ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹಿಂಸಾಚಾರವನ್ನು ತಡೆಯುವುದು ಹೇಗೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸಲಹೆಯನ್ನು ನೀಡಿದ್ದಾರೆ.
ದೆಹಲಿ ಹಿಂಸಾಚಾರವನ್ನು ತಡೆದು, ಪರಿಸ್ಥಿತಿಯನ್ನು ನಿಯಂತ್ರಿಸಲು ಸೈನ್ಯಕ್ಕೆ ಕರೆ ನೀಡುವಂತೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಮಂಗಳವಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ. ಈ ಕ್ರಮವು ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಹೊಡೆತವಾಗಿದ್ದರೂ, ಹಿಂಸಾಚಾರದ ಅಂತ್ಯವು ಭಾರತದ ಪ್ರಜಾಪ್ರಭುತ್ವದಷ್ಟೇ ಮುಖ್ಯವಾಗಿದೆ ಎಂದು ಅವರು ಹೇಳಿದರು. ದೆಹಲಿ ಹಿಂಸಾಚಾರದಿಂದಾಗಿ ಸಾವಿನ ಸಂಖ್ಯೆ 7 ಕ್ಕೆ ಏರಿರುವುದರಿಂದ ಸಿಎಎ ವಿರೋಧಿ ಆಂದೋಲನವನ್ನು ರಾಷ್ಟ್ರ ವಿರೋಧಿ ಎಂದು ಸುಬ್ರಮಣಿಯನ್ ಸ್ವಾಮಿ ಬಣ್ಣಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ತಡರಾತ್ರಿ ದೇಶದ ಕಾನೂನು ಸುವ್ಯವಸ್ಥೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ್ದಾರೆ. ಅಮಿತ್ ಶಾ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕೂಡ ಸಭೆ ನಡೆಸಿದರು.
ದೆಹಲಿಯ ಮೌಜ್ಪುರ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದ ಒಂದು ದಿನದ ನಂತರ, ಪ್ರತಿಭಟನಾಕಾರರು ಸೋಮವಾರ ಜಾಫ್ರಾಬಾದ್ ಮತ್ತು ಮೌಜ್ಪುರ ಪ್ರದೇಶಗಳಲ್ಲಿ ಕನಿಷ್ಠ ಎರಡು ಮನೆಗಳನ್ನು ಮತ್ತು ಅಗ್ನಿಶಾಮಕ ವಾಹನವನ್ನು ಸುಟ್ಟುಹಾಕಿದರು. ಪರ ಮತ್ತು ಸಿಎಎ ವಿರೋಧಿ ಗುಂಪುಗಳ ನಡುವೆ ಸತತ ಎರಡನೇ ದಿನವೂ ಕಲ್ಲು ತೂರಾಟ ನಡೆದಿದ್ದು, ಇದರ ಪರಿಣಾಮವಾಗಿ ಪೊಲೀಸ್ ಕಾನ್ಸ್ಟೆಬಲ್ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ ಮತ್ತು 105 ಮಂದಿ ಗಾಯಗೊಂಡಿದ್ದಾರೆ. ದೆಹಲಿ ಹಿಂಸಾಚಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ.
ದೆಹಲಿ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿರುವುದರಿಂದ, ಮುಂಬೈಗೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಈಶಾನ್ಯ ದೆಹಲಿಯ ಕೆಲವು ಭಾಗಗಳಾದ ಸೀಲಾಂಪುರ್, ಜಾಫ್ರಾಬಾದ್ ಮತ್ತು ಮೌಜ್ಪುರಗಳಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ದೆಹಲಿಯ ಈಶಾನ್ಯ ಜಿಲ್ಲೆಯ 10 ಸ್ಥಳಗಳಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿದೆ.








