ಚಿತ್ರದುರ್ಗ: ಮಗ, ಸೊಸೆ, ಮೊಮ್ಮಗ ಸೇರಿದಂತೆ ಮನೆ ಮಂದಿಯೆಲ್ಲಾ ಮಹಾಮಾರಿ ಕೊರೊನಾ ಸೊಂಕಿನಿಂದ ಬಳಲುತ್ತಿರು. ಕೊನೆಗೆ ಮನೆಯಲ್ಲಿದ್ದ 96ರ ಹರೆಯದ ಅಜ್ಜಿಯನ್ನೂ ಬಿಡಲಿಲ್ಲ. ಕೇವಲ 12 ದಿನಗಳಲ್ಲೇ 96ರ ವೃದ್ಧೆ ಗೋವಿಂದಮ್ಮ ಕೊರೊನಾ ಗೆದ್ದು ಬಂದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ವೇದಾವತಿ ಬಡಾವಣೆಯ ನಿವಾಸಿಯಾಗಿರುವ ವೃದ್ಧೆ ಗೋವಿಂದಮ್ಮಗೆ ಜೂನ್ 26ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
12 ದಿನಗಳ ಚಿಕಿತ್ಸೆ ಬಳಿಕ ಗೋವಿಂದಮ್ಮ ಪೂರ್ಣ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಅಜ್ಜಿಯನ್ನು ಸಂತೋಷದಿಂದಲೇ ಬೀಳ್ಕೊಟ್ಟಿದ್ದಾರೆ.

ಅಜ್ಜಿ ಕೊರೊನಾ ಗೆದ್ದಿದ್ದು ಹೇಗೆ..!
ವೃದ್ಧೆ ಗೋವಿಂದಮ್ಮ ಅವರ ಪುತ್ರ ಹಾಗೂ ಸೊಸೆ ಹಾಗೂ ಮೊಮ್ಮಗನಿಗೆ ಕೊರೊನಾ ಸೋಂಕು ಬಂದಿತ್ತು. ವೈದ್ಯರೊಬ್ಬರ ಸಂಪರ್ಕದಿಂದ ವೃದ್ಧೆಯ 27 ವರ್ಷದ ಮೊಮ್ಮಗನಿಗೆ ಸೋಂಕು ಕಾಣಿಸಿಕೊಂಡಿತ್ತು. ನಂತರ 64 ವರ್ಷದ ಮಗನಿಗೂ ಕೋವಿಡ್ ಇರುವುದು ದೃಢಪಟ್ಟಿತ್ತು. ಮನೆಯಲ್ಲೇ ಇದ್ದ 19 ವರ್ಷದ ಮತ್ತೋರ್ವ ಮೊಮ್ಮಗನಲ್ಲೂ ಸೋಂಕು ಪತ್ತೆಯಾಗಿತ್ತು. ಧರ್ಮಪುರ ಕೋವಿಡ್ ಕೇರ್ ಸೆಂಟರ್ಗೆ ಇಬ್ಬರು ಪುತ್ರರು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಜ್ಜಿಯ 56 ವರ್ಷದ ಮಗ ದಾಖಲಾಗಿದ್ದರು.
ಹೀಗಾಗಿ ಕುಟುಂಬ ಸದಸ್ಯರಿಗೆ ಸಹಜವಾಗಿಯೇ ಆತಂಕವಾಗಿತ್ತು. ನಂತರ 96 ವರ್ಷದ ಗೋವಿಂದಮ್ಮಗೆ ಜ್ವರ ಬಾಧಿಸಿತು. ಗಂಟಲು ಮಾದರಿ ಪರೀಕ್ಷಿಸಿದಾಗ ಸೊಸೆಗೂ ಸೋಂಕು ಅಂಟಿತ್ತು.
96 ವರ್ಷದ ಅತ್ತೆಯೊಂದಿಗೆ ಕೋವಿಡ್ ಆಸ್ಪತ್ರೆ ಸೇರಿದ್ದ ಸೊಸೆ, ಒಂದೇ ಕೊಠಡಿಯಲ್ಲಿ ಚಿಕಿತ್ಸೆಗೆ ದಾಖಲಾದರು. ಇಬ್ಬರೂ ಒಂದೆಡೆ ಇರುವುದು ಕಷ್ಟವಾಯಿತು. ದಿನ ಕಳೆದಂತೆ ರೂಢಿ ಆಯಿತು. ನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ಇಬ್ಬರಿಗೂ ಮಾತ್ರೆ ನೀಡಲಾಗುತ್ತಿತ್ತು. ಆಸ್ಪತ್ರೆ ಸಿಬ್ಬಂದಿ ನಿತ್ಯ ಕೊಠಡಿಗೆ ಧಾವಿಸಿ ಆರೋಗ್ಯ ಪರೀಕ್ಷಿಸುತ್ತಿದ್ದರು. ಏಳನೇ ದಿನ ಮತ್ತೊಮ್ಮೆ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷಿಸಿದಾಗ ಸೋಂಕು ಕಾಣಿಸಿಕೊಳ್ಳಲಿಲ್ಲ. ಮತ್ತೆರಡು ದಿನ ನಿಗಾದಲ್ಲಿ ಇಟ್ಟುಕೊಂಡ ವೈದ್ಯರು, ಬಳಿಕ ಮನೆಗೆ ಕಳುಹಿಸಿದರು ಎನ್ನುತ್ತಾರೆ ಗೋವಿಂದಮ್ಮರ ಸೊಸೆ.

ಇದೊಂದು ಸಾಮಾನ್ಯ ಕಾಯಿಲೆ. ಸೋಂಕು ಕಾಣಿಸಿಕೊಂಡವರು ಖಂಡಿತ ಹೆದರುವ ಅಗತ್ಯವಿಲ್ಲ. ಸಕಾಲಕ್ಕೆ ಚಿಕಿತ್ಸೆ ಪಡೆದರೆ ಗುಣಮುಖರಾಗಿ ಮನೆಗೆ ಮರಳಬಹುದು ಎನ್ನುತ್ತಾರೆ ಅಜ್ಜಿಯ ಸೊಸೆ.
ಅಜ್ಜಿಗೆ ಅಭಿನಂದನೆ ತಿಳಿಸಿದ ಸಚಿವ ಸುಧಾಕರ್
ಕೋವಿಡ್ ಗೆದ್ದು ಬಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ 96ರ ಹರೆಯದ ಗೋವಿಂದಮ್ಮ ಅವರಿಗೆ ಅಭಿನಂದನೆಗಳು. ತಮ್ಮ ಧೈರ್ಯ ಮತ್ತು ಜೀವನೋತ್ಸಾಹಗಳಿಂದ ರಾಜ್ಯದ ಜನರಿಗೆ ಆದರ್ಶರಾಗಿದ್ದಾರೆ.
ಅಂಜಿಕೆ ಅಥವಾ ಆತಂಕದಿಂದ ಕೊರೋನಾ ಗೆಲ್ಲಲಾಗದು. ಆತ್ಮವಿಶ್ವಾಸ, ಸೂಕ್ತ ವೈದ್ಯಕೀಯ ಶುಶ್ರೂಷೆಗಳಿಂದ ಕೊರೋನಾ ಸೋಂಕಿನಿಂದ ಗುಣಮುಖರಾಗಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಟ್ವಿಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.









