ಹಿಂದಿ ಭಾಷೆಗೆ ಭಾರೀ ಮೊತ್ತಕ್ಕೆ ಮಾರಾಟವಾಯಿತು “ಶಾರ್ದೂಲ” ಚಿತ್ರದ ಡಬ್ಬಿಂಗ್ ಹಕ್ಕು.
ಕಳೆದ ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಬಿಡುಗಡೆಗೊಂಡ, ಹಾರಾರ್ ಸಸ್ಪೆನ್ಸ್ ಕಥೆ ಆಧಾರಿತ “ಶಾರ್ದೂಲ” ಚಿತ್ರ ಬಿಡುಗಡೆಯಾಗಿತ್ತು.
ಈಗ ಈ ಚಿತ್ರದ ಹಿಂದಿ ಭಾಷೆಯ ಡಬ್ಬಿಂಗ್ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದೆ.
ಬೇರೆ ಭಾಷೆಗಳಿಂದಲ್ಲೂ ಈ ಚಿತ್ರದ ಡಬ್ಬಿಂಗ್ ಹಕ್ಕಿಗೆ ಹೆಚ್ಚು ಬೇಡಿಕೆ ಬರುತ್ತಿದೆ ಮತ್ತು ಟಿವಿ ರೈಟ್ಸ್ ಸಹ ಉತ್ತಮ ಮೊತ್ತಕ್ಕೆ ಮಾರಾಟವಾಗುವ ಹಂತದಲ್ಲಿದೆ ಎಂದು ನಿರ್ಮಾಪಕ ರೋಹಿತ್ ಶಾಂತಪ್ಪ ತಿಳಿಸಿದ್ದಾರೆ.
ಹೊಸ ನಿರ್ಮಾಪಕರು ಆತುರ ಪಡದೆ ಇದ್ದಲ್ಲಿ ನಾವು ಹಾಕಿದ ಬಂಡವಾಳದಲ್ಲಿ ಅರ್ಧದಷ್ಟನ್ನು ಹಿಂಪಡೆಯಬಹುದು ಎಂಬ ವಿಷಯವನ್ನು ರೋಹಿತ್ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಬಿಡಗಡೆಯ ನಂತರವೂ ಉತ್ತಮ ಪ್ರತಿಕ್ರಿಯೆ ದೊರಕಿರುವುದಕ್ಕೆ ನಿರ್ಮಾಪಕರು ಸಂತಸದಲ್ಲಿದ್ದಾರೆ.
ಭೈರವ ಸಿನಿಮಾಸ್ ಮತ್ತು ಸಿ ವಿ ಆರ್ ಸಿನಿಮಾಸ್ ಲಾಂಛನದಲ್ಲಿ ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ಸಿ ನಿರ್ಮಿಸಿರುವ ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ.
ಈ ಹಿಂದೆ ನಮ್ ಏರಿಯಲ್ಲೊಂದು ದಿನ, ತುಘಲಕ್ ಹಾಗೂ ಹುಲಿರಾಯ ಚಿತ್ರಗಳನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದರು.
ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ದೆವ್ವ ಇರಬಹುದ್ದಾ? ಎಂಬ ಅಡಿಬರಹವಿದೆ.
ವೈ.ಜಿ.ಆರ್ ಮನು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನ ಹಾಗು ಮಾಸ್ ಮಾದ, ವೈಲೆಂಟ್ ವೇಲು ಮತ್ತು ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ..
ಪಿ.ಯು.ಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್ ಚಂದ್ರ, ನಿರ್ದೇಶಕ, ನಟ ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ..