ಗಂಗೂಲಿ ಮಾತು ಕೇಳಿದ್ರೆ ಭಾರತದಲ್ಲಿ ಈ ಬಾರಿ ಐಪಿಎಲ್ ನಡೆಯಲ್ಲ…!
2020ರ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿಕೊಳ್ಳುತ್ತಿದೆ. ಆದ್ರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರ ಈ ಹೇಳಿಕೆಯನ್ನು ಗಮನಿಸಿದಾಗ ಈ ಬಾರಿಯ ಐಪಿಎಲ್ ಭಾರತದಲ್ಲಿ ನಡೆಯುವುದು ಅನುಮಾನವಾಗಿದೆ. ಕೋವಿಡ್-19 ಸೋಂಕಿನ ಬಗ್ಗೆ ಮಾತನಾಡಿದ್ದ ಗಂಗೂಲಿ, ಇನ್ನೂ ಮೂರು ನಾಲ್ಕು ತಿಂಗಳುಗಳ ಕಾಲ ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕಿದೆ. 2021ರ ಆರಂಭದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮಯಾಂಕ್ ಅಗರ್ವಾಲ್ ಜೊತೆಗಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ದಾದಾ, ಮುಂದಿನ ಎರಡು ಮೂರು ತಿಂಗಳು ತುಂಬಾ ಕಠಿಣವಾದ ಸಮಯವಾಗಲಿದೆ. ಹೀಗಾಗಿ ನಾವು ಎಲ್ಲವನ್ನು ಸಹಿಸಿಕೊಳ್ಳಬೇಕಾಗಿದೆ. ಮುಂದಿನ ವರ್ಷದ ಆರಂಭದಿಂದ ಜನರ ಜೀವನ ಸಹಜ ಸ್ಥಿತಿಗೆ ಬರಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಗಂಗೂಲಿಯವರ ಈ ಹೇಳಿಕೆಯನ್ನು ಗಮನಿಸಿದಾಗ ಭಾರತದಲ್ಲಿ ಐಪಿಎಲ್ ನಡೆಯುವುದು ಅನುಮಾನವಾಗಿದೆ. ಯಾಕಂದ್ರೆ ಬಿಸಿಸಿಐ ಸೆಪ್ಟಂಬರ್ – ಅಕ್ಟೋಬರ್ ನಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಪ್ಲಾನ್ ಮಾಡಿಕೊಂಡಿತ್ತು. ಆದ್ರೆ ಕೋವಿಡ್ 19 ಬಗ್ಗೆ ಗಂಗೂಲಿ ಈ ಹೇಳಿಕೆ ನೀಡಿರುವುದರಿಂದ ಐಪಿಎಲ್ ಭಾರತದಲ್ಲಿ ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾದಂತಿದೆ.
ಈ ನಡುವೆ ಐಪಿಎಲ್ ಟೂರ್ನಿಯ ಆತಿಥ್ಯ ವಹಿಸಲು ಈಗಾಗಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಯುಎಇ ಮುಂದೆ ಬಂದಿತ್ತು. ಅದೇ ರೀತಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯೂ ಆತಿಥ್ಯ ವಹಿಸಲು ಆಸಕ್ತಿ ಹೊಂದಿದೆ ಎಂದು ಹೇಳಿದೆ. ಹೀಗಾಗಿ ಐಪಿಎಲ್ ಮೂರನೇ ಬಾರಿ ವಿದೇಶಿ ನೆಲದಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಇನ್ನು ಕೋವಿಡ್ ಬಗ್ಗೆ ಮಾತು ಮುಂದುವರಿಸಿದ್ದ ಗಂಗೂಲಿ, ಮೊದಲು ಈ ಸೋಂಕಿಗೆ ಲಸಿಕೆ ಸಿಗಬೇಕು. ಅದ್ಕಿಂತ ಮುನ್ನ ನಮ್ಮ ಆರೋಗ್ಯದ ಕಡೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಈಗಾಗಲೇ ಏನು ಆಗುತ್ತಿದೆ ಎಂಬುದು ನಮಗೆಲ್ಲಾ ಗೊತ್ತಿದೆ. ಅನಾರೋಗ್ಯಕ್ಕೆ ತುತ್ತಾಗುವುದನ್ನು ಯಾರೂ ಕೂಡ ಬಯಸಲ್ಲ ಎಂದು ಅವರು ಹೇಳಿದ್ರು. ಕೊರೋನಾ ವೈರಸ್ಗೆ ಲಸಿಕೆ ಸಿಕ್ಕಿದ ಮೇಲೆ ಎಲ್ಲವೂ ಸಹಜ ಸ್ಥಿತಿಯತ್ತ ಮರಳಬಹುದು. ಆಗ ಚೆಂಡಿಗೆ ಬಳಸುವ ಎಂಜಲಿನ ಸಮಸ್ಯೆಯೂ ಉಂಟಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೋವಿಡ್ 19 ಸಾಂಕ್ರಮಿಕ ರೋಗವನ್ನು ಬ್ಯಾಟಿಂಗ್ ತಂತ್ರಗಳಿಗೆ ಹೋಲಿಸಿದ್ದ ಗಂಗೂಲಿ, ನೋಡಿ ಇದು ಬ್ಯಾಟಿಂಗ್ ತಂತ್ರಗಳಿದ್ದಂತೆ. ಎಲ್ಲಾ ಪಿಚ್ಗಳು ಒಂದೇ ರೀತಿಯಾಗಿರುವುದಿಲ್ಲ. ಕೆಲವೊಂದು ಪಿಚ್ಗಳು ನಿಧಾಗತಿಯಾಗಿ ವರ್ತಿಸುತ್ತವೆ. ಆಗ ನಿಮ್ಮ ಬ್ಯಾಟಿಂಗ್ ತಂತ್ರವನ್ನು ಬದಲಾಯಿಸಿಕೊಳ್ಳಬೇಕು. ಕೆಲವೊಂದು ಪಿಚ್ಗಳು ಹೆಚ್ಚು ತಿರುವನ್ನು ಪಡೆದುಕೊಳ್ಳುತ್ತವೆ. ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕು. ಅದೇ ರೀತಿ ಕೋವಿಡ್ ವೈರಸ್ನಿಂದಲೂ ನಾವು ಹೊರಬರಬೇಕು. ಈ ವರ್ಷದ ಅಂತ್ಯದ ವೇಳೆ ಎಲ್ಲವೂ ಸರಿ ದಾರಿಗೆ ಬರಬಹುದು ಎಂದು ಅವರು ಹೇಳಿದ್ರು.