ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಸಂಕಟ, ಸಂಘರ್ಷ, ವಿವಾದಗಳೇ ಪ್ರತಿ ನಿತ್ಯ ಸುದ್ದಿಯಾಗಬೇಕಿತ್ತು. ಪರಿಸ್ಥಿತಿ ಹಾಗೇ ಇತ್ತು. ಆದ್ರೆ ಬಿಜೆಪಿ ಭಜನಾ ಮಂಡಳಿಯಾಗಿರುವ ಕರ್ನಾಟಕದ ಮುಖ್ಯ ವಾಹಿನಿಯ ಬಹುತೇಕ ಮಾಧ್ಯಮಗಳು ಬಹುತೇಕ ವಿವಾದಗಳನ್ನು ಮರೆಮಾಚಿ ಕೆಲವನ್ನು ಮಾತ್ರ ತೋರಿಸುವ ನಾಟಕ ಮಾಡಿದವು. ಇದು ಒಂದಲ್ಲ ಒಂದು ದಿನ ಹೀಗೆ ಅಂತ್ಯ ಕಾಣಲೇಬೇಕು ಎಂದು ನಾವೊಂದಷ್ಟು ಪತ್ರಕರ್ತರು ಹತಾಶೆಯಿಂದ ಮಾತಾಡಿಕೊಂಡಿದ್ದೆವು. ಅದರ ಮೊದಲ ಹೆಜ್ಜೆಯಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ ಸೂಪರ್ ಸಿಎಂ ಬಿವೈ ವಿಜಯೇಂದ್ರರ ವಿರುದ್ಧ 5000 ಕೋಟಿ ಬೇನಾಮಿ ಆಸ್ತಿ ಆರೋಪ ಕೇಳಿ ಬಂದಿದೆ.

ನಮಗೆ ಇದೇನೂ ಶಾಕಿಂಗ್ ಸುದ್ದಿಯೇನಲ್ಲ ಇವತ್ತಲ್ಲ ನಾಳೆ ಈತರಹದ್ದೊಂದು ಸುದ್ದಿ ಬಂದೇ ಬರುತ್ತದೆ ಎನ್ನುವ ನಿರೀಕ್ಷೆ ಖಂಡಿತಾ ಇತ್ತು. ಕಾರಣಗಳು ಎರಡು. ಮೊದಲನೆಯದ್ದು ಪಕ್ಷದೊಳಗೆ ನಿರಂತರ ಧಮನಕ್ಕೊಳಗಾಗುತ್ತಿರುವ ಹಿರಿಯ ವೃದ್ಧ ನಾಯಕ ಬಿಎಸ್ ಯಡಿಯೂರಪ್ಪನವರ ಹತಾಶೆ. ಎರಡನೆಯದ್ದು ಅಗತ್ಯ ಮೀರಿ ಆಡಳಿತದೊಳಗೆ ಮೂಗು ತೂರಿಸುತ್ತಿದ್ದ ಅವರ ಸುಪುತ್ರ ಬಿವೈ ವಿಜಯೇಂದ್ರರ ರಾಜಕೀಯ ಬೆಳವಣಿಗೆ.
ಬಿಎಸ್ವೈ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಮೊದಲಿನ ಅತೃಪ್ತರ ಬ್ರಹನ್ನಾಟಕದ ಸೂತ್ರಧಾರಿಯಾಗಿ ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸಿದ್ದು ಅವರ ಪುತ್ರ ಬಿವೈ ವಿಜಯೇಂದ್ರ. ಮೈಸೂರಿನ ವರುಣಾ ಕ್ಷೇತ್ರದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ವಿರುದ್ದ ಸ್ಫರ್ಧೆ ಮಾಡುವ ರಣತಂತ್ರ ಕೊನೆಯ ಕ್ಷಣದಲ್ಲಿ ಕೈ ಕೊಟ್ಟಾಗಿನಿಂದಲೇ ಅವರ ರಾಜಕೀಯ ರಂಗಪ್ರವೇಶಕ್ಕೆ ಮತ್ತಷ್ಟು ಬಲಬಂದಿತ್ತು. ಒಂದು ವೇಳೆ ಆ ಚುನಾವಣೆಯಲ್ಲಿ ವಿಜಯೇಂದ್ರರಿಗೆ ಟಿಕೆಟ್ ಸಿಕ್ಕಿದ್ದರೇ, ಯತೀಂದ್ರರನ್ನು ಅವರು ಮಣಿಸಲೂ ಬಹುದಿತ್ತು. ಆದರೆ ವಿಜಯೇಂದ್ರ ಬಿಜೆಪಿಯಲ್ಲಿ ಬೆಳೆಯುವುದು ರಾಜ್ಯ ಬಿಜೆಪಿ ಒಳಗೆ ಸಾಕಷ್ಟು ಜನರಿಗೆ ಇಷ್ಟವಿರಲಿಲ್ಲ. ಹೀಗಾಗೇ ಸುತ್ತೂರು ಸ್ವಾಮಿಗಳ ಮಧ್ಯಸ್ಥಿಕೆಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಬ್ಯಾಕ್ ಸ್ಟೆಪ್ ಮಾಡಲಾಯಿತು ಎನ್ನುವ ಮಾತುಗಳು ಕೇಳಿ ಬಂದವು.
![]()
ಅದಾಯಿತಲ್ಲ, ಆನಂತರದ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ವಿಜಯೇಂದ್ರ ನೇರಾ ನೇರಾ ಫೀಲ್ಡಿಗಿಳಿದಿದ್ದರು. ಅದರ ಪ್ರತಿಫಲ ಸಿಕ್ಕಿದ್ದು ಮೈತ್ರಿ ಸರ್ಕಾರಕ್ಕೆ ವರ್ಷ ತುಂಬಿದ ನಂತರ. ವಿಜಯೇಂದ್ರರ ಅಜೆಂಡಾ ಬಿಜೆಪಿ ಅಧಿಕಾರಕ್ಕೆ ಬರಬೇಕು ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎನ್ನುವದಷ್ಟೇ ಆಗಿತ್ತು. ಹೀಗಾಗಿ ಹಗಲು ರಾತ್ರಿ ನಿರಂತರ ಓಡಾಡಿದ ವಿಜಯೇಂದ್ರ ಮುಂಬೈನಲ್ಲಿ ಅತೃಪ್ತ ಶಾಸಕರನ್ನು ಕೂಡಿಸಿಟ್ಟು ಕೊನೆಗೂ ಸರ್ಕಾರ ಉರುಳಿಸಿಬಿಟ್ಟರು. ಅವರ ಉದ್ದೇಶವಿದ್ದಿದ್ದು ಬೇರೆಯೇ!
ಯಾವಾಗ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದರೋ ಅಂದಿನಿಂದ ಅವರ ಆಪ್ತರನ್ನೆಲ್ಲಾ ವಿಧಾನಸೌಧದಿಂದ ದೂರವಿಡುವ ಪ್ರಯತ್ನವನ್ನು ಬಿಜೆಪಿಯ ಒಳರಾಜಕಾರಣ ಮಾಡಿತು. ಅವರ ಕುಟುಂಬದವರನ್ನು ಕೃಷ್ಣಾದಿಂದ ದೂರವಿಟ್ಟಿತು. ಬಿಎಸ್ ವೈ ಶಿಷ್ಯೆ ಶೋಭಾ ಕರಂದ್ಲಾಜೆ ಅಕ್ಷರಶಃ ನಾಪತ್ತೆಯಾದರು. ಯಡಿಯೂರಪ್ಪನವರ ಕೈ ಕಟ್ಟಿ ಹಾಕಲು ಶಕ್ತಿ ಕೇಂದ್ರದಲ್ಲಿ ಅವರ ಸುತ್ತಲೂ ಚಕ್ರವ್ಯೂಹ ಹಣೆಯಲಾಯಿತು. ಆದ್ರೆ ಬಿಜೆಪಿಯ ಆಂತರಿಕ ರಾಜಕಾರಣಕ್ಕೆ ತಲೆ ನೋವು ತಂದಿಡುವಂತೆ ಬಿಎಸ್ವೈ ಪುತ್ರ ವಿಜಯೇಂದ್ರ ಬೆಳೆಯತೊಡಗಿದರು. ಒಂದೆಡೆ ನಿರಂತರವಾಗಿ ಗುತ್ತಿಗೆದಾರರ ಸಭೆ ನಡೆಸಿ ತಮ್ಮ ನಿಯಂತ್ರಣ ಸಾಧಿಸಿದರು. ಇನ್ನೊಂದೆಡೆ ಕೋವಿಡ್ ಸಂದರ್ಭದಲ್ಲಿ ತಮ್ಮದೇ ಸಂಘಟನೆ ಕಟ್ಟಿಕೊಂಡು ಜನಸೇವೆಯಲ್ಲೆ ತೊಡಗಿಕೊಂಡರು. ಮತ್ತೊಂದೆಡೆ ಮುರುಘಶರಣರ ನೇತೃತ್ವದಲ್ಲಿ ಎರಡನೇ ಮಹಾ ಗಣ ಮೇಳ ಮತ್ತು ಶರಣ ಪರಿಷತ್ ಬೃಹತ್ ಸಭೆ ಆಯೋಜಿಸಿ ತಾವು ಯಡಿಯೂರಪ್ಪನವರ ಉತ್ತರಾಧಿಕಾರಿ ಎಂದು ಘೋಷಿಸಿಕೊಂಡರು.
ಈ ರಾಜ್ಯದ ಪ್ರಭಾವಿ ಸಮುದಾಯ ವೀರಶೈವ ಲಿಂಗಾಯಿತರದ್ದು. ಈ ಸಮುದಾಯದ ಶಕ್ತಿಯೇ ಹತ್ತಾರು ನೂರಾರು ಮಠಗಳು. ಈ ಲಿಂಗಾಯಿತ ಮಠಗಳ ಯಾವತ್ತಿನ ಪ್ರೀತಿ ಬಿಎಸ್ ಯಡಿಯೂರಪ್ಪನವರ ಮೇಲಿದೆ ಎನ್ನುವುದು ಕಣ್ಣಿಗೆ ಕಾಣುವ ನಿಚ್ಚಳ ಸತ್ಯ. ಈಗ ಯಡಿಯೂರಪ್ಪನವರ ಕಾಲದ ನಂತರ ಅವರ ಪುತ್ರ ವಿಜಯೇಂದ್ರರನ್ನು ರಾಜಕೀಯವಾಗಿ ಬೆಳೆಸಬೇಕು ಅನ್ನುವುದು ಈ ಮಠಗಳ ಹಿಡನ್ ಅಜೆಂಡಾ. ಅದು ಅನೇಕ ಬಿಜೆಪಿ ನಾಯಕರಿಗೆ ಸಹ್ಯವಾಗುತ್ತಿಲ್ಲ.

ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಆರ್ ಅಶೋಕ್ ಅಥವಾ ಬೇರೆ ಇನ್ಯಾರನ್ನೋ ಬದಲಿ ಸಿಎಂ ಮಾಡುವ ಯೋಜನೆ ಹೈಕಮಾಂಡ್ ಮುಂದಿದೆ. ಆದರೆ ಯಡಿಯೂರಪ್ಪನವರನ್ನು ಎದುರು ಹಾಕಿಕೊಳ್ಳುವುದು ಹೈಕಮಾಂಡ್ ನಿಂದ ಸಾಧ್ಯವಾಗದ ಮಾತು. ಹೀಗಾಗಿ ರಾಷ್ಟ್ರೀಯ ಯುವ ಮೋರ್ಚಾದಲ್ಲೊಂದು ಆಯಕಟ್ಟಿನ ಸ್ಥಾನ ಪಡೆದುಕೊಂಡಿದ್ದ ಹಾಗೂ ಸಂಘಟನಾ ಸಾಮರ್ಥ್ಯವಿರುವ ವಿಜಯೇಂದ್ರರನ್ನು ಡಿಸಿಎಂ ಮಾಡುವ ಉದ್ದೇಶ ಹೈಕಮಾಂಡ್ ಗಿದೆ ಎನ್ನುತ್ತದೆ ಆಂತರಿಕ ಮೂಲಗಳ ಮಾಹಿತಿ. ಇದಾದರೆ ಅತ್ತ ಹುಲಿ ಹೋದರೆ ಇತ್ತ ಆನೆ ಎದುರಾಗುತ್ತದೆ. ಬಿಎಸ್ ವೈ ಗಿಂತಲೂ ರಾಜ್ಯ ಬಿಜೆಪಿ ನಾಯಕರಿಗೆ ತಲೆ ನೋವು ಬಿವೈ ವಿಜಯೇಂದ್ರ. ಈಗಾಗಲೇ 35 % ಕಮಿಷನ್ ದಂದೆ, ಗುತ್ತಿಗೆದಾರರ ಮೇಲಿನ ಕಪಿ ಮುಷ್ಟಿ, ಕೋವಿಡ್ ಕಾಲದ ಬ್ರಹ್ಮಾಂಡ ಭ್ರಷ್ಟಾಚಾರ, ಸೂಪರ್ ಸಿಎಂ ಪಟ್ಟ ಇತ್ಯಾದಿಗಳ ಪಟ್ಟಿ ಮಾಡಿ ದೂರು ನೀಡಲು ಶಿಸ್ತಿನ ಪಕ್ಷದ ಸೇನಾನಿಗಳು ಸಿದ್ದರಾಗಿದ್ದರು. ಅದರ ಪ್ರತಿಫಲವೇ ಈ 5000 ಕೋಟಿ ಬೇನಾಮಿ ಸಂಪತ್ತಿನ ಆರೋಪ ಎನ್ನುವ ಮಾತುಗಳು ಕೇಳಿ ಬಂದಿವೆ.
ಇರಲಿ ಸತ್ಯ ಇವತ್ತಲ್ಲ ನಾಳೆ ಬಯಲಾಗಲೇಬೇಕು. ವಿಜಯೇಂದ್ರ ಬಿಎಸ್ ವೈ ಉತ್ತರಾಧಿಕಾರಿಯಾಗುತ್ತಾರಾ? ರಾಜ್ಯ ಬಿಜೆಪಿ ಸರ್ಕಾರವನ್ನು ಪುತ್ರವ್ಯಾಮೋಹಿ ರಾಜಾಹುಲಿ ಸ್ವತಃ ಕೆಡವುತ್ತಾರಾ? ಅಥವಾ ವಿಜಯೇಂದ್ರ ಮತ್ತು ಬಿಎಸ್ ವೈ ಹೊಸ ಪಕ್ಷ ಕಟ್ಟುತ್ತಾರಾ ಎನ್ನುವುದನ್ನು ಕಾಲ ನಿರ್ಧರಿಸಲಿದೆ. ಆದರೆ ಈ ತರಹದ್ದೊಂದು ವಿದ್ಯಮಾನ ಖಂಡಿತಾ ಘಟಿಸುತ್ತದೆ ಎನ್ನುವ ಊಹೆಯಂತೂ ಸತ್ಯವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡೋಣ.
-ವಿಶ್ವಾಸ್ ಭಾರದ್ವಾಜ್ (ವಿಭಾ)









