ಗ್ರಾಮೀಣ ಅಂಚೇ ನೌಕರರು ನಮ್ಮಂತೆಯೇ ಮನುಷ್ಯರು. ಆದರೆ ನಿರ್ಲಕ್ಷಿತರಾಗಿ ಶಾಪಗ್ರಸ್ಥರಂತೆ ಬದುಕುತ್ತಿದ್ದಾರೆ. ಹಳ್ಳಿಗಳಲ್ಲಿ ಹುಟ್ಟಿರುವ ನನ್ನಂತಹ ಹಲವರಿಗೆ ನಮ್ಮ ಬಾಲ್ಯದ ನೆನಪನ್ನು ಸಿರಿವಂತಗೊಳಿಸುವ ಪ್ರಜ್ಞೆಯೊಳಗೆ ಅಂಚೆಯಣ್ಣನಿಗೆ ಖಂಡಿತಾ ಸ್ಥಾನವಿದೆ. ಕರೋನಾ ಸಂಕಷ್ಟ ಕಾಲದಲ್ಲಿ ಇಡೀ ದೇಶವೇ ಬಂದ್ ಆಗಿದ್ದರೂ ಅಂಚೆಯಣ್ಣಂದಿರು ಜೀವದ ಚಿಂತೆ ಮರೆತು ರಸ್ತೆಗಿಳಿದು ಕೆಲಸ ಮಾಡಿದರು. ಆದರೆ ಇವರ ಸೇವೆ ಥ್ಯಾಂಕ್ ಲೆಸ್ ಜಾಬ್, ಇವರು ಕರೋನಾ ವಾರಿಯರ್ಸ್ ಆಗಲಿಲ್ಲ. ಇವರ ಸೇವೆಯನ್ನು ನಾವಾದರೂ ನೆನಪಿಸಿಕೊಂಡು ಇವರ ಸಂಕಷ್ಟಗಳತ್ತ ಒಂದು ಪಕ್ಷಿ ನೋಟ ಹರಿಸೋಣ.
ಹಿಂದೊಂದು ಕಾಲದಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವ ಪಡೆದ ಅಂಚೆಯಣ್ಣನ ಗೋಳು ಈಗ ಯಾರೂ ಕೇಳೋರೇ ಇಲ್ಲ. ದೂರದೂರುಗಳಿಂದ ಕಷ್ಟ ಸುಖಗಳ ವಾರ್ತೆ ಹೊತ್ತು ತರುತ್ತಿದ್ದ ಅಂಚೆಯಣ್ಣನ ಕಷ್ಟದ ವಾರ್ತೆ ಈಗ ನಾವು ಕೇಳಬೇಕಾಗಿದೆ. ನೂರಾರು ವರ್ಷಗಳಿಂದ ಅಸ್ಥಿತ್ವದಲ್ಲಿರುವ ಕೇಂದ್ರ ಸರ್ಕಾರದ ಅಂಚೇ ಇಲಾಖೆಯ ಗ್ರಾಮೀಣ ನೌಕರರ ಪಾಡು ಬಲ್ಲವರೇ ಬಲ್ಲರು. ಅಂಚೆ ಇಲಾಕೆ ಗ್ರಾಮೀಣ ನೌಕರರ ತೀರದ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಪ್ರಯತ್ನವಿದು.
ಟೆಲಿಫೋನ್-ಮೊಬೈಲ್, ಇಂಟರ್ನೆಟ್-ಇಮೇಲ್ ಗಳಿಲ್ಲದ ಕಾಲದಲ್ಲಿ ನಮ್ಮ ಸಮಾಜದ ಪ್ರಮುಖ ಸಂಪರ್ಕದ ಕೊಂಡಿಯಂತಿದ್ದವನು ಅಂಚೆಯಣ್ಣ. ಸೈಕಲ್ ಮೇಲೆ ಟಪಾಲು ಹೊತ್ತು ಬರುತ್ತಿದ್ದ ಅಂಚೆಯಣ್ಣ ನಮ್ಮ ಬಹುತೇಕರ ಬಾಲ್ಯದ ಸವಿ ನೆನಪಿನ ಭಾಗವೂ ಹೌದು. ಕಾಲ ಬದಲಾದಂತೆ, ತಂತ್ರಜ್ಞಾನ ಮುಂದುವರೆದಂತೆ ಅಂಚೆ ಇಲಾಖೆಯ ನೌಕರರ ಅಸ್ಥಿತ್ವವೂ ಕ್ಷೀಣವಾಗತೊಡಗಿದೆ. ಆದ್ರೆ ವಿಷಾದದ ಸಂಗತಿ ಅಂದ್ರೆ ಗ್ರಾಮೀಣ ಭಾಗದಲ್ಲಿ ಇನ್ನೂ ಉಸಿರಾಡುತ್ತಿರುವ ಬ್ರಾಂಚ್ ಪೋಸ್ಟ್ ಆಫೀಸ್ ನೌಕರರ ಕಥೆ-ವ್ಯಥೆಗಳನ್ನು ಕೇಳುವವರೇ ಇಲ್ಲ.
ಪೋಸ್ಟ್, ಲೆಟರ್, ಟೆಲಿಗ್ರಾಮ್, ಮನಿ ಆರ್ಡರ್, ಅಂಚೇ ಚೀಟಿ. ಶುಭ ಸುದ್ದಿ, ಮದುವೆ-ಮುಂಜಿ ಸುದ್ದಿ, ವ್ಯಾಪಾರ-ವ್ಯವಹಾರ-ಬಟವಾಡೆಗಳ ಸುದ್ದಿ. ಅಪಘಾತ-ಸಾವು ನೋವುಗಳ ಎಮರ್ಜೆನ್ಸಿ, ಅರ್ಜೆಂಟ್ ಅರೈವಲ್ನ ಟೆಲಿಗ್ರಾಂ. ಬ್ಯಾಂಕ್ಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಅರ್ಥ ವ್ಯವಸ್ಥೆಯ ದೈತ್ಯ ಬೆಳವಣಿಗೆ ಕಾಣದ ಹೊತ್ತಿನಲ್ಲಿ ಕುಡಿ ಕಾಸು ಕೂಡಿಡಲು ಠೇವಣಿ ಕೊಡುತ್ತಿದ್ದ ಕೇಂದ್ರ. ಸಣ್ಣ ಪುಟ್ಟ ಸಾಲ, ವಿಮೆ, ದುಪ್ಪಟ್ಟಾಗುವ ಬಾಂಡ್. ಅಬ್ಬಬ್ಬ! ಸ್ವಾತಂತ್ರ್ಯಾ ಪೂರ್ವದಿಂದ ಸ್ವಾತಂತ್ರ್ಯ ಬಂದು ದಶಕಗಳ ನಂತರವೂ ಅಂಚೇ ಇಲಾಖೆಯಿಂದ ಆದ ಉಪಕಾರ ಒಂದಾ ಎರಡಾ? ಬ್ರಿಟೀಶರ ಕಾಲದಿಂದಲೇ ನಮ್ಮ ನೆಲದಲ್ಲಿ ಅತ್ಯಂತ ದೊಡ್ಡ ಜಾಲವಾಗಿ ಬೆಳೆದ ಅಂಚೇ ಇಲಾಖೆಗೆ ಶತಮಾನಗಳ ಭವ್ಯ ಇತಿಹಾಸವಿದೆ.
ಕೆಂಪು ಬಣ್ಣದ ಕಟ್ಟಡ, ಕೆಂಬಣ್ಣದ್ದೇ ಡಬ್ಬಿ. ಸಣ್ಣ ಬಸ್ ಸ್ಟಾಪ್ ಪಕ್ಕದಲ್ಲೇ ಕಾರ್ಯಾಚರಿಸುತ್ತಿದ್ದ ಪೋಸ್ಟ್ ಆಫೀಸ್. ಕರೆಯದೇ ಬರುವ ಬಂದು ಖಾಕಿ ಯೂನಿಫಾರ್ಂ ತೊಟ್ಟು ಸೈಕಲ್ ಮೇಲೆ ಅಪರೂಪಕ್ಕೆ ಬರುತ್ತಿದ್ದ ಅಂಚೆಯಣ್ಣ. ನಮ್ಮೆಲ್ಲರ ಬಾಲ್ಯದ ನೆನಪುಗಳನ್ನು ಶ್ರೀಮಂತಗೊಳಿಸುವ ಚಿತ್ರಣ. ನಮ್ಮೂರಿನವನೇ ಆದ ಒಬ್ಬ ಅಂಚೆಯಣ್ಣನಿಗೆ ಊರಿನ ಮನೆ ಮನೆಗಳ ಪರಿಯವಿರುತ್ತಿತ್ತು. ಆಗ ಅಂಚೆಯಣ್ಣಿಗೆ ಗೌರವ ಮರ್ಯಾದೆಗಳೂ ಭರ್ಜರಿಯಾಗೇ ಇರುತ್ತಿತ್ತು. ಆದರೀಗ ಎಲ್ಲವೂ ಬದಲಾಗಿದೆ. ಬಹುತೇಕ ಗ್ರಾಮಗಳಲ್ಲಿ ಅಂಚೇ ಇಲಾಖೆಯ ಸಣ್ಣ ಕಚೇರಿ ಕಣ್ಮುಚ್ಚಿದೆ. ಅಂಚೇ ಇಲಾಖೆ ನೀಡುತ್ತಿದ್ದ ಸೇವೆಗಳನ್ನು ದೊಡ್ಡ ಮಟ್ಟದಲ್ಲಿ ನೀಡಲು ಬೇರೆ ಬೇರೆ ಸರ್ಕಾರಿ ಸಂಸ್ಥೆಗಳು, ಬ್ಯಾಂಕ್ಗಳು ಖಾಸಗಿ ಫೈನಾನ್ಸ್ಗಳು, ವಿಮಾ ಕಂಪೆನಿಗಳು ಹುಟ್ಟಿಕೊಂಡಿವೆ. ತಂತ್ರಜ್ಞಾನವೂ ಮುಂದುವರೆದಿದೆ. ಅಕ್ಷರಗಳಿಗೆ ಕಾಯಬೇಕಾದ ಅಗತ್ಯವಿಲ್ಲ. ದೂರ
ದೂರದಲ್ಲಿರುವವರ ಧ್ವನಿ ಕೇಳಬಹುದು, ಕ್ಷಣಾರ್ಧದಲ್ಲಿ ಸಂದೇಶಗಳನ್ನು ವಾಟ್ಸ್ಆ್ಯಪ್, ಟೆಲಿಗ್ರಾಂನಂತಹ ಜಾಲತಾಣಗಳ ಮೂಲಕ ರವಾನಿಸಬಹುದು. ನೇರವಾಗಿ ಮುಖ ನೋಡುತ್ತಾ ಸಂಪರ್ಕ ಸಾಧಿಸಲು ವೀಡಿಯೋ ಕಾಲಿಂಗ್ ಸೌಕರ್ಯವಿದೆ. ಹೌದು ಈಗ ಎಲ್ಲವೂ ಬದಲಾಗಿದೆ. ಬದಲಾಗದೇ ಇರುವುದು ಮಾತ್ರ ಈಗಲೂ ಗ್ರಾಮಗಳಲ್ಲಿ ಅಳಿದುಳಿದಿರುವ ಅಂಚೇ ಇಲಾಖೆ ಹಾಗೂ ಅಂಚೆಯಣ್ಣನ ಕಷ್ಟ ಕಾರ್ಪಣ್ಯಗಳು.
ಗ್ರಾಮೀಣ ಪ್ರದೇಶದಲ್ಲಿ ಅಂಚೆ ಸೇವೆ ಸಲ್ಲಿಸುತ್ತಿರುವ ನೌಕರರ ಕೆಲಸವನ್ನು ಕಾಯಂಗೊಳಿಸಬೇಕು ಜೊತೆಗೆ ವೇತನ ತಾರತಮ್ಯ ನಿವಾರಿಸಿ, ಕಮಲೇಶ್ಚಂದ್ರ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ್ ಅಂಚೆ ಇಲಾಖೇತರ ನೌಕರರ ಸಂಘದ ಸದಸ್ಯರು ಕಳೆದ ವರ್ಷ ಪ್ರಧಾನ ಅಂಚೆ ಕಚೇರಿ ಎದುರು ಅನಿರ್ಧಿಷ್ಟ ಧರಣಿ ನಡೆಸಿದ್ದರು. ಈ ನೌಕರರು ಈ ಹಿಂದೆಯೂ ಅನೇಕ ಬಾರಿ ಬೀದಿಗಿಳಿದಿದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ.
ಅಂಚೆ ಸಿಬ್ಬಂದಿಗಳ ಸಂಕಷ್ಟಗಳ ಪಟ್ಟಿ ಹೇಳುತ್ತಾ ಹೋದರೆ ಮುಗಿಯುವಂತದ್ದಲ್ಲ. 1985 ರಿಂದ ಅಂಚೆ ಇಲಾಕೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ನೀಡುತ್ತಿದ್ದ ವೇತನ 10 ಸಾವಿರ ಚಿಲ್ಲರೆ. ದುರಂತವೆಂದ್ರೆ ನಿವೃತ್ತಿ ಹೊಂದುವ ತನಕ ಈ ಸಿಬ್ಬಂದಿಗಳಿಗೆ ಯಾವುದೇ ಪ್ರಾವಿಡೆಂಟ್ ಫಂಡ್ ನೀಡೋದಿಲ್ಲ. ಅಷ್ಟೆ ಅಲ್ಲ ನಿವೃತ್ತಿಯ ಬಳಕ ಪೆನ್ಷನ್ ಸಹ ಬರೋದಿಲ್ಲ. ಕಳೆದ 20 ವರ್ಷಗಳಿಂದಲೂ ಗ್ರಾಮೀಣ ಅಂಚೆ ಸಿಬ್ಬಂಧಿಗಳಿಗೆ ಒಂದು ರೀತಿಯ ವೇತನವಾದ್ರೆ ನಗರ ಅಂಚೆ ಸಿಬ್ಬಂದಿಗಳಿಗೆ ಒಂದು ರೀತಿಯ ವೇತನ ನೀಡಲಾಗ್ತಿದೆ. ಭಾರತದಾದ್ಯಂತ ಎಲ್ಲಾ ಅಂಚೆ ಕಚೇರಿಗಳಲ್ಲಿ ಸುಮಾರು 2 ಲಕ್ಷದ 85 ಸಾವಿರ ಗ್ರಾಮೀಣ ಅಂಚೆ ಸಿಬ್ಬಂದಿಗಳಿದ್ದಾರೆ. ವೇತನ ವ್ಯವಸ್ಥೆಯ ತಾರತಮ್ಯದ ವಿರುದ್ದ ಲಕ್ಷಾಂತರ ಅಂಚೆ ಸಿಬ್ಬಂದಿಗಳು ಈ ಹಿಂದೆಯೂ ಅನೇಕ ಬಾರಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಈಗ ವೇತನವೇನೋ ಚೂರು ಹೆಚ್ಚಾಯಿತು ಆದರೆ ಶೋಷಣೆಯು ಅಷ್ಟೇ ಹೆಚ್ಚಾಗಿದೆ.
ಅಂಚೆ ಸಿಬ್ಬಂದಿಗಳಿಗೆ ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ನೀಡುವಂತೆ ಅಂಚೆ ಕಚೇರಿ ಸಿಬ್ಬಂದಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರತಿ ವರ್ಷವೂ ದೇಶಾದ್ಯಂತ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. 150 ವರ್ಷಗಳಿಂದ ಅಂಚೆ ಇಲಾಖೆ ಕಾರ್ಯ ನಿರ್ವಹಿಸ್ತಿದೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿನ ಸೇವೆ ಸಲ್ಲಿಸುತ್ತಿರುವವರನ್ನ ಕಾಯಂಗೊಳಿಸಿಲ್ಲ. ಇದು ಗ್ರಾಮೀಣ್ ಡಾಕ್ ಸೇವಕ್ ಅಥವಾ ಜಿಡಿಎಸ್ ನೌರರರು ಎದುರಿಸುತ್ತಿರುವ ದೀರ್ಘಕಾಲದ ಸಂಕಷ್ಟ.
ಕಮಲೇಶ್ ಚಂದ್ರ ಸಮಿತಿ ದೇಶದಾದ್ಯಂತ ಗ್ರಾಮೀಣ ಡಾಕ್ ಸೇವಕರ ಸ್ಥಿತಿಗತಿ ಬಗ್ಗೆ ತನ್ನ ಸಮಗ್ರ ವರದಿಯನ್ನು ಸಲ್ಲಿಸಿ, ಗ್ರಾಮೀಣ ಅಂಚೇ ನೌಕರರ ವ್ಯಥೆಯನ್ನು ವಿಶದಪಡಿಸಿತ್ತು. ಕಮಲೇಶ್ ಚಂದ್ರ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಗ್ರಾಮೀಣ ಅಂಚೆ ನೌಕರರು ಮಾಡಿದ ಹಲವು ಆಂದೋಲನಗಳನ್ನು ಸರಕಾರ ಪರಿಗಣಿಸದೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಲೇ ಬಂದಿದೆ. ಅಂಚೇ ನೌಕರರ ವೇತನ ವ್ಯವಸ್ಥೆಯಲ್ಲೇ ಮಲತಾಯಿ ಧೋರಣೆ ತಾಳಲಾಗಿದೆ. ಪಟ್ಟಣ ಹಾಗೂ ಮಹಾನಗರಗಳಲ್ಲಿ ಕಾರ್ಯ ನಿರ್ವಹಿಸುವ ಅಂಚೇ ನೌಕರರ ಕಣ್ಣಿಗೆ ಬೆಣ್ಣೆ ಬಿದ್ದರೆ, ಗ್ರಾಮಗಳ ಅಂಚೇ ನೌಕರರ ಕಣ್ಣಿಗೆ ಸುಣ್ಣ.
ನೇರವಾಗಿ ಕೇಂದ್ರ ಸರ್ಕಾರದ ಅಧೀನಕ್ಕೊಳಪಡುವ ಅಂಚೇ ಇಲಾಖೆಯ ವೇತನ ಪದ್ದತಿಯ ಬಗ್ಗೆ ದಶಕಗಳಿಂದಲೂ ತೀವ್ರ ಅಸಮಧಾನವಿದೆ. ಅಂಚೇ ಇಲಾಖೆಯ ನಗರ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುವವರು ಮತ್ತು ಗ್ರಾಮೀಣ ನೌಕರರ ವೇತನ ಸೌಕರ್ಯದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಕೇಂದ್ರ ಸ್ಪಷ್ಟವಾಗಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಾಡುವ ಕೆಲಸ ಒಂದೇ ಆದ್ರೂ ಪಡೆದುಕೊಳ್ಳು ಸಂಬಳ ಮಾತ್ರ ಬೇರೆ ಬೇರೆ.. ಅಷ್ಟಾಗಿ ನಿವೃತ್ತಿಯ ಬಳಿಕ ಗ್ರಾಮೀಣ ಅಂಚೇ ನೌಕರರಿಗೆ ಯಾವುದೇ ಸೌಕರ್ಯಗಳೂ ಇಲ್ಲ. ಕೇಂದ್ರದ ತಾರತಮ್ಯ ನೀತಿಯನ್ನು ವಿರೋಧಿಸಿ ಕಳೆದ ಹತ್ತು ವರ್ಷಗಳಿಂದ ಪ್ರತಿಭಟನೆ ಹೆಚ್ಚಾಗಿದೆ.
ನಗರ ಪ್ರದೇಶದ ಅಂಚೇ ಇಲಾಖೆಯಲ್ಲಿರುವಷ್ಟೇ ಸೇವೆಗಳು ಗ್ರಾಮೀಣ ಪ್ರದೇಶದಲ್ಲಿವೆ. ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಪೋಸ್ಟಲ್ ಕಾರ್ಡ್, ಇನ್ಷೂರೆನ್ಸ್, ಡೆಪಾಸಿಟ್ ಎಲ್ಲ ಸೇವೆಗಳೂ ನಗರದಲ್ಲಿ ಹಾಗೂ ಗ್ರಾಮಗಳಲ್ಲಿ ಒಂದೇ. ಆದ್ರೆ ನಗರದ ಅಂಚೇ ನೌಕರರು ಐದಂಕಿ, ಆರಂಕಿ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಪಿಂಚಣಿ, ಪ್ರಾವಿಡೆಂಟ್ ಫಂಡ್, ಗ್ರಾಚ್ಯೂಟಿ, ಫ್ಯಾಮಿಲಿ ಇನ್ಷೂರೆನ್ಸ್, ಮುಂತಾದ ಸೌಕರ್ಯಗಳು ಮಾತ್ರ ನಗರ ಪ್ರದೇಶಗಳ ಅಂಚೇ ನೌಕರರಿಗೆ ಸೀಮಿತವಾಗಿವೆ. ಗ್ರಾಮೀಣ ಅಂಚೆಯಣ್ಣ ಮಾತ್ರ ಬ್ರಿಟೀಶ್ರು ನಿಗದಿ ಮಾಡಿದ್ದ ಬಾದರಾಯಣ ಕಾಲದ ವೇತನ ವ್ಯವಸ್ಥೆಯಲ್ಲೇ ದಿನ ದೂಡುತ್ತಿದ್ದಾರೆ.
1868ರಲ್ಲಿ ಬ್ರಿಟೀಷ್ ಆಡಳಿತ ಸರ್ಕಾರದ ಅಡಿಯಲ್ಲಿ ಗ್ರಾಮೀಣ, ಪಟ್ಟಣ, ನಗರ, ಕೇಂದ್ರ ಅಂಚೆ ಕಚೇರಿಗಳನ್ನ ಸ್ಥಾಪಿಸಲಾಯ್ತು. ಅಂದಿನಿಂದ 1990ರ ತನಕ ಅಚ್ಚು ಕಟ್ಟಾಗಿ ನಡೆದುಕೊಂಡು ಬಂದ ಅಂಚೆ ಇಲಾಖೆಯ ಕೆಲಸಗಳು ತಂತ್ರಜ್ಞಾನದ ಕ್ರಾಂತಿಯ ನಂತರ ಮಂಕಾಗತೊಡಗಿದವು.
1977ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮತ್ತು ಜಸ್ಟೀಸ್ ತಲವಾರ್ ಸಮಿತಿಯ ವರದಿಯ ಅನುಸಾರ 5 ಗಂಟೆಗಿಂತ ಹೆಚ್ಚು ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಅಂಚೆ ಇಲಾಖೆಯ ಕಾಯಂ ನೌಕರರನ್ನಾಗಿ ಮಾಡಬೇಕು ಎಂದು ಆಜ್ಞೆ ಹೊರಡಿಸಿತ್ತು. ಇನ್ನು ಕಮಲೇಶ್ ಚಂದ್ರ ಸಮಿತಿ ಜಿಡಿಎಸ್ ಅಂಚೆ ಕಚೇರಿಗಳ ಆಧಾರದ ಮೇಲೆ ಒಂದು ವರದಿಯನ್ನ ಸಿದ್ಧ ಪಡಿಸಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಈಡೇರಿಸುವಂತೆ ಸಮಿತಿ ಆಗ್ರಹಿಸಿತ್ತು.
ಜಿ.ಡಿಎಸ್ ಪೋಸ್ಟ್ ಕಛೇರಿಗೆ ಆದಾಯ ಉತ್ಪಾದನಾ ಮಾನದಂಡಗಳ ಆಧಾರದ ಮೇಲೆ A, B, C ಮತ್ತು D ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ವಿಭಾಗದಲ್ಲಿನ ಜಿಡಿಎಸ್ ಪೋಸ್ಟ್ ಆಫೀಸ್ 100% ಆದಾಯ ನಿಯಮವನ್ನು ಸಾಧಿಸುತ್ತೆ. ಜಿಡಿಎಸ್ ಪೋಸ್ಟ್ ಕಛೇರಿಗಳ ಪ್ರತಿಯೊಂದು ವರ್ಗಕ್ಕೆ ಸಮಿತಿ ಶಿಫಾರಸು ಮಾಡಿದೆ. ಜಿಡಿಎಸ್ನ ಆರು ಅನುಮೋದಿತ ವಿಭಾಗಗಳನ್ನು ಎರಡು ವರ್ಗಗಳಾಗಿ ಮಾತ್ರ ಸೇರಿಸಲಾಗುತ್ತೆ.
ಒಂದು ವಿಭಾಗವು ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿದ್ದು, ಮತ್ತೊಂದು ಜಿಡಿಎಸ್ ಪೋಸ್ಟ್ ಕಛೇರಿಗಳಲ್ಲಿ ಕೆಲಸ ಮಾಡುವ ಜಿಡಿಎಸ್ಗಳು ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಎಂದು ಕರೆಯಲ್ಪಡುತ್ತವೆ. ಇಲಾಖೆಯ ಪೋಸ್ಟ್ ಆಫೀಸ್ ಗಳಲ್ಲಿ ಕೆಲಸ ಮಾಡುವವರು ಡಾಕ್ ಸೇವಕ್ (ಡಿಎಸ್) ಎಂದು ಕರೆಯುತ್ತಾರೆ. ಅಸಲಿ ಸಮಸ್ಯೆ ಇರೋದೆ ಈ ಡಾಕ್ ಸೇವಕ್ ಹುದ್ದೆಯಲ್ಲಿ.
ಕಮಲೇಶ್ ಚಂದ್ರ ವರದಿಯಲ್ಲಿ ಇದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿದ್ದು ಜಿಡಿಎಸ್ ಪೋಸ್ಟ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಡಾಕ್ ಸೇವಕರಿಗೆ ಕನಿಷ್ಠ ವೇತನವನ್ನು ಶೇ 3ರಂತೆ ರೂ.10000 ದಿಂದ 35480 ಹೆಚ್ಚಳ ಮಾಡಬೇಕು ಎಂಬುದಾಗಿ ಉಲ್ಲೇಖಿಸಿದ್ರು. ಜಿಡಿಎಸ್ ಪೋಸ್ಟ್ ಕಛೇರಿಗಳಿಗೆ ಕಡ್ಡಾಯ ನಿವಾಸ, ಕಛೇರಿ ನಿರ್ವಹಣೆ, ಮೊಬೈಲ್ ಮತ್ತು ವಿದ್ಯುತ್ ಬಳಕೆಯ ಶುಲ್ಕಗಳು ಇತ್ಯಾದಿ ಸೌಲತ್ತುಗಳನ್ನು ಒದಗಿಸಲು ಅನೋದಿಸಲಾಗಿತ್ತು.
ಡಾಕ್ ಸೇವಕರ ಮಕ್ಕಳ ಶಿಕ್ಷಣ ಮಂಜೂರಾತಿ ವರ್ಷಕ್ಕೆ ಪ್ರತಿ ಮಗುವಿಗೆ 6000 ನೀಡುವಂತೆ ಮನವಿ ಮಾಡಲಾಗಿತ್ತು. ಜಿಡಿಎಸ್ ವಿಶೇಷ ಪ್ರದೇಶಗಳಲ್ಲಿ ಕೆಲಸ ಮಾಡುವ ಜಿಡಿಎಸ್ಗೆ ತಿಂಗಳಿಗೆ 500 ನೀಡಬೇಕು ಎಂಬುದಾಗಿ ಸೂಚಿಸಲಾಗಿತ್ತು.12 ವರ್ಷಗಳ, 24 ವರ್ಷಗಳು ಮತ್ತು 36 ವರ್ಷಗಳ ಸೇವೆಗಳಲ್ಲಿ ಎರಡು ಮುಂಗಡ ಹೆಚ್ಚುವರಿ ವಾರ್ಷಿಕ ಹೆಚ್ಚಳದ ರೂಪದಲ್ಲಿ ಹಣಕಾಸು ಅಪ್-ಗ್ರೇಡ್ ಅನ್ನು ಕಮಲೇಶ್ ಚಂದ್ರ ವರದಿಯಲ್ಲಿ ಪರಿಗಣಿಸಲಾಗಿತ್ತು.
ಕಮಲೇಶ್ಚಂದ್ರ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ಅದರ ಬಗ್ಗೆ ಸೊಲ್ಲೆತ್ತುತ್ತಿಲ್ಲ ಅನ್ನೋದು ಗ್ರಾಮೀಣ ನೌಕರರ ಅಳಲು. ಒಂದು ವೇಳೆ ಕಮಲೇಶ್ಚಂದ್ರ ವರದಿ ಅನುಷ್ಟಾನವಾದ್ರೆ ಇಷ್ಟು ಕಾಲದ ಕಷ್ಟ ತೀರುತ್ತದೆ ಅನ್ನುವ ಭರವಸೆಯಲ್ಲಿದ್ದಾರೆ ಈ ನೌಕರರು. ಅಷ್ಟಕ್ಕೂ ಈ ಸಮಿತಿಯ ವರದಿಯಲ್ಲಿರುವ ಅಂಶಗಳೇನು ಗೊತ್ತಾ?
ಕಮಲೇಶ್ಚಂದ್ರ ಸಮಿತಿ ವರದಿಯ ಪ್ರಮುಖ ಶಿಫಾರಸ್ಸುಗಳು:
* ತುರ್ತಾಗಿ 30 ವರ್ಷಗಳಿಂದ ಕನಿಷ್ಟ ವೇತನ ಪಡೆಯುತ್ತಿರುವ ನೌಕರರ ವೇತನ ಹೆಚ್ಚಳ
* 12 ವರ್ಷ, 24 ವರ್ಷ ಹಾಗೂ 36 ವರ್ಷಗಳಷ್ಟು ಹಿರಿಯ ನೌಕರರ ಸಂಭಳ, ಭತ್ಯೆ ಹೆಚ್ಚಳ
* ಕನಿಷ್ಟ ಮಾಸಿಕ ಸಂಬಳವನ್ನು ರೂ 10000ದಿಂದ ರೂ 35480ಕ್ಕೆ ಏರಿಸಬೇಕು
* ವಾರ್ಷಿಕ ಶೇ.3% ರಷ್ಟು ವೇತನ ಹೆಚ್ಚಳ
* ಜಿಡಿಎಸ್ ನೌಕರರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವೆಂದಾಗಿ ವಾರ್ಷಿಕ 6000 ನೀಡಬೇಕು
* ಹೊಸ ಶಿಫಾರಸ್ಸಿನಂತೆ ಪ್ರತೀ ತಿಂಗಳು ವಿಶೇಷ ಭತ್ಯೆಯಾಗಿ 500 ರೂ ಪಾವತಿಸಬೇಕು
* 50 ಸಾವಿರದಿಂದ ದಿಂದ 5ಲಕ್ಷದವರೆಗೆ ಗ್ರೂಪ್ ಇನ್ಷೂರೆನ್ಸ್ ಸೌಕರ್ಯ
* ಸರ್ಕಲ್ ವೆಲ್ಫೇರ್ ಫಂಡ್ ಶೇ 10%ರಷ್ಟು ಏರಿಕೆ
* ನಿವೃತ್ತಿಯ ವರ್ಷ 65ಕ್ಕೆ ನಿಗದಿ
* ವೇತನ ಪಾವತಿ ಹಾಗೂ ಇನ್ನಿತರೆ ಕೆಲಸಗಳಿಗೆ ಆನ್ಲೈನ್ ವ್ಯವಸ್ಥೆ
ವರದಿಯಲ್ಲಿ ಜಿಡಿಎಸ್ ಗ್ರೂಪ್ ವಿಮೆ ಯೋಜನೆಯ ವ್ಯಾಪ್ತಿಯನ್ನು ರೂ. 50ಸಾವಿರ ದಿಂದ 5 ಲಕ್ಷದವರೆಗೆ ನೀಡುವಂತೆ ಮನವಿ ಮಾಡಲಾಗಿತ್ತು. ಸರ್ಕಲ್ ವೆಲ್ಫೇರ್ ಫಂಡ್ನಲ್ಲಿ ಇಲಾಖೆಯ ಕೊಡುಗೆ ರೂ. 100 ರಿಂದ 300 ರೂಪಾಯಿ ವರ್ಷಕ್ಕೆ ನೀಡುತ್ತಿದ್ದು ಅದನ್ನ 10 % ರಷ್ಟು ಏರಿಕೆ ಮಾಡುವಂತೆ ಸಮಿತಿ ಶಿಫಾರಸ್ಸು ಮಾಡಿತ್ತು.
ಇನ್ನು ಇದೇ ವರದಿಯಲ್ಲಿ ಸರ್ಕಲ್ ವೆಲ್ಫೇರ್ ಫಂಡ್ ನಿಂದ ಡಿ.ಎಸ್ ನೌಕರರಿಗೆ ಸಾಲ ಸೌಲಭ್ಯ ನೀಡುವಂತೆ ವರದಿ ಸೂಚಿಸಿತ್ತು. ಸರ್ಕಲ್ ವೆಲ್ಫೇರ್ ಫಂಡ್ಗಳಲ್ಲಿ ಹಣಕಾಸಿನ ಅನುದಾನ ಮತ್ತು ಸಹಾಯಕಗಳ ನಿಗದಿತ ಮಿತಿಗಳಲ್ಲಿ 10% ಹೆಚ್ಚಳಕ್ಕೆ ಸಹ ಸಮಿತಿಯು ಶಿಫಾರಸು ಮಾಡಿತ್ತು. ಅಲ್ಲದೆ ಮಹಿಳಾ ಜಿಡಿಎಸ್ ನೌಕರರಿಗೆ 26 ವಾರಗಳ ಸಂಬಳ ಸಹಿತ ಪ್ರಸವ ರಜೆಗೆ ಶಿಫಾರಸು ಮಾಡಲಾಗಿತ್ತು.
ಹೀಗೆ ಜಿಡಿಎಸ್ ಮತ್ತು ಡಿಎಸ್ ನೌಕರರಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನ ಈ ಕಮಲೇಶ್ ಚಂದ್ರ ವರದಿಯಲ್ಲಿ ಹೇಳಲಾಗಿತ್ತು.. ವೇತನ ಕಡಿತ ನಿಲ್ಲಿಸುವುದು, ಆರೋಗ್ಯ ವಿಮೆ, ಇಎಸ್ ಐ ಮತ್ತು ಪಿಎಫ್, ಪಿಂಚಣಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ನಿರಂತರವಾಗಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಆದರೂ ಕೇಂದ್ರದಲ್ಲಿ ಕುಳಿತ ದೊಡ್ಡ ಪ್ರಭುಗಳ ಕಣ್ಣು ಮಾತ್ರ ತೆರೆದಿಲ್ಲ.
ಅಂಚೆಯಣ್ಣನ ಕೆಲಸ ಹೇಳಿಕೊಳ್ಳೋಕೆ ಕೇಂದ್ರ ಸರ್ಕಾರಿ ನೌಕರ. ಆದ್ರೆ ಬರುವ ಪಗಾರ ಮಾತ್ರ ದಿನಗೂಲಿಯ ಕಾರಕೂನನಿಗಿಂತ ಕಡೆ. ಗ್ರಾಮೀಣ ಪ್ರದೇಶದ ಅಂಚೇ ನೌಕರರೂ ಮನುಷ್ಯರು, ಅವರಿಗೂ ಕಷ್ಟ ಕಾರ್ಪಣ್ಯಗಳಿರುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಸರ್ಕಾರ ಇನ್ನೂ ಮೀನಾ ಮೇಶ ಎಣಿಸುತ್ತಿದೆ. ಕಳೆದ ವರ್ಷ ಗ್ರಾಮೀಣ ಅಂಚೇ ಇಲಾಖೆಯ ಪ್ರತಿಭಟನೆಯ ನಂತರ ಒಂದಷ್ಟು ಕಣ್ಣೊರೆಸುವ ತಂತ್ರವೇನೋ ಆಯಿತು. ಆದರೆ ವೇತನ ಪರಿಷ್ಕರಣೆಯ ಬೆನ್ನಲ್ಲೆ ಅಧಿಕ ಕಾರ್ಯಭಾರದ ಹೊರೆಯನ್ನೂ ಹೊರಿಸಿತು. ಗ್ರಾಮೀಣ ಅಂಚೇ ನೌಕರರಿಗೆ ನೀಡಲಾಗಿರುವ ಅತ್ಯಾಧುನಿಕ ಸಾಫ್ಟ್ ವೇರ್ ಡಿವೈಸ್ ವರ್ಷದಲ್ಲಿ ಮುಕ್ಕಾಲು ವಾಸಿ ದಿನ ಕೆಲಸ ಮಾಡದೇ ಕೈಕೊಡುತ್ತದೆ. ಇದರ ಬಳಕೆಯ ಸರಿಯಾದ ತರಬೇತಿ ಮತ್ತು ತಕ್ಷಣಕ್ಕೆ ರಿಪೇರಿ ಮಾಡಬಹದಾದ ಸೌಕರ್ಯವಿಲ್ಲದೇ ಡಾಕ್ ಸೇವಕ್ ಸಿಬ್ಬಂದಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಹೋಗಲಿ ಕಮಲೇಶ್ ಚಂದ್ರ ವರದಿಯ ಅಂಶಗಳಾದರೂ ಪೂರ್ಣ ಅನುಷ್ಟಾನವಾಯಿತಾ ಎಂದರೆ ಅದೂ ಇಲ್ಲ. ಈಗ ಕರೋನಾ ಕಷ್ಟ ಕಾಲದಲ್ಲೂ ಅಂಚೇ ನೌಕರರು ತಮ್ಮ ನೆಮ್ಮದಿ ನಿದ್ದೆ ತೊರೆದು ಕೆಲಸ ಮಾಡುತ್ತಿದ್ದಾರೆ. ಈಗಲಾದರೂ ಈ ಬಡಪಾಯಿಗಳಿಗೆ ಸರ್ಕಾರ ನೆರವು ನೀಡಿದರೆ ಮಹದುಪಕಾರವಾಗುತ್ತದೆ.
-ವಿಭಾ (ವಿಶ್ವಾಸ್ ಭಾರದ್ವಾಜ್)








