ಆ… ಆರು ಜನ ಮ್ಯಾಚ್ ವಿನ್ನರ್ಸ್… ನನ್ನ ಕ್ರಿಕೆಟ್ ಬದುಕಿನ ದೊಡ್ಡ ಆಸ್ತಿ – ಸೌರವ್ ಗಂಗೂಲಿ
ಸೌರವ್ ಗಂಗೂಲಿ… ಹೊಸ ಟೀಮ್ ಇಂಡಿಯಾವನ್ನು ಕಟ್ಟಿ ಬೆಳೆಸಿದ್ದ ನಾಯಕ. ಅದು 2000ನೇ ಇಸವಿ. ಕೊಲ್ಕತ್ತಾದ ಮಹಾರಾಜ ಸೌರವ್ ಗಂಗೂಲಿ ಅವರು ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಆಗ ಭಾರತ ತಂಡ ಛಿದ್ರ ಛಿದ್ರವಾಗಿತ್ತು. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಭಾರತ ಕ್ರಿಕೆಟ್ ತಂಡ ಅಧಃಪತನದ ಹಾದಿ ಹಿಡಿದಿತ್ತು. ಅಂತಹ ಸಂಕಷ್ಟದ ಸಮಯದಲ್ಲಿ ಭಾರತ ತಂಡದ ಸಾರಥಿಯಾಗಿ ಗಂಗೂಲಿ ತಂಡವನ್ನು ಮುನ್ನಡೆಸಿದ್ದರು.
ಟೀಮ್ ಇಂಡಿಯಾ ಅನ್ನೋ ಹೊಸ ಪರಿಕಲ್ಪನೆಯೊಂದಿಗೆ ಗಂಗೂಲಿ ತಳ ಮಟ್ಟದಿಂದ ಬೆಳೆಸಲು ಮುಂದಾದ್ರು. ಕೆಲವು ಹಿರಿಯ ಆಟಗಾರರ ಜೊತೆ ಸೇರಿಕೊಂಡು ಯುವ ಆಟಗಾರರಿಗೆ ಅವಕಾಶವನ್ನು ನೀಡಿದ್ರು. ಯುವ ಆಟಗಾರರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅವಕಾಶ ನೀಡುವಂತೆ ಆಯ್ಕೆ ಸಮಿತಿಯ ಮುಂದೆ ಪಟ್ಟು ಹಿಡಿಯುತ್ತಿದ್ದರು. ಯುವ ಆಟಗಾರರ ಬೆನ್ನಿಗೆ ನಿಂತು ಬೆಂಬಲ ನೀಡಿದ್ರು. ನಾಯಕನಾಗಿ ತಂಡದ ಆಟಗಾರರಿಗೆ ಸ್ಪೂರ್ತಿ, ಪ್ರೇರಣೆ ನೀಡಿದ್ದರು. ಪರಿಣಾಮ ನಿಧಾನಗತಿಯಾಗಿ ಟೀಮ್ ಇಂಡಿಯಾ ಗೆಲುವಿನ ಟ್ರ್ಯಾಕ್ಗೆ ಮರಳಿತ್ತು. ವಿದೇಶಿ ನೆಲದಲ್ಲಿ ಮರೀಚಿಕೆಯಾಗಿದ್ದ ಗೆಲುವನ್ನ ಟೀಮ್ ಇಂಡಿಯಾಗೆ ದಕ್ಕಿಸಿಕೊಡುವಲ್ಲಿ ಗಂಗೂಲಿಯ ಪಾತ್ರ ಮಹತ್ವದ್ದು.
ಹೌದು, ಗಂಗೂಲಿ ನಾಯಕತ್ವದಲ್ಲಿ ಅಪ್ರತಿಮ ಆಟಗಾರರು ವಿಶ್ವಕ್ರಿಕೆಟ್ ನಲ್ಲಿ ಪ್ರಜ್ವಲಿಸಿದ್ರು. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಆಶೀಶ್ ನೆಹ್ರಾ, ಜಹೀರ್ಖಾನ್, ಮಹೇಂದ್ರ ಸಿಂಗ್ ಧೋನಿ ಈ ಆರು ಮಂದಿಯಂತೂ ಮ್ಯಾಚ್ ವಿನ್ನರ್ಗಳು. ಈ ಆರು ಮಂದಿ ಆಟಗಾರರನ್ನು ಗಂಗೂಲಿ ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಈ ಆರು ಮಂದಿ ಮ್ಯಾಚ್ ವಿನ್ನರ್ಗಳು ನನ್ನ ಕ್ರಿಕೆಟ್ ಬದುಕಿನ ದೊಡ್ಡ ಆಸ್ತಿ ಅಂತ ಹೇಳಿದ್ದಾರೆ ದಾದಾ.
ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 2011ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆದ್ದುಕೊಂಡಿದೆ. ತಂಡದಲ್ಲಿದ್ದ ಏಳರಿಂದ ಎಂಟು ಆಟಗಾರರು ನನ್ನ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟವರು. ಸೆಹ್ವಾಗ್, ಯುವರಾಜ್ ಸಿಂಗ್, ಆಶೀಷ್ ನೆಹ್ರಾ, ಜಹೀರ್ಖಾನ್, ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್. ಒಬ್ಬ ನಾಯಕನಾಗಿ ಇದು ನನ್ನ ದೊಡ್ಡ ಆಸ್ತಿ. 2011ರ ವಿಶ್ವಕಪ್ ಗೆಲುವಿನ ಹಿಂದಿನ ತೆರೆಮರೆಯಲ್ಲಿ ನನ್ನ ಶ್ರಮವೂ ಇದೆ. ಅಷ್ಟೇ ಅಲ್ಲ, ದೇಶಿ ಮತ್ತು ವಿದೇಶಿ ನೆಲದಲ್ಲಿ ಗೆಲುವಿನ ಪರಂಪರೆಗೆ ಮುನ್ನಡಿ ಬರೆದಿರುವುದು ಕೂಡ ನನ್ನ ನಾಯಕತ್ವದಲ್ಲಿ. ಈ ಬಗ್ಗೆ ನನಗೆ ತುಂಬಾನೇ ಹೆಮ್ಮೆ ಇದೆ. ಸಂತೋಷನೂ ಇದೆ ಅಂತ ಹೇಳಿದ್ದಾರೆ.
ಇನ್ನು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂಬೈನ ವಾಂಖೇಡೆ ಮೈದಾನದಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಾಗ ಆಗಿರುವ ಸಂತಸ ಹಾಗೂ 2003ರ ವಿಶ್ವಕಪ್ ಫೈನಲ್ ಸೋಲಿನ ಬಗ್ಗೆಯೂ ದಾದಾ ಈ ಸಂದರ್ಭದಲ್ಲಿ ಹೇಳಿಕೊಂಡ್ರು. ಸೌರವ್ ಗಂಗೂಲಿ ಟೀಮ್ ಇಂಡಿಯಾಗೆ ಹೊಸ ಆಯಾಮವನ್ನು ನೀಡಿದ್ದ ನಾಯಕ. ತಂಡದಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಬೆಳೆಸಿದ್ದ ಲೀಡರ್ ಕೂಡ ಹೌದು.
ನನಗೆ ಇನ್ನೂ ನೆನಪಿದೆ. 2011ರ ವಿಶ್ವಕಪ್ ಫೈನಲ್ ಪಂದ್ಯದ ರಾತ್ರಿ ನಾನು ಮುಂಬೈನ ವಾಂಖೇಡೆಯಲ್ಲಿದ್ದೆ. ಧೋನಿ ಆಂಡ್ ಟೀಮ್ ಗೆಲುವಿನ ಸಂಭ್ರಮವನ್ನು ಮೈದಾನದಲ್ಲಿ ಓಡುತ್ತಾ ಸಂಭ್ರಮಿಸುತ್ತಿತ್ತು. ಆಗ ನಾನು ಕಾಮೆಂಟರಿ ಬಾಕ್ಸ್ನಿಂದ ಕೆಳಗೆ ಇಳಿದು ಬಂದು ಆ ಸಂತಸವನ್ನು ಕಣ್ತುಂಬಿಕೊಂಡಿದ್ದೆ. 2003ರ ವಿಶ್ವಕಪ್ ಫೈನಲ್ನಲ್ಲಿ ಸೋತಾಗ ನಾನು ಟೀಮ್ ಇಂಡಿಯಾದ ನಾಯಕನಾಗಿದ್ದೆ. ಆದ್ರೆ ಧೋನಿಗೆ ಟ್ರೋಫಿ ಗೆಲ್ಲುವ ಅವಕಾಶ ಸಿಕ್ಕಿರುವುದನ್ನು ನೋಡಿ ನಾನು ಖುಷಿ ಪಟ್ಟಿದ್ದೆ ಅಂತ ಗಂಗೂಲಿ ಹೇಳಿದ್ದಾರೆ.