ಅದು 1953 ಜನವರಿ 20 ಮೈಸೂರಿನ ಸಂಸ್ಥಾನಕ್ಕೆ ವಾರಸುದಾರನೊಬ್ಬನ ಜನನವಾಗಿತ್ತು. ಶ್ರೀಮಂತಿಕೆಯ ಅರಸೊತ್ತಿಗೆಯಲ್ಲಿ ಸಾಮಾನ್ಯನಂತೆ ಬದುಕುವ ರಾಜನೊಬ್ಬನ ಜನನವಾಗಿತ್ತು. ಅವರೇ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್. ತಂದೆ ಜಯಚಾಮರಾಜೇಂದ್ರ ಒಡೆಯರ್, ತಾಯಿ ತ್ರಿಪುರ ಸುಂದರಿ ಅಮ್ಮಣ್ಣಿ ದಂಪತಿಯ ಏಕೈಕ ಪುತ್ರ. ಹೆಸರೆ ಸೂಚಿಸುವಂತೆ ಮೈಸೂರಿನ ಒಡೆಯರ್ ಆಡಳಿತದ ಇತಿಹಾಸದಲ್ಲಿ ವಿಶಿಷ್ಟ ಸ್ವಭಾವವನ್ನು ಹೊಂದಿದ್ದ ಅರಸರು ಇವರು. ಶ್ರೀಮಂತ ಅರಸು ಕುಟುಂಬದಲ್ಲಿ ಹುಟ್ಟಿದ್ರೂ ಸಾಮಾನ್ಯನಂತೆ ಬದುಕಿದವರು. ತನಗಿರುವ ಅಧಿಕಾರವನ್ನು ಬದಿಗಿಟ್ಟು, ಸಾಮಾನ್ಯ ಪ್ರಜೆಯಂತೆ ಬದುಕುವುದು ಹೇಗೆ ಎಂದು ಇಡೀ ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ವ್ಯಕ್ತಿ. ಬೆಳೆದದ್ದು ರಾಜ ಮನೆತನದಲ್ಲಿ ಎನ್ನುವ ಅಹಂ ಇಲ್ಲದೆ, ದೇಶ ವಿದೇಶಗಳನ್ನು ಸುತ್ತಿ ಹಲವು ವಿದ್ಯೆಗಳನ್ನು ಕಲಿತ ಸಕಲ ಕಲಾ ವಲ್ಲಭ ಎನಿಸಿಕೊಂಡ ಕ್ರೀಡಾಪಟು ಸಹ ಆಗಿದ್ದರು. ರಾಜ ಮನೆತನದ ಆಳ್ವಿಕೆ ಹಾಗೂ ಪ್ರಜಾಪ್ರಭುತ್ವದ ಸಂಪರ್ಕದ ಕೊಂಡಿಯಾಗಿದ್ದ ಅರಸರೊಬ್ಬರ ಜನ್ಮದಿನವಾಗಿದೆ ಈ ದಿನ.
ಶೈಕ್ಷಣಿಕ ಜೀವನ.

ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಬಾಲ್ಯದ ಶಿಕ್ಷಣವನ್ನು ಪಡೆದಿದ್ದು ಮೈಸೂರಿನಲ್ಲಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಇವರು ಅದೇ ವಿವಿಯಲ್ಲಿ ರಾಜ್ಯಶಾಸ್ತ್ರ ಹಾಗೂ ಹಿಂದಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಶಾರದ ವಿಲಾಸ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಇವರು ಪಾಶ್ಚಾತ್ಯ ಹಾಗೂ ಶಾಸ್ತ್ರೀಯ ಸಂಗೀತದ ಮೇಲೆ ವಿಶೇಷ ಆಸಕ್ತಿ ಹೊಂದಿದ್ದರು. ಪಿಯಾನೋ ಸಂಗೀತದ ಮೇಲೆ ಆಸಕ್ತಿ ಹೊಂದಿದ್ದ ಒಡೆಯರ್ ಲಂಡನ್ನಿನ ಟ್ರಿನಿಟಿ ಕಾಲೇಜಿನಲ್ಲಿ ಪದವಿ ಪಡೆದರು. ಮಹಾನ್ ದೈವ ಭಕ್ತರಾಗಿದ್ದ ಒಡೆಯರ್ ದೇಶಿಯ ಸಂಸ್ಕೃತಿ, ಕಲೆ ಸಾಹಿತ್ಯದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು.
೩೧ ನೇ ವಯಸ್ಸಿಗೆ ರಾಜಕೀಯ ಪ್ರವೇಶ.

ಅದಾಗಲೇ ಪ್ರಜಾಪ್ರಭುತ್ವ ಜಾರಿಯಾಗಿದ್ದರಿಂದ ಅರಸೊತ್ತಿಗೆಯ ಕೊನೆಯ ದಿನಗಳು ಸಮೀಪಿಸುತ್ತಿದ್ದ ಕಾಲವದು. ರಾಜನ ಅಧಿಕಾರವನ್ನು ಪ್ರಜೆಗಳು ಕೈಗೆ ಕೊಡಿಸುವ ಕೆಲಸ ಅದಾಗಲೇ ನಡರದು ಹೋಗಿತ್ತು. ಒಡೆಯರ್ ಸಹ ಅದಾಗಲೇ ಸಕ್ರಿಯ ರಾಜಕಾರಣಿಯಾಗಲು ನಿರ್ಧಾರ ಮಾಡಿದ್ದರು. ತನ್ನ ೩೧ ನೇ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷದಿಂದ ೧೯೮೪ ರಿಂದ ೧೯೯೯ ವರೆಗೆ ಮೈಸೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದರು. ನಂತರ ೧೯೯೧ ರಲ್ಲಿ ಬಿಜೆಪಿ ಸೇರಿದ ಒಡೆಯರ್ ಚಂದ್ರಪ್ರಭ ಅರಸ್ ವಿರುದ್ಧ ಸೋಲನ್ನು ಕಂಡರು.
ರಾಜನಾಗಿದ್ದರೂ ತಪ್ಪಲಿಲ್ಲ ಕಾನೂನು ಹೋರಾಟ…!

ಅದು ೧೯೯೬ ರ ಜೆ.ಹೆಚ್ ಪಟೇಲರ ಸರ್ಕಾರದ ಆಡಳಿತ ದಿನಗಳು. ಒಡೆಯರ ಖಾಸಗಿ ಸ್ವತ್ತಾಗಿದ್ದ ಬೆಂಗಳೂರು ಹಾಗೂ ಮೈಸೂರು ಅರಮನೆಗಳನ್ನು ಸರ್ಕಾದ ವಶಕ್ಕೆ ಪಡೆಯಲಾಯಿತು. ಈ ಕ್ರಮದಿಂದಾಗಿ ತೀವ್ರವಾಗಿ ನೊಂದ ಅರಸರು ಕಾನೂನು ಹೋರಾಟಕ್ಕಾಗಿ ಕೋರ್ಟ್ ಬಾಗಿಲು ತಟ್ಟಬೇಕಾಯಿತು. ಅರಸರ ಬದುಕಿನ ನಂತರ ಸ್ವಾಧೀನಕ್ಕೆ ಪಡೆಯಬೇಕಿದ್ದ ಆಸ್ತಿಯ ಮೇಲೆ ಅವರಿದ್ದಾಗಲೇ ಸರ್ಕಾರ ಕಣ್ಣು ಹಾಕಿತ್ತು.
ರಾಜನಾಗಿದ್ದರೂ ರಾಜಕೀಯ ಸೋಲು ಗೆಲುವುಗಳ ಮದ್ಯೆ ಕಾನೂನೂ ಹೋರಾಟ ಮಾಡಲೇ ಬೇಕಾದ ಪರಿಸ್ಥಿತಿಗೆ ಒಡೆಯರ್ ತಲುಪಿದರು. ಒಟ್ಟಿನಲ್ಲಿ ಕಾನೂನು ಮಾಡಬೇಕಿದ್ದ ರಾಜನೇ ತನ್ನ ಹಕ್ಕುಗಳಿಗಾಗಿ ಕಾನೂನು ಹೋರಾಟ ಮಾಡಬೇಕಾಯಿತು.
ಸಕಲ ಕಲಾ ವಲ್ಲಭ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್.

ಕಲೆ, ಸಾಹಿತ್ಯ, ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಒಡೆಯರ್, ಸಕ್ರಿಯ ರಾಜಕಾರಣದಿಂದ ಹೊರಹೋಗಿ ಮೈಸೂರು ವಿವಿಯ ಕ್ರಿಕೆಟ್ ತಂಡದ ಪರ ವೇಗದ ಬೌಲರ್ ಆಗಿ ಕಾಣಿಸಿಕೊಂಡರು. ಸಹ ಆಟಗಾರರ ಜೊತೆಗೆ ಸರಳ ನಡತೆಯಿಂದಲೇ ಹೆಸರು ಗಳಿಸಿದ್ದರು. ೨೦೦೭ ಹಾಗೂ ೨೦೧೩ರಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅಲ್ಲದೇ ಗಾಲ್ಫ್, ಕುದುರೆ ರೇಸ್ ನಲ್ಲಿ ಸಕ್ರಿಯರಾಗಿ ದಿಲ್ಲಿ ಟರ್ಫ್ ಕ್ಲಬ್ ನ ಸದಸ್ಯರು ಆಗಿದ್ದರು. ನಂತರ ಪುತ್ರ ಸಂತಾನವಿಲ್ಲದ ಇವರು ೨೦೧೩ ರಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಒಟ್ಟಿನಲ್ಲಿ ಅರಸೊತ್ತಿಗೆ ಮತ್ತು ಪ್ರಜಾಪ್ರಭುತ್ವ ಪದ್ದತಿಯ ಮದ್ಯೆ ಸಂಪರ್ಕದ ಕೊಂಡಿಯಾಗಿ ಹಲವು ಏಳು-ಬೀಳುಗಳನ್ನು ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಕಂಡಿದ್ದರು ಎಂದರೆ ತಪ್ಪಾಗಲಾರದು.








