ಬೆಂಗಳೂರು: “ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅಮಲಿನಲ್ಲಿ ಆಡಳಿತವನ್ನೇ ಮರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗಾಗಿ ಮಾಡಿದ ಒಂದೇ ಒಂದು ನೂತನ ಯೋಜನೆಯನ್ನು ತೋರಿಸಿ,” ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಈ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿಯಿಲ್ಲ. ಬಿಹಾರದ ಚುನಾವಣೆಗೆ ಹಣ ಹೊಂದಿಸಲು ರಾಜ್ಯದ ಬೊಕ್ಕಸವನ್ನು ಬರಿದು ಮಾಡುತ್ತಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು.
ಬೆಂಗಳೂರು ಅಭಿವೃದ್ಧಿ ಸಂಪೂರ್ಣ ಸ್ಥಗಿತ
“ಹಿಂದಿನ ಬಿಜೆಪಿ ಸರ್ಕಾರ ಆರಂಭಿಸಿದ್ದ ಫ್ಲೈಓವರ್ ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ. ಹೊಸ ಯೋಜನೆಗಳಂತೂ ಕನಸಿನ ಮಾತು. ಬೆಂಗಳೂರಿನಲ್ಲಿ ಸೈಟುಗಳಿಗೆ ರಾಜಾರೋಷವಾಗಿ ‘ರೇಟ್ ಚಾರ್ಟ್’ ನಿಗದಿಪಡಿಸಲಾಗುತ್ತಿದೆ. ಇದು ವರ್ಗಾವಣೆ ದಂಧೆಯಷ್ಟೇ ವ್ಯಾಪಕವಾಗಿ ನಡೆಯುತ್ತಿದೆ. ಬೆಂಗಳೂರಿನ ಜನತೆ ಮೂಲಸೌಕರ್ಯಗಳಿಗಾಗಿ ಪರದಾಡುತ್ತಿದ್ದರೆ, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಮುಖ್ಯಮಂತ್ರಿಗಳೇ, ನೀವು ಬೆಂಗಳೂರಿಗೆ ನೀಡಿದ ಕೊಡುಗೆ ಏನು? ಒಂದೇ ಒಂದು ಯೋಜನೆಯನ್ನು ಹೆಸರಿಸಿ,” ಎಂದು ಸೂರ್ಯ ಪ್ರಶ್ನಿಸಿದರು.
ಗ್ಯಾರಂಟಿಗಳಿಗಾಗಿ ಇಲಾಖೆಗಳ ಹಣ ಬಳಕೆ
ರಾಜ್ಯದ ಆರ್ಥಿಕ ಶಿಸ್ತನ್ನು ಸರ್ಕಾರ ಹಾಳುಗೆಡವಿದೆ ಎಂದು ಆರೋಪಿಸಿದ ಸಂಸದರು, “ಬಿಜೆಪಿ ಸರ್ಕಾರವು ‘ರೆವೆನ್ಯೂ ಸರ್ಪ್ಲಸ್’ (ಕಂದಾಯ ಹೆಚ್ಚುವರಿ) ಬಜೆಟ್ ನೀಡಿತ್ತು. ಆದರೆ ಇಂದು ನೀವು ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಹಣವಿಲ್ಲದೆ ಸತಾಯಿಸುತ್ತಿದ್ದೀರಿ. ಹಣ ಕೇಳಲು ಬರುವ ಗುತ್ತಿಗೆದಾರರಿಗೆ ನಿಮ್ಮ ಸರ್ಕಾರ ಬೆದರಿಕೆ ಹಾಕುತ್ತಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ,” ಎಂದರು.
“ರಾಜ್ಯದ ಬಜೆಟ್ನಲ್ಲಿ ಗಳಿಸುವ ಪ್ರತಿ 100 ರೂಪಾಯಿಯಲ್ಲಿ 18 ರೂಪಾಯಿ ಬಡ್ಡಿ ಕಟ್ಟಲು ಹೋಗುತ್ತಿದೆ. ಅಭಿವೃದ್ಧಿ ಇಲಾಖೆಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗುತ್ತಿದೆ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಬದಲು, ಸರ್ಕಾರದ ಮೇಲೆ ಅವಲಂಬಿತರಾಗುವಂತೆ ಮಾಡಿ ಅವರನ್ನು ಸೋಮಾರಿಗಳನ್ನಾಗಿಸುತ್ತಿದ್ದೀರಿ,” ಎಂದು ಕಿಡಿಕಾರಿದರು.
ರಾಜ್ಯಕ್ಕೆ ಹಿಡಿದ ಗ್ರಹಣ ಎರಡು ವರ್ಷದಲ್ಲಿ ಬಿಡಲಿದೆ
ಸರ್ಕಾರದ ಆಡಳಿತವನ್ನು ‘ಅಮಾವಾಸ್ಯೆ-ಹುಣ್ಣಿಮೆ’ಗೆ ಹೋಲಿಸಿದ ಅವರು, “ನಿಮ್ಮ ಆಡಳಿತವು ರಾಜ್ಯಕ್ಕೆ ಹಿಡಿದ ಗ್ರಹಣದಂತಿದೆ. ಆದರೆ ಜನರಿಗೆ ಗೊತ್ತಿದೆ, ಇನ್ನು ಎರಡು ವರ್ಷಗಳಲ್ಲಿ ಈ ಗ್ರಹಣ ಬಿಡಲಿದೆ. ಆಗ ನಿಮ್ಮ ಕೊಡುಗೆ ಏನೆಂದು ಜನ ಕೇಳುತ್ತಾರೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದು, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಹೆಚ್ಚಳ, ಕೈಗಾರಿಕೋದ್ಯಮಿಗಳು ರಾಜ್ಯ ತೊರೆಯುತ್ತಿರುವುದು ಇದೇ ನಿಮ್ಮ ಸರ್ಕಾರದ ಸಾಧನೆಯಾಗಬಾರದು,” ಎಂದು ಎಚ್ಚರಿಸಿದರು.
ಮಂತ್ರಿಗಳಿಗೆ ಸಲಹೆ, ಮೋದಿಗೆ ಪ್ರಶ್ನೆ ಬಿಡಿ
ಕೊನೆಯಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ ತೇಜಸ್ವಿ ಸೂರ್ಯ, “ಜ್ಯೋತಿಷ್ಯವನ್ನು ಜ್ಯೋತಿಷಿಗಳಿಗೆ ಬಿಟ್ಟುಬಿಡಿ. ಮೊದಲು ಆಡಳಿತದತ್ತ ಗಮನ ಕೊಡಿ. ಐಟಿ ಸಚಿವರಿಗೆ ರಾಜ್ಯಕ್ಕೆ ಬಂಡವಾಳ ತರಲು ಹೇಳಿ. ಗೃಹ ಸಚಿವರು ಕುಸಿದಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಲಿ. ಮೊದಲು ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಡಿ. ಇದೆಲ್ಲವನ್ನೂ ಬಿಟ್ಟು, ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳುವುದನ್ನು ನಿಲ್ಲಿಸಿ,” ಎಂದು ತಿವಿದರು.








