ಚೆನ್ನೈ, ಮೇ 18 : ವಲಸೆ ಕಾರ್ಮಿಕರ ಸ್ಥಿತಿ ನೋಡಿ ಕಣ್ಣೀರು ತಡೆಯಲಾಗುತ್ತಿಲ್ಲ, ಎಂತಹ ಕಲ್ಲು ಹೃದಯವೂ ಕರಗಬೇಕು ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ಎನ್. ಕಿರುಬಾಕರನ್ ಮತ್ತು ಆರ್ ಹೇಮಲತಾ ಹೇಳಿದರು.
ವಲಸೆ ಕಾರ್ಮಿಕರ ಪರಿಸ್ಥಿತಿ ಕುರಿತು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು, ವಲಸೆ ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲವಾಗಿರುವ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ದೂರದ ಊರಿಗೆ ಹೊರಟಿದ್ದಾರೆ. ಹೀಗೆ ಕಾಲ್ನಡಿಗೆಯಲ್ಲಿ ಸಾಗುವಾಗ ಹಲವರು ಸಾವನ್ನಪ್ಪಿದ್ದಾರೆ. ಅವರಿಗೆ ಬಂದಿರುವ ಸ್ಥಿತಿ ನೋಡುವಾಗ ಕಣ್ಣೀರು ಬರುತ್ತದೆ. ಇದು ಮನುಷ್ಯ ನಿರ್ಮಿತ ಅವಘಡ. ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರ ಸಹಾಯಕ್ಕೆ ಬರಬಹುದಿತ್ತು. ಆದರೆ ಅವರು ಅದನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡಿನ ಮುಖ್ಯಮಂತ್ರಿ ಪಳನಿ ಸ್ವಾಮಿ ಹೈಕೋರ್ಟ್ ನ ಈ ಹೇಳಿಕೆಯ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದು, ಎಲ್ಲಾ ವಲಸೆ ಕಾರ್ಮಿಕರು ಶಿಬಿರದಲ್ಲಿ ಇರಲಿ. ಸದ್ಯದಲ್ಲೇ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಅವರ ಪಯಣದ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಹೇಳಿದ್ದಾರೆ.








