ಜಾಗತಿಕ ಭೂಪಟದಲ್ಲಿ ಸಿಲಿಕಾನ್ ಸಿಟಿ ಎಂದು ರಾರಾಜಿಸುತ್ತಿರುವ ನಮ್ಮ ಬೆಂಗಳೂರು, ಅಭಿವೃದ್ಧಿಯ ಓಟದಲ್ಲಿ ತನ್ನ ಮೂಲ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತಿದೆಯೇ? ಉದ್ಯೋಗ ಅರಸಿ ಬರುವ ಪರಭಾಷಿಗರ ಪ್ರವಾಹದಲ್ಲಿ ಕನ್ನಡದ ಕಂಪು ಮರೆಯಾಗುತ್ತಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕನ್ನಡಿಗರ ಆತಂಕಕ್ಕೆ ಧ್ವನಿಯಾಗುವಂತೆ ಅಪರಾಜಿತೆ ಎನ್ನುವವರು ಎಕ್ಸ್ ತಾಣದಲ್ಲಿ ಹಂಚಿಕೊಂಡ ಒಂದು ಪೋಸ್ಟ್, ಈಗ ನಿದ್ದೆಯಲ್ಲಿದ್ದ ಕನ್ನಡಿಗರನ್ನು ಬಡಿದೆಬ್ಬಿಸಿ ಗಂಭೀರ ಚಿಂತನೆಗೆ ಹಚ್ಚಿದೆ.
ವೈರಲ್ ಟ್ವೀಟ್ ಸ್ಫೋಟಿಸಿದ ಸತ್ಯವೇನು?
ಬೆಂಗಳೂರಿನ ಜನಸಂಖ್ಯಾ ಸ್ವರೂಪ ಹೇಗೆ ಬದಲಾಗಿದೆ ಎಂಬುದನ್ನು ಬಹಳ ನೈಜವಾಗಿ ಹಾಗೂ ಚುಚ್ಚುವಂತೆ ಆ ಪೋಸ್ಟ್ ವಿವರಿಸಿದೆ. ಬೆಂಗಳೂರಿನ ಪ್ರಮುಖ ಬಡಾವಣೆಗಳನ್ನು ಭಾರತದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಲಾಗಿದ್ದು, ಕೋರಮಂಗಲ ಎಂದರೆ ಮಿನಿ ಉತ್ತರ ಭಾರತ, ಎಲೆಕ್ಟ್ರಾನಿಕ್ ಸಿಟಿ ಎಂದರೆ ಹೊಸ ಆಂಧ್ರಪ್ರದೇಶ, ಸರ್ಜಾಪುರ ಎಂದರೆ ಬಿಹಾರ, ಟಿ.ಸಿ ಪಾಳ್ಯ ಕೇರಳವಾದರೆ, ಜಾಲಹಳ್ಳಿ ಮಿನಿ ಬೆಂಗಾಲ್ ಮತ್ತು ದಕ್ಷಿಣ ಬೆಂಗಳೂರು ತಮಿಳುನಾಡು ಆಗಿದೆ ಎಂದು ಪೋಸ್ಟ್ ಮಾಡಲಾಗಿದೆ. ಮೇಲ್ನೋಟಕ್ಕೆ ಇದೊಂದು ಹಾಸ್ಯದಂತೆ ಕಂಡರೂ, ಇದರ ಆಳದಲ್ಲಿ ಅಡಗಿರುವ ಸತ್ಯ ಕನ್ನಡಿಗರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ನೆಟ್ಟಿಗರ ವಾದ ವಿವಾದ ಮತ್ತು ಮಿಶ್ರ ಪ್ರತಿಕ್ರಿಯೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಾಜಧಾನಿಯಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆಯೇ ಎಂಬ ಆತಂಕ ಹಲವರಲ್ಲಿ ಮನೆಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವರು, ಮಾರತಹಳ್ಳಿಯನ್ನು ಮಿನಿ ಹೈದರಾಬಾದ್ ಎಂದು ಕರೆದರೆ, ಇನ್ನು ಕೆಲವರು ಮೆಜೆಸ್ಟಿಕ್ ಮಾತ್ರ ಈಗ ನಮ್ಮದಾಗಿ ಉಳಿದಿದೆ ಎಂದು ವ್ಯಂಗ್ಯದ ಮೂಲಕವೇ ವಾಸ್ತವವನ್ನು ತೆರೆದಿಟ್ಟಿದ್ದಾರೆ.
ಆದರೆ ಭರವಸೆಯ ಬೆಳಕಿನಂತೆ ಮಾತನಾಡಿರುವ ಅಪ್ಪಟ ಬೆಂಗಳೂರಿಗರು, ಬೆಂಗಳೂರಿನ ಅಸಲಿ ಸೊಗಡು, ಸಂಸ್ಕೃತಿ ಇಂದಿಗೂ ಬಸವನಗುಡಿ, ಜಯನಗರ, ಮಲ್ಲೇಶ್ವರಂ ಮತ್ತು ವಿಜಯನಗರದಂತಹ ಹಳೆಯ ಬಡಾವಣೆಗಳಲ್ಲಿ ಜೀವಂತವಾಗಿದೆ. ಅಲ್ಲಿಗೆ ಬಂದರೆ ನಿಮಗೆ ನಿಜವಾದ ಬೆಂಗಳೂರು ಸಿಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಈ ಚರ್ಚೆಯು ಕೇವಲ ಏರಿಯಾಗಳ ಹೆಸರಿಗೆ ಸೀಮಿತವಾಗದೆ ಭಾಷಾಭಿಮಾನದ ಕಡೆಗೂ ತಿರುಗಿದೆ. ಪಕ್ಕದ ತಮಿಳುನಾಡಿನ ರಾಜಧಾನಿ ಚೆನ್ನೈನ ಉದಾಹರಣೆ ನೀಡಿರುವ ನೆಟ್ಟಿಗರು, ಚೆನ್ನೈನಲ್ಲಿ ಹೊರರಾಜ್ಯದ ಭದ್ರತಾ ಸಿಬ್ಬಂದಿಯೂ ಕೇವಲ ಆರು ತಿಂಗಳು ಅಥವಾ ಒಂದು ವರ್ಷದೊಳಗೆ ತಮಿಳು ಮಾತನಾಡಲು ಕಲಿಯುತ್ತಾರೆ. ಇದಕ್ಕೆ ಕಾರಣ ಅಲ್ಲಿನ ಸ್ಥಳೀಯರು ತಮಿಳಿನಲ್ಲೇ ವ್ಯವಹರಿಸುವುದು. ಆದರೆ ಬೆಂಗಳೂರಿನಲ್ಲಿ ಕನ್ನಡಿಗರೇ ಉದಾರಿಗಳಾಗಿ ಪರಭಾಷೆಯಲ್ಲಿ ಮಾತನಾಡುವುದರಿಂದ ವಲಸಿಗರಿಗೆ ಕನ್ನಡ ಕಲಿಯುವ ಅನಿವಾರ್ಯತೆಯೇ ಇಲ್ಲದಂತಾಗಿದೆ ಎಂದು ಕನ್ನಡಿಗರ ಮೇಲೆಯೇ ಬೆರಳು ತೋರಿಸಿದ್ದಾರೆ.
ಭಾರತದ ಸಂವಿಧಾನದ ಪ್ರಕಾರ ದೇಶದ ಪ್ರಜೆ ಎಲ್ಲಿ ಬೇಕಾದರೂ ವಾಸಿಸಬಹುದು, ಹೀಗಾಗಿ ಇದನ್ನು ವಿರೋಧಿಸುವುದು ಸರಿಯಲ್ಲ ಎಂಬ ವಾದವೂ ಕೇಳಿಬಂದಿದೆ. ಕನ್ನಡಿಗರು ಕೂಡ ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ನೆಲೆಸಿದ್ದಾರೆ, ಇದು ಭಾರತದ ವೈವಿಧ್ಯತೆ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಆದರೆ, ಎಷ್ಟೇ ವೈವಿಧ್ಯತೆ ಇದ್ದರೂ ಸ್ಥಳೀಯ ನೆಲದ ಕಾನೂನು, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ವಲಸಿಗರ ಆದ್ಯ ಕರ್ತವ್ಯ. ಬೆಂಗಳೂರಿನ ಅನ್ನ ತಿಂದು ಇಲ್ಲಿನ ಭಾಷೆಯನ್ನೇ ಕಡೆಗಣಿಸುವುದು ಸರಿಯಲ್ಲ ಎಂಬ ಖಡಕ್ ಮಾತುಗಳು ಕೇಳಿಬಂದಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರು ಇಂದು ಕೇವಲ ಒಂದು ನಗರವಲ್ಲ, ಅದೊಂದು ಬೃಹತ್ ಆರ್ಥಿಕ ಶಕ್ತಿ. ಊರು ಬೆಳೆಯಲಿ, ನಗರ ಕಾಸ್ಮೋಪಾಲಿಟನ್ ಆಗಲಿ, ಆದರೆ ಅದರ ಆತ್ಮ ಮಾತ್ರ ಕನ್ನಡವಾಗಿಯೇ ಇರಲಿ. ಅಭಿವೃದ್ಧಿಯ ಅಬ್ಬರದಲ್ಲಿ ಮಣ್ಣಿನ ಮಕ್ಕಳ ಅಸ್ಮಿತೆ ಕಳೆದುಹೋಗಬಾರದು ಎಂಬುದು ಪ್ರತಿಯೊಬ್ಬ ಕನ್ನಡಿಗನ ಒಕ್ಕೊರಲ ಆಶಯವಾಗಿದೆ. ಈ ವೈರಲ್ ಪೋಸ್ಟ್ ಕೇವಲ ಚರ್ಚೆಗೆ ಸೀಮಿತವಾಗದೆ, ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಎಚ್ಚರಿಕೆಯ ಗಂಟೆಯಾಗಬೇಕಿದೆ.








