Shiv Sena : ಶಿಂಧೆ ಬಣ ನಿಜವಾದ ಶಿವಸೇನೆ – ಉದ್ಧವ್ ಠಾಕ್ರೆ ಗೆ ಆಘಾತಕಾರಿ ತೀರ್ಪಿತ್ತ ಚುನಾವಣಾ ಆಯೋಗ…
ಬಾಳ್ ಠಾಕ್ರೆ ಪುತ್ರ, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಭಾರೀ ಮುಖಭಂಗ ಅನುಭವಿಸಿದ್ದಾರೆ. ಮಹಾರಾಷ್ಟ್ರ ಸಿ ಎಂ ಏಕನಾಥ್ ಶಿಂಧೆ ಅವರ ಬಣವನ್ನ ಭಾರತೀಯ ಚುನಾವಣಾ ಆಯೋಗ ಮೂಲ ಶಿವಸೇನೆ ಎಂದು ಗುರುತಿಸಿದೆ. ಶಿವಸೇನೆ ಸ್ಥಾಪನೆಯಾಗಿನಿಂದಲೂ ಬಳಸುತ್ತಿದ್ದ ಪಕ್ಷದ ಚಿನ್ಹೆಯಾದ ಬಿಲ್ಲು ಬಾಣ ಶಿಂಧೆ ಬಣಕ್ಕೆ ಸೇರಿದ್ದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯಲ್ಲಿ ಬಂಡಾಯ ನಡೆದ ಎಂಟು ತಿಂಗಳ ನಂತರ, ಚುನಾವಣಾ ಆಯೋಗವು ಏಕನಾಥ್ ಶಿಂಧೆ ಅವರ ಪ್ರತಿಪಾದನೆಯ ಪರವಾಗಿ ತೀರ್ಪು ನೀಡಿದೆ.
ಕಳೆದ ವರ್ಷ ಜೂನ್ನಲ್ಲಿ ಶಿಂಧೆ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದರು ಮತ್ತು 40 ಶಾಸಕರೊಂದಿಗೆ ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿ ಸರ್ಕಾರವನ್ನ ಸ್ಥಾಪಿಸಿದರು. ಅದರ ನಂತರ, ಮೂಲ ಶಿವಸೇನೆ ಯಾರು ಎಂಬುದಕ್ಕೆ ಉದ್ಧವ್ ಮತ್ತು ಶಿಂಧೆ ಬಣಗಳ ನಡುವೆ ಮಾರಾಮಾರಿ ನಡೆದಿದೆ. ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಪಕ್ಷದ ಹೆಸರು ಮತ್ತು ಪಕ್ಷದ ಚಿಹ್ನೆಯ ಭಾಗವಾಗಿ ಬಳಸುವುದರಿಂದ ಪ್ರಾಬಲ್ಯಕ್ಕಾಗಿ ಹೋರಾಟ ಪ್ರಾರಂಭವಾಯಿತು. ಆರು ತಿಂಗಳ ಹಿಂದೆ, ಉದ್ಧವ್ ಠಾಕ್ರೆ ತಮ್ಮ ಪಕ್ಷವನ್ನು ಮೂಲ ಶಿವಸೇನೆ ಎಂದು ಗುರುತಿಸಲು ಮತ್ತು ಪಕ್ಷದ ಚಿಹ್ನೆ ‘ಬಿಲ್ಲು ಮತ್ತು ಬಾಣ’ವನ್ನು ಅವರಿಗೆ ನೀಡುವಂತೆ ಇಸಿಐಗೆ ಮನವಿ ಮಾಡಿದರು. ಈ ಕುರಿತು ಕೇಂದ್ರ ಚುನಾವಣಾ ಆಯೋಗದ ಮೂವರು ಸದಸ್ಯರ ಆಯೋಗವನ್ನು ರಚಿಸಿತ್ತು.
ಉದ್ಧವ್ ಮತ್ತು ಶಿಂಧೆ ಬಣಗಳ ವಾದ ಮತ್ತು ಇತರ ಸಾಕ್ಷ್ಯಗಳನ್ನು ಪರಿಗಣಿಸಿ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಅಂತಿಮ ಆದೇಶ ಹೊರಡಿಸಿದೆ. ಆ ಆದೇಶಗಳಲ್ಲಿ ಶಿಂಧೆ ಬಣವನ್ನ ಮೂಲ ಶಿವಸೇನೆ ಎಂದು ಘೋಷಿಸಲಾಗಿದೆ.
Shiv Sena: The Shinde faction is the real Shiv Sena – Election Commission gives a shocking verdict to Uddhav Thackeray…








