ನ ಒಳಜಗಳವನ್ನು ಬೀದಿಗೆ ತಂದಿದ್ದು, ಸತೀಶ್ ಜಾರಕಿಹೊಳಿ ಅವರು ಅಹಿಂದ ನಾಯಕನಾಗಿ ಹೊರಹೊಮ್ಮಲು ಈ ಬಿಕ್ಕಟ್ಟನ್ನು ಮೆಟ್ಟಿಲಾಗಿಸಿಕೊಳ್ಳುತ್ತಿರುವುದು ಮಾತ್ರ ಸ್ಪಷ್ಟವಾಗಿದೆ.







