ಬೆಳಗಾವಿ : ಕುಂದಾ ನಗರಿ ರಾಜಕಾರಣದಲ್ಲಿ ಕುಕ್ಕರ್ ವಿಚಾರವಾಗಿ ಸಚಿವ ರಮೇಶ್ ಜಾರಕಿಹೊಳಿ – ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ವಾಗ್ಯುದ್ಧ ನಡೆಯುತ್ತಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಕುಕ್ಕರ್ ಬಂದ್ ಮಾಡೋದು, ಸ್ಟಾರ್ಟ್ ಮಾಡೋದು ನಮ್ಮ ಬಳಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ, ಯಾರು ಸುಳ್ಳು ಹೇಳುತ್ತಾರೆ, ನಿಜ ಹೇಳ್ತಾರೆ ಅನ್ನೋದು ಗೊತ್ತಿಲ್ಲ. ಕುಕ್ಕರ್ ಬಂದ್ ಮಾಡೋದು ಸ್ಟಾರ್ಟ್ ಮಾಡೋದು ನಮ್ಮ ಬಳಿಯೂ ಇಲ್ಲ. ಇಬ್ಬರು ದೇವಸ್ಥಾನಕ್ಕೆ ಹೋಗಿ ಆಣೆ ಪ್ರಮಾಣ ಮಾಡಿ ತಾವು ಸತ್ಯವಂತರು ಅನ್ನೋದನ್ನ ಸಾಬೀತು ಮಾಡಲಿ ಎಂದರು.
ಇನ್ನು ರಮೇಶ್ ಜಾರಕಿಹೊಳಿ 2018ರ ಅಸೆಂಬ್ಲಿ ಎಲೆಕ್ಷನ್ ನಲ್ಲಿ ನನ್ನ ಹಣದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ಕುಕ್ಕರ್ ಹಂಚಿದ್ದೆ ಎಂದಿದ್ದರು. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೆಬ್ಬಾಳ್ಕರ್ ಆರೋಪಕ್ಕೆ ತಿರುಗೇಟು ನೀಡಿದ್ದ ಸಚಿವರು, ಮನೆ ದೇವರ ಮುಂದೆ ಆಣೆ ಮಾಡಲಿ ಎಂದು ಸವಾಲು ಹಾಕಿದ್ದರು.








