ಶರಾವತಿ ನದಿಯ ಮೇಲೆ ಹಿಂದಿನ ಸರ್ಕಾರ ಕಣ್ಣು ಹಾಕಿದ್ದಕ್ಕೆ ಮಲೆನಾಡಿಗರು ರೊಚ್ಚಿಗಿದ್ದೆ ಬೀದಿಗಿಳಿದಿದ್ದರು. ಆಗಿದ್ದ ಸಮ್ಮಿಶ್ರ ಸರ್ಕಾರ ಈ ಪ್ರತಿಭಟನೆಯ ಬಿಸಿ ತಾಳಲಾರದೇ ಬೆಂಗಳೂರಿಗೆ ಶರಾವತಿ ನದಿ ತರುವ ಯೋಜನೆಯನ್ನು ಕೈಬಿಟ್ಟಿತ್ತು. ಆಗ ಶರಾವತಿ ನದಿಯ ಯೋಜನೆಯನ್ನು ವಿರೋಧಿಸಿದ್ದ ಪಕ್ಷವೇ ಈಗ ಅಧಿಕಾರದಲ್ಲಿದೆ. ಆದರೆ ವಿಪರ್ಯಾಸ ಅವತ್ತು ಶರಾವತಿಯ ತಂಟೆಗೆ ಬಂದರೆ ಸುಮ್ಮನಿರಲ್ಲ ಅಂತ ಗುಡುಗಿದ ಪಕ್ಷ ಈಗ ಶರಾವತಿ ನದಿಯ ಸತ್ಯನಾಶಕ್ಕೆ ಮುಂದಾಗಿದೆ. ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆಯೆಂಬ ಪರಮ ಮೂರ್ಖ ಪರಿಸರ ನಾಶದ ಯೋಜನೆಗೆ ವನ್ಯಜೀವಿ ಮಂಡಳಿಯ ಅನುಮತಿ ಪಡೆದುಕೊಂಡು ಸರ್ವೇ ನಡೆಸಲು ಮುಂದಾಗಿದೆ. ಮಾನವ ಪ್ರವೇಶಿಸರದ ದುರ್ಗಮ ದಟ್ಟಾರಣ್ಯ ಶರಾವತಿ ಕೊಳ್ಳದ ಭಾಗದಲ್ಲಿ ಅಂತರ್ಗತ 2500 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಗೆ ಸದ್ದಿಲ್ಲದೆ ಚಾಲನೆ ನೀಡುವ ಹುನ್ನಾರ ನೀಡಲಾಗಿದೆ. ಇದರಿಂದ ನಾಶವಾಗುವ ಅರಣ್ಯ ಕನಿಷ್ಟವೆಂದರೂ ಸಾವಿರ ಎಕರೆ. ಇದು ಅಳಿವಿನಂಚಿನಲ್ಲಿರುವ ಅಪರೂಪದ ಜೀವಪ್ರಬೇದ ಸಿಂಗಳೀಕಗಳ ವಾಸಸ್ಥಳ. ಹಣ ದೋಚುವ ಸರ್ಕಾರಗಳಿಗೆ ವನ್ಯಜೀವಿಗಳ ಮಹತ್ವ ಎಲ್ಲಿಂದ ಅರ್ಥವಾಗಬೇಕು. ಈ ಮಧ್ಯೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಹಳೆಯ ಯೋಜನೆ ಯಾವತ್ತಿಗಾದರೂ ಮತ್ತೆ ಜೀವ ಪಡೆದುಕೊಳ್ಳುವ ಅಪಾಯವಿದೆ. ಮೊದಲ ಹಂತದ ಯೋಜನೆಗೆ ಬರೋಬ್ಬರಿ 12500 ಕೋಟಿ ಎನ್ನುವ ಅಂದಾಜು ಯಾವುದೇ ಸರ್ಕಾರಗಳಿಗಾದರೂ ಬಾಯಲ್ಲಿ ನೀರು ಹರಿಸುತ್ತದೆ. ಹೀಗಾಗಿ ಈಗಿರುವ ಬಿಜೆಪಿ ಸರ್ಕಾರವೂ ಒಂದು ವೇಳೆ ಮತ್ತೆ ಇದೇ ಅನಿಷ್ಟ ಯೋಜನೆಯನ್ನು ಬೇರೆ ಸ್ವರೂಪದಲ್ಲಿ ಜಾರಿ ಮಾಡಿದರೂ ಅಚ್ಚರಿಯೇನಲ್ಲ. ಈ ನಿಟ್ಟಿನಲ್ಲಿ ಒಂದು ವರ್ಷದ ಹಿಂದೆ ನಾನು ಬರೆದ ಲೇಖನವೊಂದನ್ನು ಮತ್ತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
*
ಶರಾವತಿ ನದಿ ಯಾಕೆ ಬೆಂಗಳೂರಿಗೆ ಬೇಡ ಅನ್ನುವ ಮಲೆನಾಡಿಗರ ಆಗ್ರಹದ ಹಿಂದೆ ಹತ್ತಾರು ಕಾರಣಗಳಿವೆ. ಕೆಲವು ತಾಂತ್ರಿಕ ಕಾರಣಗಳು ಹಾಗೂ ಕೆಲವು ಪಾರಿಸರಿಕ ಕಾರಣಗಳನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ. ಇದೆಲ್ಲಾ ಓದಿದ ನಂತರ ರಾಜ್ಯದ ಯಾವುದೇ ಭಾಗದ ಪ್ರಜ್ಞಾವಂತ ಓದುಗನೂ ಈ ಯೋಜನೆಯ ಪರವಾಗಿ ನಿಲ್ಲಲಾರ. ಇಲ್ಲಿ ಆಳುವ ಸರ್ಕಾರದ ಪ್ರತಿನಿಧಿಗಳಾದ ಪರಮ ನೀಚ ದುರುಳ ಅಯೋಗ್ಯ ಅವಿವೇಕಿ ಜನಪ್ರತಿನಿಧಿಗಳಿಗೆ ಒಂದಷ್ಟು ಸರಳ ಪ್ರಶ್ನೆಗಳಿವೆ. ಅವುಗಳಿಗೆ ಉತ್ತರಿಸಲಿ ಮೊದಲು. ಯೋಜನೆಯ ಡಿಪಿಆರ್ರೋ ಮತ್ತೊಂದು ಅದು ನಂತರದ್ದು.
420 ಕಿಲೋ ಮೀಟರ್ ದೂರದ ಶರಾವತಿ ನದಿ ಕೊಳ್ಳದ ನೀರನ್ನು ಎಲ್ಲಿಂದ ಬೆಂಗಳೂರಿಗೆ ತಿರುಗಿಸುತ್ತೀರಿ? ಇದನ್ನು 1500 ಅಡಿ ಎತ್ತರದ ಬೆಂಗಳೂರಿಗೆ ಹರಿಸಲು ವಾಸ್ತವದಲ್ಲಿ ಸಾಧ್ಯವೇ?
ಬೆಂಗಳೂರಿನ ಭೌಗೊಳಿಕ ಭಾಗವೇ ಅಲ್ಲದ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಹರಿಸಲು ಹೊರಟಿದ್ದೀರಿ ನೀವು. ಅಂದರೆ ಪಾತಾಳದಲ್ಲಿರುವ ನೀರನ್ನು ಶಿಖರಕ್ಕೆ ಹರಿಸುವ ಮೂರ್ಖ ಯೋಜನೆ. ತಾಂತ್ರಿಕವಾಗಿ ಇದು ಸಾಧುವೇ? ಕೊಳವೆ ಮಾರ್ಗದಲ್ಲಿ ಹರಿಸುವುದಾದರೇ, ಎಷ್ಟು ಕೊಳವೆ ಬೇಕು? ಯಾವ ಗಾತ್ರದ ಕೊಳವೇ ಬೇಕು? ಎತ್ತರಿಸಿ ಪಂಪ್ ಮಾಡಲು ಎಷ್ಟು ಪ್ರಮಾಣದ ಮೋಟಾರ್ ಪಂಪ್ ಬೇಕು? ಇದಕ್ಕೆ ವ್ಯಯವಾಗುವು ವಿದ್ಯುಚ್ಛಕ್ತಿ ಎಷ್ಟು? ಸ್ಪಷ್ಟ ಚಿತ್ರಣ ನಿಮಗಿದೆಯಾ?
ಶರಾವತಿ ನೀರನ್ನು ಏರಿಸಿ ಹರಿಸಲು ಬಳಸುವ ವಿದ್ಯುತ್ ಎಲ್ಲಿಂದ ಖರೀದಿಸುತ್ತೀರಿ? ಶರಾವತಿ ನದಿ ನೀರು ಕುಡಿಯಲು ಬಳಕೆ ಮಾಡುವುದಾದರೇ ಸಹಜವಾಗಿ ಅಲ್ಲಿನ ಮಹಾತ್ಮ ಗಾಂಧಿ ವಿದ್ಯದ್ದಾಗರ, ಗೇರುಸೊಪ್ಪಾ ಪವರ್, ಶರಾವತಿ ಟೆಲ್ರೇಸ್ ಸ್ಥಗಿತಗೊಳ್ಳುತ್ತದೆ. ನಿಮ್ಮ ಅಸಲಿ ಯೋಜನೆ ಏನು ಎನ್ನುವ ಸ್ಪಷ್ಟತೆ ನಿಮ್ಮ ಬುದ್ಧಿವಂತ ಎಂಜಿನಿಯರ್ ಗಳಿಗೆ ಇದೆಯೇ? ಎಸಿ ರೂಮ್ ಗಳಲ್ಲಿ ಕುಳಿತು ಯೋಜನೆ ರೂಪಿಸುವ ನಿಮ್ಮ ತಾಂತ್ರಿಕ ತಜ್ಞರಿಗೆ ಗ್ರಾವಿಟೇಷನ್ ಫೋರ್ಸ್ ಎಂದರೇನು ಅನ್ನುವ ವಿಚಾರವೂ ತಿಳಿದಿಲ್ಲವೇ? ಶರಾವತಿ ಬೆಂಗಳೂರಿಗೆ ಗ್ರಾವಿಟೇಷನಲ್ ಫೋರ್ಸ್ ಮೂಲಕ ಹರಿಯಲು ಸಾಧ್ಯವೇ?
ಶರಾವತಿಯ ವಿದ್ಯುಚ್ಛಕ್ತಿ ಸ್ಥಗಿತಗೊಂಡರೆ ರಾಜ್ಯಕ್ಕೆ ಬೇರೆ ಯಾವ ಮೂಲದಿಂದ ವಿದ್ಯುತ್ ಪೂರೈಸುತ್ತೀರಿ? ಶರಾವತಿಯಾಗಲೀ ಅಥವಾ ಇನ್ನುಳಿದ ಯಾವುದೇ ನದಿಯ ನೀರಾಗಲೀ ಸಮುದ್ರಕ್ಕೆ ಸೇರುವುದು ವ್ಯರ್ಥ ಎಂದು ನಿಮಗೆ ತಿಳಿಸಿದ ಆ ಮಹಾನುಭಾವ ಪರಿಸರ ವಿಜ್ಞಾನಿ ಯಾರು? ಎಕ್ಸ್ ಪರ್ಟ್ ಕಮಿಟಿಯ ಮುಖ್ಯಸ್ಥ ಈ ತ್ಯಾಗರಾಜ್ ಅನ್ನುವ ಮಹಾಶಯನ ಪರಿಸರ ಜ್ಞಾನವೆಷ್ಟು?
ಎತ್ತಿನಹೊಳೆ ಅನ್ನುವ ಒಂದು ಶತಮೂರ್ಖ ಯೋಜನೆಯನ್ನು ನೀವು ಈಗಾಗಲೇ ತಯಾರಿಸಿ ವಿಫಗೊಂಡಿದ್ದೀರಿ. ಇದರ ಪರಿಣಾಮ ದಕ್ಷಿಣ ಕನ್ನಡದ ಕಾಡು ಪರಿಸರ ಸರ್ವನಾಶವಾಗಿದೆ. ಆನೆ ಕಾರಿಡಾರ್ ನಾಶಗೊಂಡಿದೆ. ಮಾನವ – ವನ್ಯಜೀವಿ ಸಂಘರ್ಷ ತೀವ್ರಗೊಳ್ಳಲಿದೆ. ಇಷ್ಟಾದರೂ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸಿದ್ರಾ? ತಾಂತ್ರಿಕವಾಗಿ ಅದೇ ವೈಫಲ್ಯ ಶರಾವತಿ ಯೋಜನೆಯಲ್ಲೂ ನೀವು ಅನುಭವಿಸುತ್ತೀರಿ. ಇದಕ್ಕೆ ಶರಾವತಿ ಯಾಕೆ ಬಲಿಯಾಗಬೇಕು? ನಿಮ್ಮ ಪ್ರಯೋಗದ ಬಲಿಪಶುಗಳಲ್ಲ ಮಲೆನಾಡಿನ ಜನ. ಯಾವ ಪುರುಷಾರ್ಥಕ್ಕಾಗಿ ಇಂಥದ್ದೊಂದು ಶತಮೂರ್ಖ ಯೋಜನೆ ಕಾರ್ಯಗತಗೊಳಿಸಲು ಹೊರಟಿದ್ದೀರಿ?
ತ್ಯಾಗರಾಜ್ ಸಮಿತಿಯಲ್ಲೇ ಇದ್ದ ಖ್ಯಾತ ಪರಿಸರ ತಜ್ಞ ಅ.ನ ಯಲ್ಲಪ್ಪರೆಡ್ಡಿ ಈ ಯೋಜನೆಯನ್ನು ವಿರೋಧಿಸಿದ್ದಾರೆ. ಐಐಎಸ್ಸಿ ಪರಿಸರ ವಿಜ್ಞಾನಿ ಟಿ.ವಿ ರಾಮಚಂದ್ರ ಎತ್ತಿನಹೊಳೆಯಂತೆಯೇ ಶರಾವತಿ ನದಿ ತಿರುವೂ ಸಹ ವ್ಯರ್ಥ ಹಾಗೂ ಮೂರ್ಖ ಯೋಜನೆ ಎಂದಿದ್ದಾರೆ. ಅದು ನಿಮ್ಮ ಗಮನಕ್ಕೆ ಯಾಕೆ ಬರುತ್ತಿಲ್ಲ? ನಿಮ್ಮ ಗುತ್ತಿಗೆದಾರರ ಲಾಭಿ, ಕಾರ್ಪೊರೇಟ್ ಲಾಭಿ, ಟಿಂಬರ್ ಮಾಫಿಯಾ ಲಾಭಿ ಹಾಗೂ ಮರಳು ಗಣಿಗಾರಿಕೆ ಲಾಭಿಗಾಗಿ ಮಲೆನಾಡನ್ನು ಸರ್ವನಾಶ ಮಾಡಲು ಹೊರಟಿದ್ದೀರಾ?
ಶರಾವತಿ ತಿರುವು ಪರಿಸರ ನಾಶಕ್ಕಷ್ಟೆ ಅಲ್ಲ ನಿಮ್ಮ ನಾಶಕ್ಕೊಂದು ಶಂಕುಸ್ಥಾಪನೆ:
ಎತ್ತಿನಹೊಳೆ ಯೋಜನೆ ಮಾಡಿ ನೇತ್ರಾವತಿ, ಕೆಂಪುಹೊಳೆ ಹಾಗೂ ಕುಮಾರಧಾರ ನದಿ ಪಾತ್ರದ ಅರಣ್ಯ ಸರ್ವನಾಶ ಮಾಡಿದ್ರಿ. ಕನಿಷ್ಟ 1 ಲಕ್ಷ ಮರಗಳನ್ನು ಈ ಯೋಜನೆ ಮೂಲಕ ಕಡಿದು ತಿಂದು ಹಾಕಿದ್ರಿ. ಮುಂಬರುವ ದಿನಗಳಲ್ಲಿ ಶಿರಾಡಿ ಘಟ್ಟದಲ್ಲಿ ಭೂಕುಸಿತವಾಗುವ ಸಾಧ್ಯತೆಯ ಅಪಾಯವನ್ನು ಭೂ ವಿಜ್ಞಾನಿಗಳು ಊಹಿಸುತ್ತಿದ್ದಾರೆ. ಮಲೆನಾಡನ್ನೂ ಸಹ ಇಂಥದ್ದೊಂದು ಅಪಾಯಕ್ಕೆ ದೂಡಬೇಕಿಂದಿದ್ದೀರಾ? ಶರಾವತಿ ನದಿ ತಿರುಗಿಸಿದರೆ ಅದರ ಪಾತ್ರದ ಸಮೃದ್ಧ ಸಹ್ಯಾದ್ರಿ ಘಟ್ಟ ಬರಿದಾಗುತ್ತದೆ. ಶರಾವತಿಯ ಎಲ್ಲಾ ಉಪನದಿಗಳೂ ಬತ್ತುತ್ತವೆ. ಸಮೃದ್ಧ ಸೂಕ್ಷ್ಮ ಜೀವ ವೈವಿಧ್ಯ ನಾಶವಾಗುತ್ತದೆ. ಶಿವಮೊಗ್ಗ ಜಿಲ್ಲೆಯ 5 ಅಭಯಾರಣ್ಯಗಳು ನಾಶವಾಗುತ್ತವೆ. ಮಲೆನಾಡು ತನ್ನ ಅಸ್ಮಿತೆ ಕಳೆದುಕೊಳ್ಳುತ್ತದೆ. ಇದು ಬೇಕಾ ನಿಮಗೆ?
ಶರಾವತಿ ಬತ್ತಿದರೆ ಕೇವಲ ಶರಾವತಿ ಮಾತ್ರ ನಾಶವಾಗುವುದಿಲ್ಲ. ಇದರೊಂದಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಸಂಪರ್ಕ ಹೊಂದಿರುವ ಶರಾವತಿಯ ಉಪನದಿಗಳಾದ ಬಾರಾಗಂಗಾ ಹೊಳೆಗಳೂ ಸೇರಿದಂತೆ, ಕುಶಾವತಿ, ಕುಮದ್ವತಿ ಹಾಗೂ ವರದಾದಂತಹ ನದಿಗಳೂ ಬತ್ತಿಹೋಗುತ್ತವೆ. ವರದಾ ಬಯಲುಸೀಮೆಯ ಹಾವೇರಿವರೆಗೂ ಹರಿದು ಹೋಗುತ್ತದೆ. ಇದಾ ನಿಮ್ಮ ಅಭಿವೃದ್ಧಿ? ಶರಾವತಿ ಬತ್ತಿದರೆ ಪರೋಕ್ಷವಾಗಿ ಇದರ ಪರಿಣಾಮ ತುಂಗೆಯ ಉಪನದಿಗಳಾದ ಮಾಲತಿ, ನಳಿನಿ, ನಂದಿನಿ, ಮಲಾಪಹರಿಣಿ, ಸೀತಾ ಎಂಬ ನರಸಿಂಹ ಪರ್ವತದಲ್ಲಿ ಹುಟ್ಟುವ ಪಂಚ ನದಿಗಳ ಮೇಲಾಗುವ ಸಾಧ್ಯತೆ ಇದೆ. ಇದನ್ನು ನಿಮಗೆ ಯಾವ ಬುದ್ದಿವಂತರೂ ಹೇಳಲಿಲ್ಲವೇ?
ಸಹ್ಯಾದ್ರಿ ಘಟ್ಟ ನಾಶವಾದರೇ ಪಶ್ಚಿಮ ಘಟ್ಟದ ಮುಖ್ಯವಾದ ನಿರ್ಣಾಯಕ ಕೊಂಡಿ ಕಳಚಿಕೊಂಡಂತೆ. ಸಹ್ಯಾದ್ರಿ ಘಟ್ಟಕ್ಕೆ ಹೊಂದಿಕೊಂಡಂತೇ ಇದೆ ನರಸಿಂಹ ಪರ್ವತ ಹಾಗೂ ದಕ್ಷಿಣ ಕನ್ನಡದ ಗಿರಿಶೃಂಗಗಳು. ಇವೆಲ್ಲವೂ ಭವಿಷ್ಯದಲ್ಲಿ ಒಂದೊಂದಾಗಿ ನಾಶವಾಗುತ್ತವೆ. ಇದಾ ನಿಮ್ಮ ಸೋ ಕಾಲ್ಡ್ ಜನಹಿತ? ಪಶ್ಚಿಮ ಘಟ್ಟವನ್ನು ನಾಶ ಮಾಡಿ ಅದ್ಯಾವ ಘನ ಕಾರ್ಯ ಸಾಧಿಸಬೇಕೆಂದಿದ್ದೀರಾ ಸ್ವಾಮಿ? ನೆನಪಿಡಿ ಮಲೆನಾಡು ಉಳಿದರೆ ಮಾತ್ರ ಕರುನಾಡು ಉಳಿಯುತ್ತದೆ. ನೀವು ಮಲೆನಾಡನ್ನು ನಾಶ ಮಾಡಿದರೆ ನೀರು, ನೆಲೆ, ನಾಡು, ಮಳೆ, ಬೆಳೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಮಲೆನಾಡಿಗೆ ಹೊಂದಿಕೊಂಡಿರುವ ಸಹ್ಯಾದ್ರಿ ತಪ್ಪಲಿನ ಪಶ್ಚಿಮ ಘಟ್ಟದ ಅರಣ್ಯ ಸಮೃದ್ಧ ಗಿಡಮೂಲಿಕೆ ವನೌಷದಿಗಳ ಭಂಡಾರ. ಇದನ್ನು ನಾಶ ಮಾಡಿ ಅದ್ಯಾವ ರಾಮ ರಾಜ್ಯ ಕಟ್ಟುತ್ತೀರಿ ನೀವು? ಆಗುಂಬೆ – ಶೃಂಗೇರಿ ಕಾಡುಗಳು ಅತ್ಯಂತ ಸೂಕ್ಷ ಜೀವ ವೈವಿಧ್ಯ ಹೊಂದಿರುವ ಅರಣ್ಯ. ಇದು ಪ್ರಪಂಚದಲ್ಲೇ ಅತಿ ದೊಡ್ಡ ಕಾಳಿಂಗ ಸರ್ಪಗಳ ನೆಲೆ. ಸೋಮೇಶ್ವರ ಅಭಯಾರಣ್ಯ ಅತ್ಯಂತ ವೈವಿಧ್ಯಮಯ ಗಿಡಮೂಲಿಕೆಗಳ ತವರು. ಶರಾವತಿ ಅಭಯಾರಣ್ಯವಂತೂ ಅಪರೂಪದ ಚಿಟ್ಟೆಗಳ, ಕಪ್ಪೆಗಳ, ಸೂಕ್ಷ್ಮ ಜೀವಿಗಳ ಆವಾಸ ಸ್ಥಾನ. ಹೊನ್ನಾವರ ಹಾಗೂ ಆಗುಂಬೆ ಕಾಡುಗಳಲ್ಲಿ ಐಯುಸಿಎನ್ ಎನ್ನುವ ಅಂತರಾಷ್ಟ್ರೀಯ ಸಂಸ್ಥೆಯೇ ಘೋಷಿಸಿರುವ ಸಿಂಗಳೀಕ ಎನ್ನುವ ಪ್ರಭೇದದ ಅಳಿವಿನಂಚಿನಲ್ಲಿರುವ ಮಂಗಗಳ ಕಾರಿಡಾರ್. ನಿಮ್ಮ ಒಂದು ಅಸಂಬದ್ಧ ಯೋಜನೆ ಈ ಎಲ್ಲಾ ಜೀವ ವೈವಿಧ್ಯಗಳನ್ನು ತಿಂದು ಹಾಕುತ್ತದೆ.
ಶರಾವತಿ ಕೊಳವೆ ಮಾರ್ಗ ನಿರ್ಮಾಣದಲ್ಲಿ ಕನಿಷ್ಟ 1 ಲಕ್ಷ ಮರಗಳ ಕಡಿತವಾಗುತ್ತದೆ. ಇದಾ ನಿಮ್ಮ ಪರಿಸರ ಪ್ರೇಮ? ಶರಾವತಿ ನದಿಯ ಸಮುದ್ರ ಸೇರುವ ನೀರು ವ್ಯರ್ಥ ಎನ್ನುವುದಾದರೇ ಹೊನ್ನಾವರ ಭಾಗದ ಜನರ ಬಾಯಿಗೇನು ಮಣ್ಣು ಸುರಿಯುತ್ತೀರಾ? ಅಲ್ಲಿನ ರೈತರು ನಿಮ್ಮ ಕುರುಡುಗಣ್ಣಿಗೆ ಕಾಣುತ್ತಿಲ್ಲವೇ? ಅವರಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಎಲ್ಲಿಂದ ನೀರು ಪೂರೈಸುತ್ತೀರಿ? ಈಗಾಗಲೇ ಹೊನ್ನಾವರ ಸುತ್ತಮುತ್ತಲಿನ ಭೂಮಿ ಹಾಗೂ ಅಂತರ್ಜಲದಲ್ಲಿ ಉಪ್ಪು ನೀರು ಜಮೆಯಾಗುತ್ತಿದೆ. ಶರಾವತಿಯ ಸಿಹಿ ನೀರು ಸಮುದ್ರ ಸೇರದೇ ಇದ್ದರೆ ಮುಂದಿನ ಭವಿಷ್ಯ ಭಯಾನಕ. ಸಿಹಿ ನೀರು ಸಮುದ್ರ ಸೇರುವ ಪ್ರದೇಶದ ಮೀನುಗಳು, ಸಮುದ್ರ ಪರಿಸರ ಇತ್ಯಾದಿ ವಿವರಗಳ ಕಿಂಚಿತ್ ಜ್ಞಾನವೇನಾದರೂ ನಿಮಗಿದೆಯೇ ಪ್ರಭುಗಳೇ?
ಶರಾವತಿ ತಿರುಗಿಸಿದರೇ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಮಾತ್ರವಲ್ಲ ಉಡುಪಿ – ಚಿಕ್ಕಮಗಳೂರು ಜಿಲ್ಲೆ ಜೊತೆಗೆ ಬಯಲುಸೀಮೆಗೂ ಅಪಾಯ ತಪ್ಪಿದ್ದಲ್ಲ. ಹತ್ತಿರದ ಲಾಭಕ್ಕಾಗಿ ದೂರದ ಅಪಾಯ ಯಾಕೆ ಮುಚ್ಚಿಡುತ್ತಿದ್ದೀರಿ ಜನಾನುರಾಗಿ ಜನಪ್ರಿಯ ಜನನಾಯಕರೇ?
ಹಳೆ ಮೈಸೂರು ಪ್ರಾಂತ್ಯದ ಪ್ರದೇಶ ಉದ್ದಾರಕ್ಕೆ ಯಾಕೆ ಮಲೆನಾಡು ಬಲಿಯಾಗಬೇಕು?ಬೆಂಗಳೂರಿನ ಆರ್ಥಿಕತೆಯ ಬೆಳವಣಿಗಾಗಿ ಮಲೆನಾಡಿನ ಸಾಮಾಜಿಕ ವ್ಯವಸ್ಥೆ ಕೊಲ್ಲುತ್ತೀರಾ? ಶರಾವತಿ ವಿದ್ಯುತ್ ಯೋಜನೆಗಾಗಿ ತಮ್ಮ ಬದುಕು ಬೇರು ತ್ಯಾಗ ಮಾಡಿದವರ ಬಗ್ಗೆ ಕನಿಷ್ಟ ಮಾತ್ರದ ಕೃತಜ್ಞತೆಯೂ ಇಲ್ಲವೇ ನಿಮಗೆ? ಶರಾವತಿ ಸಂತ್ರಸ್ತರನ್ನು ಇಲ್ಲಿಯವರೆಗೆ ತಿರುಗಿಯೂ ನೋಡದ ನೀವು ಈಗ ಮತ್ತೆ ಅದೇ ಸಂತ್ರಸ್ತರ ನೆಲೆ ಕಸಿದುಕೊಳ್ಳಲು ಬರುತ್ತೀರಿ. ನಿಮಗೆ ನೈತಿಕತೆ ಇದೆಯೇ? ಶರಾವತಿ ನೀರಿನ ಮೊದಲ ಹಕ್ಕು ಶರಾವತಿಗಾಗಿ ಬದುಕು ಕಳೆದುಕೊಂಡ ಸಂತ್ರಸ್ತರದ್ದು ಅದು ನ್ಯಾಯ – ಧರ್ಮ.
ಬೆಂಗಳೂರಿನ ಬಕಾಸುರ ಹೊಟ್ಟೆಗೆ ನೀವೆಷ್ಟೇ ನೀವು ತಂದು ಸುರಿದರೂ ಅರೆಕಾಸಿನ ಮಜ್ಜಿಗೆಯೇ. ಕಾವೇರಿ ವೃಷಭಾವತಿಯ ಗಟಾರ ಸೇರಿದಂತೆ ಶರಾವತಿಯೂ ಸೇರುತ್ತಾಳೆ ಅಷ್ಟೆ. ಬೆಂಗಳೂರಿನ ಕೃತಘ್ನ ವಲಸಿಗರಿಗೆ ಶರಾವತಿ ನದಿ ನೀರು ಕುಡಿಸಿ ಮಲೆನಾಡಿಗರ ಬಾಯಿಗೆ ಮಣ್ಣು ಸುರಿಯುತ್ತೀರಾ?
ಕುಡಿಯುವ ನೀರನ್ನು ಕಾರು, ಅಂಗಳ ಕಾಂಪೌಂಡ್ ತೊಳೆಯಲು ಬಳಸುವ ಏಕೈಕ ನಗರ ಬೆಂಗಳೂರು. ಅದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಬೆಂಗಳೂರಿನಲ್ಲಿ ಸುರಿಯುವ ವಾರ್ಷಿಕ ಸರಾಸರಿ 14 ಟಿಎಂಸಿ ನೀರು ಸಂಗ್ರಹಿಸಿ, ಅಂತರ್ಜಲ ಮಳೆ ಕೊಯ್ಲಿನ ಯೋಜನೆ ರೂಪಿಸಿ. ತ್ಯಾಜ್ಯ ನೀರಿನ ಮರುಸಂಸ್ಕರಣೆ ಮಾಡಿ. ಬೆಂಗಳೂರಿನಲ್ಲಿ ಈಗಲೂ ಜೀವಂತವಿರುವ 200 ಕ್ಕೂ ಹೆಚ್ಚಿನ ಕೆರೆಗಳನ್ನು ಅಭಿವೃದ್ಧಿ ಮಾಡಿ, ಜಲಮೂಲಗಳನ್ನು ದುರಸ್ತಿ ಮಾಡಿಸಿ. 12500 ಕೋಟಿಯ ಶೆ. 10 ಹಣ ವಿನಿಯೋಗಿಸಿ ಕೆರೆಗಳ ಹೂಳು ತೆಗೆಸಿ ಸಾಕು. ಬೆಂಗಳೂರೇ ಪಕ್ಕದ ಜಿಲ್ಲೆಗಳಿಗೆ ನೀರು ಕೊಡಲು ಶಕ್ತ್ಯವಾಗುತ್ತದೆ. ಶರಾವತಿ ನೀರನ್ನು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಹರಿಸಲು ಸಾಧ್ಯವಿಲ್ಲ. ಎಚ್ಚರ ಶರಾವತಿ ಮುಟ್ಟಿದರೆ ನಿಮ್ಮ ಸರ್ವನಾಶ ಖಂಡಿತ.
ಇವಿಷ್ಟು ಪ್ರಶ್ನೆಗಳಿಗೆ ಉತ್ತರಿಸಿ, ತರ್ಕಿಸಿ, ನಿಮ್ಮ ಸುತ್ತಮುತ್ತಲಿರುವ ಪರಿಸರ ತಜ್ಞರನ್ನು ಪ್ರಾಮಾಣಿಕವಾಗಿ ಅವಲೋಕಿಸಲು ಹೇಳಿ. ಕಳೆದ 10 ವರ್ಷಗಳಿಂದ ಶರಾವತಿ ಕೊಳ್ಳದಲ್ಲಿ ವಾಡಿಕೆ ಮಳೆಯೂ ಸಮರ್ಪಕವಾಗಿ ಆಗದೆ ಲಿಂಗನಮಕ್ಕಿ ಜಲಾಶಯ ತುಂಬುತ್ತಲೇ ಇಲ್ಲ. ನೀವು ನೀರು ತರಲು ಹೊರಟರೂ ಹನಿ ನೀರು ಬೆಂಗಳೂರು ಮುಟ್ಟುವುದಿಲ್ಲ. ಇಷ್ಟೆಲ್ಲಾ ಅವಿವೇಕತನ ಬೇಕಾ? ಮೊದಲು ಈ ಪರಮ ದರಿದ್ರ ಯೋಜನೆಯನ್ನು ನಿಲ್ಲಿಸಿ. ಇಲ್ಲವಾದರೆ ಮಲೆನಾಡಿಗರು ದಂಗೆಯೆದ್ದು ಕಪಾಳಮೋಕ್ಷ ಮಾಡುತ್ತಾರೆ. ಅದು ಸಾಮಾನ್ಯ ನೆಲವಲ್ಲ ಸಮಾಜವಾದಿ ಹೋರಾಟದ ಮೂಸೆಯಲ್ಲಿ ಪಕ್ವವಾದ ಹೋರಾಟದ ಭೂಮಿ ಅನ್ನೋದನ್ನು ಮರೆಯದಿರಿ ಮಾನ್ಯ ಮಾಹಾನುಭಾವರೇ!
– ವಿಶ್ವಾಸ್ ಭಾರದ್ವಾಜ್ (ವಿಭಾ)








