ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪ ಸಂಪಾದಕಿ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಅವರು ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಕೋಡಿಯವರಾದ ಸೀತಾಲಕ್ಷ್ಮೀ ಪರಾಮರ್ಶೆ, ಮುಕ್ತಮಾತು, ಬಿ.ವಿ.ಅರ್ತಿಕಜೆ, ರಂಗಕರ್ಮಿ ಸದಾನಂದ ಸುವರ್ಣ ಸಂಪದ ಮೊದಲಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರ ತಂದೆ ಹಿರಿಯ ಸಾಹಿತಿ ವಿ.ಗ. ನಾಯಕ ಶಿಕ್ಷಕ ವೃತ್ತಿ ಸೇರಿದ ಬಳಿಕ ದಕ್ಷಿಣ ಕನ್ನಡದ ಅಡ್ಯನಡ್ಕಕ್ಕೆ ಬಂದಿದ್ದ ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಅಡ್ಯನಡ್ಕದಲ್ಲಿ ಪಡೆದರು. ನಂತರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದ ಸೀತಾಲಕ್ಷ್ಮೀ ಬಳಿಕ ಕನ್ನಡದಲ್ಲಿ ಎಂ ಎ ಮಾಡಿದರು. ಪ್ರತಿಭಾನ್ವಿತೆಯಾಗಿದ್ದ ಸೀತಾಲಕ್ಷ್ಮೀ ಅವರು ಮಾಸ್ತಿಯವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ ಎಂದ ಮಹಾ ಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ಮತ್ತು ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬೈ ವಿವಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದರು.
ಕಳೆದ ಹಲವು ವರ್ಷಗಳಿಂದ ತಂದೆ ವಿ.ಗ. ನಾಯಕ ಮತ್ತು ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು. ಸೀತಾಲಕ್ಷ್ಮೀ ಅವರು ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಕೊಡುಗೆಗೆ ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ಜೆಡಿಎ ಪ್ರಶಸ್ತಿ ಲಭಿಸಿದೆ.








