ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಇಷ್ಟು ದಿನಗಳ ಕಾಲ ಪಟ್ಟು ಬಿಡದೆ ಹೋರಾಡಿದ ಅಭಿಮಾನಿಗಳು, ಸ್ನೇಹಿತರು, ಕುಟುಂಬಸ್ಥರು, ಹಿತೈಶಿಗಳ ಹೋರಾಟಕ್ಕಿಂದು ಜಯಸಿಕ್ಕಿದೆ. ಯಾಕಂದ್ರೆ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಒಪ್ಪಿಸಿ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ಇತ್ತ ಸುಶಾಂತ್ ಸಾವಿನ ತನಿಖೆ ಸಿಬಿಐಗೆ ವಹಿಸಿ ಎಂದು ಆರಂಭದಲ್ಲಿ ಅಮಿತ್ ಶಾ ಅವರಿಗೆ ಪತ್ರ ಬರೆದು ಬಳಿಕ ಸಿಬಿಐ ತನಿಖೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಗೂ ತೀರ್ಪಿನಿಂದ ತೀವ್ರ ಹಿನ್ನಡೆಯಾಗಿದೆ.
ಪಟ್ನಾದಲ್ಲಿ ಸುಶಾಂತ್ ತಂದೆ ಕೆಕೆ ಸಿಂಗ್ ಅವರು ರಿಯಾ ವಿರುದ್ಧ ದಾಖಲಿಸಿದ್ದ FIR ಮುಂಬೈಗೆ ವರ್ಗಾಯಿಸುವಂತೆ ರಿಯಾ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು. ಇದೀಗ ರಿಯಾ ಅರ್ಜಿ ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಪಟ್ನಾದ ಪೊಲೀಸ್ ಠಾಣೆಯಲ್ಲಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿದ್ದ ದೂರು ಕಾನೂನುಬದ್ಧವಾಗಿದೆ ಎಂದು ತಿಳಿಸಿದೆ.
ಇನ್ನೂ ಸುಪ್ರೀಂಕೋರ್ಟ್ನ ಏಕ ಸದಸ್ಯ ನ್ಯಾಯಪೀಠದಿಂದ ತೀರ್ಪು ಹೊರಬಿದ್ದಿದೆ. ಇದಷ್ಟೇ ಅಲ್ಲದೇ ತೀರ್ಪನ್ನು ಪ್ರಶ್ನಿಸುವ ಸ್ವಾತಂತ್ರ್ಯ ನೀಡುವಂತೆ ಕೋರಿ ಮಹಾರಾಷ್ಟ್ರ ಸರ್ಕಾರದಿಂದ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಹ ನ್ಯಾಯಾಲಯವು ತಿರಸ್ಕರಿಸಿದೆ.