ಬೆಳಗಾವಿ: ಕುಂದಾನಗರಿ ಬೆಳಗಾವಿಯ ರಾಜಕಾರಣ ಸದಾ ಕುತೂಹಲದ ಕೇಂದ್ರಬಿಂದು. ಇದೀಗ ಮತ್ತೊಮ್ಮೆ ಜಾರಕಿಹೊಳಿ ಸಹೋದರರ ನಡುವಿನ ವಾಕ್ಸಮರ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. 2028ಕ್ಕೆ ಸತೀಶ್ ಜಾರಕಿಹೊಳಿ ಮಾಜಿ ಆಗಲಿದ್ದಾರೆ ಎಂಬ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರ ಸ್ಪೋಟಕ ಹೇಳಿಕೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸಚಿವರು ದೆಹಲಿ ಪ್ರವಾಸಕ್ಕೆ ಸಜ್ಜಾಗಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಅಣ್ಣನ ಭವಿಷ್ಯವಾಣಿಗೆ ತಮ್ಮನ ಮಾರ್ಮಿಕ ಉತ್ತರ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಸತೀಶ್ ಜಾರಕಿಹೊಳಿ ರಾಜಕೀಯ ಭವಿಷ್ಯದ ಬಗ್ಗೆ ಆಡಿದ ಮಾತುಗಳಿಗೆ ಸಚಿವರು ಗಂಭೀರ ಹಾಗೂ ವ್ಯಂಗ್ಯ ಮಿಶ್ರಿತ ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಅವರು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ಮನಸ್ಸಿಲ್ಲದಿದ್ದರೂ ಪಕ್ಷದ ಒತ್ತಡಕ್ಕೆ ಮಣಿದು ಮಾತನಾಡಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಹೇಳುವ ಮೂಲಕ, ರಮೇಶ್ ಹೇಳಿಕೆ ಕೇವಲ ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದಾರೆ.
ಅಲ್ಲದೆ, ಬೆಳಗಾವಿ ರಾಜಕಾರಣದ ಒಳಸುಳಿಯನ್ನು ಬಿಚ್ಚಿಟ್ಟ ಸಾಹುಕಾರ್, ಸಹಕಾರ ರಂಗದಲ್ಲಿ ನಾವೆಲ್ಲರೂ ಒಂದೇ. ಅಲ್ಲಿ ಮೂರು ಪಕ್ಷದವರು ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಮೂಲಕ ಪರೋಕ್ಷವಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ರವಾನಿಸಿ, ವಿರೋಧಿಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸುವ ಸೂಚನೆ ನೀಡಿದ್ದಾರೆ.
ಸಿದ್ದು ಡಿನ್ನರ್ ಪಾಲಿಟಿಕ್ಸ್ ಮತ್ತು ಮಹದೇವಪ್ಪ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಊಟ ಮಾಡಿದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಕಳೆದ ಬಾರಿ ಸಿಎಂ ಯಾಕೆ ಹೋಗಿಲ್ಲ ಎಂದು ಕೇಳಿದ್ದಿರಿ, ಈಗ ಹೋಗಿದ್ದಾರೆ ಅಷ್ಟೇ ಎಂದು ಮಾಧ್ಯಮದವರ ಪ್ರಶ್ನೆಗೆ ಜಾರಿಕೊಂಡರು. ತಾವು ಸೈಲೆಂಟ್ ಆಗಿಲ್ಲ, ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.
ವಿದೇಶ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಅವರು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರೊಂದಿಗೆ ಮಹತ್ವದ ರಹಸ್ಯ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಮಹದೇವಪ್ಪ ಅವರೊಂದಿಗೆ ಸಾಹುಕಾರ್ ಮಾತುಕತೆ ನಡೆಸಿರುವುದು, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸದ ಸಂದರ್ಭದಲ್ಲೇ ನಡೆದಿರುವುದು ಬಣ ರಾಜಕೀಯದ ತೀವ್ರತೆಯನ್ನು ತೋರಿಸುತ್ತಿದೆ.
ಹೈಕಮಾಂಡ್ ಅಂಗಳಕ್ಕೆ ಬೆಳಗಾವಿ ಸಾಹುಕಾರ್
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಮತ್ತು ಬಣ ರಾಜಕೀಯದ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ, ಸತೀಶ್ ಜಾರಕಿಹೊಳಿ ಅವರು ಜನವರಿ 21 ಮತ್ತು 22 ರಂದು ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಕೆ.ಜೆ. ಜಾರ್ಜ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಹೊತ್ತಿನಲ್ಲಿ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಗತ್ಯಬಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ ಎಂಬುದು ಮಹತ್ವ ಪಡೆದುಕೊಂಡಿದೆ.
ಮುಗಿಯದ ನಾಯಕತ್ವ ಗೊಂದಲ
2025ರ ನವೆಂಬರ್ ಸುಮಾರಿಗೆ ಆರಂಭವಾದ ನಾಯಕತ್ವ ಬದಲಾವಣೆಯ ಚರ್ಚೆಗೆ ಇನ್ನೂ ಪೂರ್ಣವಿರಾಮ ಬಿದ್ದಿಲ್ಲ. ಸಂಕ್ರಾಂತಿ ಮುಗಿದರೂ ಕಾಂಗ್ರೆಸ್ ನಾಯಕರ ಬಣ ಜಗಳ ಶಮನವಾಗಿಲ್ಲ. ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಕಲ ತಯಾರಿ ನಡೆಸುತ್ತಿದ್ದರೆ, ತೆರೆಮರೆಯಲ್ಲಿ ಕುರ್ಚಿ ಕಸರತ್ತು ಜೋರಾಗಿಯೇ ಸಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸತೀಶ್ ಜಾರಕಿಹೊಳಿ ಅವರ ದೆಹಲಿ ಭೇಟಿ ರಾಜ್ಯ ಕಾಂಗ್ರೆಸ್ ನಲ್ಲಿ ಯಾವ ಹೊಸ ತಿರುವು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.








