ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಬ್ಬು ಬೆಳೆಗಾರರು ರಸ್ತೆಗೆ ಇಳಿದಿದ್ದಾರೆ. ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸೆತ್ತಿದ್ದಾರೆ. ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆ ಮಾಲೀಕರು ಈಗಾಗಲೇ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 2700 ರಿಂದ 3200 ವರೆಗೂ ನೀಡುತ್ತಿವೆ. ರಾಜ್ಯದಲ್ಲಿ ಒಟ್ಟು 73 ಸಕ್ಕರೆ ಕಾರ್ಖಾನೆಗಳಿವೆ. ಬಹತೇಕ ಸಕ್ಕರೆ ಕಾರ್ಖಾನೆಗಳು ಹಾಲಿ ಮತ್ತು ಮಾಜಿ ಶಾಸಕರುಗಳದ್ದೇ ಆಗಿವೆ.
ಪ್ರತಿಭಟನೆ ನಡೆಸುತ್ತಿರುವ ರೈತರ 3-4 ಬೇಡಿಕೆಗಳಲ್ಲಿ ಮೊದಲನೇ ಬೇಡಿಕೆ ಟನ್ಗೆ 3500 ರೂ. ನೀಡಬೇಕೆಂದು. ಒಂದು ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು 3500 ರೂ. ನೀಡಿದರೇ ಅವರಿಗೆ ನಷ್ಟವಾಗಲಿದೆಯೇ? ನಿಜವಾಗಿಯೂ ಇಲ್ಲಿ ನಷ್ಟವಾಗುತ್ತಿರುವುದು ರೈತರಿಗಾ ಅಥವಾ ಕಾರ್ಖಾನೆ ಮಾಲೀಕರಿಗಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇದಾಗಿದೆ. ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು ರೈತರು ಸರಿಸುಮಾರು 30 ರಿಂದ 80 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಇಷ್ಟು ಖರ್ಚು ಮಾಡಿದ ಮೇಲೆ ಇಳುವರಿ ಚೆನ್ನಾಗಿ ಬರುತ್ತೆ ಎಂಬ ನಿರೀಕ್ಷೆಯಲ್ಲಿ ರೈತರಿತ್ತಾರೆ. ಆದರೆ, ಒಂದು ವೇಳೆ ಕಬ್ಬು ಪ್ರಕೃತಿಯ ಆಟಕ್ಕೆ ಸಿಲುಕಿದರೆ ಕಥೆ ಮುಗಿದಂತೆ. ಆ ವರ್ಷ ಇಳುವರಿ ಕಡಿಮೆಯಾದಂತೆ ಅಥವಾ ಬೆಳೆ ಮಣ್ಣು ಪಾಲಾದಂತೆ. ಇದು ರೈತರಿಗಾಗುವ ಮೊದಲ ನಷ್ಟ.
ಇನ್ನು, ಇಳುವರಿ ಚೆನ್ನಾಗಿ ಬಂದಿದ್ದೆ, ಕಟಾವು ಆಗಿ ಕಾರ್ಖಾನೆಯ ಅಂಗಳಕ್ಕೆ ಬಂದಾಗ ಅಲ್ಲಿ ತೂಕದಲ್ಲಿ ಆಗುವ ಮೋಸ ರೈತರಿಗಾಗುವ ಎರಡನೇ ನಷ್ಟ.! ಮುಂದುವರೆದಂತೆ ಕಬ್ಬು ಕಾರ್ಖಾನೆಯ ಮಷಿನಿನ್ ಬಾಯಿಗೆ ಸಿಲುಕಿ ನಾನಾ ರೂಪವನ್ನು ತಾಳುತ್ತದೆ. ಸಕ್ಕರೆ, ಬೆಲ್ಲ ಮತ್ತು ಉಪಉಪತ್ಪನ್ನಗಳಾದ ಮೋಲಾಸಿಸ್, ಎಥನಾಲ್, ಬಗಾಸ್, ಸ್ಪಿರಿಟ್, ಫಿಲ್ಟರ್ ಕೇಕ್, ಗೊಬ್ಬರ ಮತ್ತು ವಿದ್ಯುತ್ ಅನ್ನು ಕಾರ್ಖಾನೆಗಳು ಉತ್ಪಾದಿಸುತ್ತವೆ.
ಈ ಉತ್ಪಾದನೆಗಳಿಂದ ಕಾರ್ಖಾನೆಗಳಿಗೆ ಆಗುವ ಲಾಭವೆಷ್ಟು? ಇವುಗಳಲ್ಲಿನ ಕೆಲ ಉತ್ಪಾದನೆಗಳ ಮಾರುಕಟ್ಟೆಯ ಬೆಲೆ ನೋಡುವುದಾದರೆ, ಕಬ್ಬಿನ ರಿವಕವರ್ ಶೇ. 10 ರಷ್ಟು ಇದ್ದರೆ ಒಂದು ಟನ್ ಕಬ್ಬಿನಿಂದ 100 ಕೆಜಿ ಸಕ್ಕರೆ ಉತ್ಪಾದನೆಯಾಗುತ್ತದೆ. ಒಂದು ವೇಳೆ ಸಕ್ಕರೆ ಪ್ರಮಾಣ ಕಡಿಮೆ ಇದ್ದರೇ, ಸಕ್ಕರೆ ಉತ್ಪಾದನೆ ಕೂಡ ಕಡಿಮೆ ಆಗುತ್ತದೆ. ಒಂದು ಕೆಜಿ ಸಕ್ಕರೆ ಮಾರುಕಟ್ಟೆಯಲ್ಲಿ 45 ರೂ.ಗೆ ಮಾರಾಟವಾಗುತ್ತದೆ. ಹಾಗಿದ್ದರೆ 100 ಕೆಜಿ ಸಕ್ಕರೆ 4500 ರೂ.ಗೆ ಮಾರಾಟವಾಗುತ್ತದೆ. ಆದರೆ, ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರದ ಪ್ರಕಾರ ಸಕ್ಕರೆ ಕಾರ್ಖಾನೆಗಳು ಸಕ್ಕರೆಯನ್ನು ಪ್ರತಿ ಕೆಜಿಗೆ 31 ರೂ. ಮಾರಾಟ ಮಾಡಬೇಕು. 100 ಕೆಜಿ ಸಕ್ಕರೆಯನ್ನು 3100 ರೂ. ಮಾರಾಟ ಮಾಡಬೇಕು.
ಇದನ್ನೂ ಓದಿ: ಆದಷ್ಟು ಬೇಗ ಕಬ್ಬಿಗೆ ಬೆಲೆ ನಿಗದಿ ಮಾಡಿ – ಗೃಹ ಸಚಿವ ಪರಮೇಶ್ವರ್ ಸೂಚನೆ
ಹಾಗಂತ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನಷ್ಟ ಎಂದು ಭಾವಿಸಲಾಗದು. ಏಕೆಂದರೆ ಕಬ್ಬಿನಿಂದ ತಯಾರಾಗುವ ಉಪಉಪತ್ಪನ್ನಗಳಿಂದ ಸಕ್ಕರೆಗಿಂತ ಅಧಿಕ ಆದಾಯ ಕಾರ್ಖಾನೆಗಳಿಗೆ ಬರುತ್ತದೆ.
ಉದಾಹರಣೆಗೆ, ಎಥನಾಲ್ ಪ್ರತಿ ಲೀಟರ್ಗೆ ಸುಮಾರು 65.61 ರೂಪಾಯಿಗೆ ಮಾರಾಟವಾಗುತ್ತದೆ. 1 ಟನ್ ಕಬ್ಬಿನಿಂದ ಸುಮಾರು 70 ರಿಂದ 80 ಲೀಟರ್ ಎಥನಾಲ್ ಅನ್ನು ಉತ್ಪಾದಿಸಲಾಗುತ್ತದೆ. ಅಂದರೆ, 1 ಲೀಟರ್ಗೆ 65 ರೂ.ಗೆ ಎಥನಾಲ್ ಮಾರಟವಾದರೆ, 70 ಲೀಟರ್ಗೆ 4,550 ರೂ. ಆಯ್ತು. ಎಥನಾಲ್ ಒಂದರಿಂದಲೇ ಇಷ್ಟೊಂದು ಲಾಭ ಕಾರ್ಖಾನೆ ಮಾಲೀಕರಿಗೆ ಆಗುತ್ತದೆ. ರೈತರಿಗೆ ನೀಡುವ ಹಣ ಎಥನಾಲ್ ಒಂದರಿಂದಲೇ ಕಾರ್ಖಾನೆ ಮಾಲೀಕರಿಗೆ ಬರುತ್ತದೆ.
ಮೋಲಾಸಿಸ್ನಿಂದ ತಯಾರಾಗುವ distilled spiritನಿಂದ ಏನು ಕಡಿಮೆ ಲಾಭ ಬರುವುದಿಲ್ಲ. ಈ distilled spirit ಅನ್ನು ಮದ್ಯ ತಯಾರಿಕೆ ಸೇರಿದಂತೆ ಅನೇಕ ವಸ್ತುಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ. distilled spirit ಕೂಡ ಸಕ್ಕರೆ ಕಾರ್ಖಾನೆ ಮಾಲೀಕರ ಕಿಸೆ ತುಂಬಿಸುತ್ತದೆ. ಇನ್ನು, ಕಾರ್ಖಾನೆ ಮಾಲೀಕರು ತಾವು ಉತ್ಪಾದಿಸುವ ವಿದ್ಯುತ್ ಅನ್ನು ತಮಗೆ ಎಷ್ಟು ಬೇಕೊ ಅಷ್ಟನ್ನು ಬಳಸಿಕೊಂಡು, ಉಳಿದಿದ್ದನ್ನು ಮಾರಾಟ ಮಾಡುತ್ತಾರೆ. ಇದು ಕೂಡ ಕಾರ್ಖಾನೆ ಮಾಲೀಕರ ಖಜಾನೆ ತುಂಬಿಸುವ ಮಾರ್ಗ. ಹೀಗೆ, ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಉತ್ಪಾದಿಸುವ ಪ್ರತಿಯೊಂದು ವಸ್ತುವು ಲಾಭದಾಯಕವೇ. ಇಲ್ಲಿ ಲಾಭ ಯಾರಿಗೆ? ನಷ್ಟ ಯಾರಿಗೆ? ನೀವೆ ಅರ್ಥ ಯೋಚಿಸಿ. ಪ್ರತಿ ಟನ್ಗೆ 3500 ರೂ. ಅನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಯಾಕೆ ನೀಡುತ್ತಿಲ್ಲ?
ಕೇಂದ್ರದ FRP ಬೆಲೆ ಎಷ್ಟು?
ಕೇಂದ್ರದ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ಗೆ 355 ರೂ. ನಿಗದಿ ಮಾಡಿದೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. 10.25% ಮೂಲ ಇಳುವರಿ ದರವಿದ್ದರೆ (ಅಂದರೆ ಸಕ್ಕರೆ ಉತ್ಪಾದನಾ ಪ್ರಮಾಣ) ಪ್ರತಿ ಕ್ವಿಂಟಾಲ್ಗೆ 355 ರೂ.ಗಳಂತೆ ನೀಡಲು ಅನುಮೋದನೆ ನೀಡಿದೆ. ಕ್ವಿಂಟಾಲ್ಗೆ 355 ರೂ. ಒಂದು ಟನ್ಗೆ 3550 ರೂ. ಆಗುತ್ತದೆ. ಅಂದ್ರೆ, ಕೇಂದ್ರ ಸರ್ಕಾರ ಒಂದು ಟನ್ ಕಬ್ಬಿಗೆ 3550 ರೂ. ನಿಗದಿ ಮಾಡಿದೆ. ಹಾ… ಕೇಂದ್ರ ಸರ್ಕಾರ 2015 ರಿಂದ ಪ್ರತಿವರ್ಷ ಕಬ್ಬಿನ ಎಫ್ಆರ್ಪಿ ಬೆಲೆಯಲ್ಲಿ ಏರಿಸುತ್ತಲೇ ಇದೆ.
ಆದರೂ ಕೂಡ ಸಕ್ಕರೆ ಕಾರ್ಖಾನೆಗಳು, ರಾಜ್ಯ ಸರ್ಕಾರ ಈ ಬೆಲೆ ನೀಡಲು ಹಿಂದೇಟು ಯಾಕೆ ಹಾಕುತ್ತಿವೆ ಆ ದೇವರೇ ಬಲ್ಲ. ಇಲ್ಲಿ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಏನು ಅಡ್ಜೆಸ್ಟಮೆಂಟ್ ಇದೆಯೋ ಗೊತ್ತಿಲ್ಲ. ಇವರದ್ದು ಏನೇ ಅಡ್ಜೆಸ್ಟಮೆಂಟ್ ಇರಲಿ, ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಬೆಲೆ ಸಿಗಲೇಬೇಕು.
ವಿವೇಕ ಬಿರಾದಾರ
ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ, ಜೆಟಿ ಮಹಾವಿದ್ಯಾಲಯ ಗದಗ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







