ಲೋಕಸಭಾ ಕಲಾಪದಲ್ಲಿ ಆರ್ಭಟಿಸುತ್ತಿರುವ ರಾಹುಲ್ ಗಾಂಧಿ, ಬಿಜೆಪಿ ಮೈತ್ರಿಕೂಟ ಎನ್ಡಿಎ ಮೈತ್ರಿ ಕೂಟ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಮಂಗಳವಾರ ಸ್ಪೀಕರ್ ಓಂ ಬಿರ್ಲಾ ಅವರು ಕೂಡ ರಾಹುಲ್ ಮಾತಿಗೆ ಕೆಲವು ಬಾರಿ ಬೇಸರ ವ್ಯಕ್ತಪಡಿಸಿ, ಕ್ಲಾಸ್ ನ್ನು ತೆಗೆದುಕೊಂಡಿದ್ದಾರೆ. ಆದರೆ, ಈಗ ರಾಹುಲ್ ಗಾಂಧಿ ಭಾಷಣದ ಕೆಲವು ಭಾಗಗಳನ್ನು ಕಡತದಿಂದಲೇ ತೆಗೆದು ಹಾಕವಂತೆ ಆದೇಶ ನೀಡಿದ್ದಾರೆ.
ಈ ತೀರ್ಮಾನಲಕ್ಕೆ ಸಂಬಂಧಿಸಿದಂತೆ ಈಗ ರಾಹುಲ್ ಗಾಂಧಿ ಸ್ಪೀಕರ್ ಗೆ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿ ಸೋಮವಾರ ಭಾಷಣ ಮಾಡುವ ಸಂದರ್ಭದಲ್ಲಿ ಬಳಸಿದ ಕೆಲವು ಪದಗಳು ಹಾಗೂ ಪ್ರಸ್ತಾಪಿಸಿದ ಕೆಲವು ವಿಷಯಗಳು ಬಿಜೆಪಿಯ ಆಕ್ರೋಶ ಹಾಗೂ ಆಕ್ಷೇಪಕ್ಕೆ ಕಾರಣವಾಗಿದ್ದವು. ಪ್ರಧಾನಿ ಮೋದಿ ಅವರೇ ಎರಡು ಬಾರಿ ಎದ್ದು ನಿಂತು ರಾಹುಲ್ ಗಾಂಧಿ ಭಾಷಣಕ್ಕೆ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿಯೇ ರಾಹುಲ್ ಗಾಂಧಿ ಭಾಷಣದ ಕೆಲವು ಅಂಶಗಳನ್ನು ಸ್ಪೀಕರ್ ಓಂ ಬಿರ್ಲಾ ಕಡತದಿಂದ ತೆಗೆದು ಹಾಕುವಂತೆ ಸೂಚಿಸಿದ್ದಾರೆ.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರ ಈ ನಡೆಯನ್ನು ಪ್ರಶ್ನಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಲೋಕಸಭೆಯ ನೀತಿ ನಿರೂಪಣಾ ನಿಯಮಗಳ ರೂಲ್ ನಂಬರ್ 380 ರ ಅಡಿ ಕೆಲವು ಪದ ಮಾತ್ರ ತೆಗೆದು ಹಾಕಲು ನಿಮಗೆ ಅಧಿಕಾರವಿದೆ. ಆದರೆ, ನೀವು ಏಕಪಕ್ಷೀಯವಾಗಿ ನಡೆದುಕೊಂಡಿದ್ದೀರಿ. ನನ್ನ ಭಾಷಣದಲ್ಲಿ ಯಾವೆಲ್ಲಾ ಅಂಶಗಳನ್ನ ಕಡತದಿಂದ ತೆಗೆದು ಹಾಕಲಾಗಿದೆ ಎಂದು ಗಮನಿಸಿದಾಗ ನಿಜಕ್ಕೂ ಆಘಾತವಾಯ್ತು. ನನ್ನ ಭಾಷಣದ ಪ್ರಮುಖ ಭಾಗಗಳನ್ನೇ ಕಡತದಿಂದ ತೆಗೆಯಲಾಗಿದೆ. ಲೋಕಸಭೆಯ ರೂಲ್ ನಂಬರ್ 380 ರ ಅಡಿ ಬಾರದ್ದನ್ನೂ ತೆಗೆದು ಹಾಕಲಾಗಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಲೋಕಸಭಾಧ್ಯಕ್ಷರನ್ನೂ ಪ್ರಶ್ನಿಸಿದ್ದಾರೆ.
ನಾನು ಲೋಕಸಭೆಯಲ್ಲಿ ವಾಸ್ತವಾಂಶಗಳನ್ನು ದೇಶದ ಜನರ ಮುಂದಿಡಲು ಯತ್ನಿಸಿದ್ದೇನೆ. ಸತ್ಯ ಸಂಗತಿಗಳನ್ನೇ ನಾನು ಹೇಳಿದ್ದೇನೆ. ನನಗಿರುವ ಸಿಕ್ಕಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಕೆ ಮಾಡಿಕೊಂಡಿದ್ದೇನೆ. ಸದನದಲ್ಲಿ ಇರುವ ಎಲ್ಲರೂ ಜನರ ಭಾವನೆಗಳನ್ನು ಕಲಾಪದಲ್ಲಿ ವ್ಯಕ್ತಪಡಿಸಬೇಕು. ಇದು ಎಲ್ಲ ಸಂಸದರ ಹಕ್ಕು ಕೂಡ. ಸದನದಲ್ಲಿ ಜನರ ಆಶೋತ್ತರಗಳನ್ನು, ಭಾವನೆಗಳನ್ನು ಪ್ರಶ್ನಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ಧಾರೆ.
ಹೀಗಾಗಿಯೇ ನಾನು ಎಲ್ಲ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ಬಳಕೆ ಮಾಡಿಕೊಂಡು ಸದನದಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಜನರ ಭಾವನೆಗಳನ್ನು ನಾನು ಬಿಂಬಿಸಿದೆ. ಆದರೆ ನನ್ನ ಭಾಷಣದ ಪ್ರಮುಖಾಂಶಗಳನ್ನೇ ಕಡತದಿಂದ ತೆಗೆಯಲಾಗಿದೆ. ಇದು ಸಂಸದೀಯ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದಂತಹ ನಿಲುವು. ಬಿಜೆಪಿಯು ಯಾವಾಗಲೂ ಜನರ ಧ್ವನಿ ಹತ್ತಿಕ್ಕುವ ಕಾರ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ , ಅಲ್ಲ, ಭಾಷಣದ ಮುಖ್ಯಾಂಶಗಳೊಂದಿಗೆ ನೀಟ್ ಪರೀಕ್ಷಾ ಹಗರಣ, ಅಗ್ನಿಪಥ್ ಮಿಲಿಟರಿ ನೇಮಕಾತಿ ಯೋಜನೆ ಕುರಿತಾಗಿ ರಾಹುಲ್ ಗಾಂಧಿ ಆಡಿದ್ದ ಮಾತುಗಳನ್ನೂ ಕಡತದಿಂದ ತೆಗೆದು ಹಾಕುವಂತೆ ಸೂಚನೆ ನೀಡಲಾಗಿದೆ. ಇದು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಜನರ ಧ್ವನಿಯನ್ನೇ ಬಿಜೆಪಿ ಅಡಗಿಸಿದಂತಿದೆ. ಜನರ ಸಮಸ್ಯೆಗಳನ್ನು ಪ್ರಶ್ನಿಸಬಾರದೇ? ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ನೀವು ಕಡತದಿಂದ ತೆಗೆದು ಹಾಕಿರಬಹುದು. ಆದರೆ, ಜನರ ನೋವನ್ನು ನಿಮ್ಮಿಂದ ತೊಡೆದು ಹಾಕಲು ಆಗುತ್ತಿಲ್ಲ. ಆ ಕೆಲಸ ನಾವು ಮಾಡುತ್ತೇವೆ ಎಂದು ರಾಹುಲ್ ಗುಡುಗಿದ್ದಾರೆ.